ನೆನಹೆಂಬ ಕುಂಟಿಣಿ : ಅಕ್ಕ ಮಹಾದೇವಿ #50

 ಒಪ್ಪಿತವಾದ ನೈತಿಕ ಚೌಕಟ್ಟನ್ನು ಹೀಗೆ ಅನುಭವ ಸತ್ಯವಾಗಿ ಗ್ರಹಿಸುವುದೇ, ಅದನ್ನು ಮುಕ್ತವಾಗಿ ಹೇಳುವ ಅವಕಾಶವಿದ್ದುದೇ ವಚನಗಳು ಸಾಧಿಸಿದ ʻಕ್ರಾಂತಿʼ ಅನಿಸುತ್ತದೆ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ

ತಾನು ದಂಡುಮಂಡಲಕ್ಕೆ ಹೋದಹೆನೆಂದಡೆ
ನಾನು ಸುಮ್ಮನಿಹೆನಲ್ಲದೆ
ತಾನೆನ್ನ ಕೈಯೊಳಗಿದ್ದು ತಾನೆನ್ನ ಮನದೊಳಗಿದ್ದು
ಎನ್ನ ಕೂಡದಿದ್ದಡೆ ನಾನೆಂತು ಸೈರಿಸುವೆನವ್ವಾ
ನೆನಹೆಂಬ ಕುಂಟಿಣಿ ಚೆನ್ನಮಲ್ಲಿಕಾರ್ಜುನನ ನೆರಹದಿದ್ದಡೆ ನಾನೇವೆ ಸಖಿಯೆ [೨೩೫]

[ಸುಮ್ಮನಿಹೆನಲ್ಲದೆ=ಸುಮ್ಮನಿರುವೆನಲ್ಲದೆ; ನೆನಹು=ನೆನಪು ಮತ್ತು ಧ್ಯಾನ ಎಂಬ ಎರಡು ಅರ್ಥಗಳಿವೆ; ಕುಂಟಿಣಿ=ವಿಟ ಮತ್ತು ವೇಶ್ಯೆಯರ ಸಂಬಂಧವನ್ನು ಏರ್ಪಡಿಸುವವಳು; ನೆರಹು=ಕೂಡು, ಕೂಡಿಸು; ಏವೆ=ಸಹಿಸಲಾರೆ ]

ದಂಡಿನ ಭಾಗವಾಗಿ ಯುದ್ದಕ್ಕೆ ಹೋದರೆ ಸಹಿಸುತ್ತೇನೆ, ಸುಮ್ಮನಿರುತ್ತೇನೆ. ನನ್ನ ಕೈಯೊಳಗಿದ್ದರೂ  ನನ್ನ ಮನಸಿನಲ್ಲಿದ್ದರೂ ಆದರೂ ನನ್ನ ಕೂಡದಿದ್ದರೆ ಸಹಿಸಲಾರೆ  ಗೆಳತೀ. ಸೇನೆಯ ಜೊತೆಗೆ ಯುದ್ಧಕ್ಕೆ ಹೋದರೆ ಸಹಿಸಬಲ್ಲೆ; ಅವನನ್ನು ಕೂಡಲಾಗದು ಅನ್ನುವುದನ್ನು ಒಪ್ಪುವೆ.  ನೆನಪು ಅಥವಾ ಧ್ಯಾನವೊಂದೇ ಮನಸಿನೊಳಗಿರುವ ಚೆನ್ನಮಲ್ಲಿಕಾರ್ಜುನನನೊಡನೆ ಸಂಬಂಧ ಕಲ್ಪಿಸಬಲ್ಲುದು. ಮನಸಿನೊಳಗೇ ಇರುವ ಕೈಯಳತೆಯಲ್ಲೇ ಇರುವ ಪ್ರಿಯನೊಡನೆ ಕೂಡುವಂತೆ ಮಾಡಲು ನೆನಪು ಅಥವಾ ಧ್ಯಾನವೆಂಬ ಕುಂಟಿಣಿಯ ಸಹಕಾರ ಬೇಕು. ಆ ಕುಂಟಿಣಿಯೂ  ಸಹಾಯ ಮಾಡದಿದ್ದರೆ ಹೇಗೆ ಸಹಿಸಲಿ?

ಒಳಗಣ ಗಂಡ, ಹೊರಗಣ ಮಿಂಡ [೨.೧೩೨], ಅತ್ಮ ಸಂಗಾತ, ಕನಸಿನಲ್ಲಿ ಕಾಣುವ ಕೆಂಜೆಡೆಗಳ ಸುಲಿಪಲ್ಲ ಗೊರವ ಮತ್ತೆ ಇಲ್ಲಿ ಬರುವ ದಂಡಿಗೆ ಹೋಗುವ ಅಥವಾ ಹತ್ತಿರವಿದ್ದರೂ ಕೂಡದ ಗಂಡು, ಅವನೊಡನೆ ಸಂಬಂಧ ಕಲ್ಪಿಸಲು ಒದಗಬೇಕಾದ ಕುಂಟಿಣಿ ಇಂಥ ರೂಪಕಗಳನ್ನು ಮತ್ತೆ ಮತ್ತೆ ಎದುರಾಗುತ್ತವೆ. ಈ ವಚನಗಳಲ್ಲಿ ಬರುವ ಚನ್ನಮಲ್ಲಿಕಾರ್ಜುನನು ಆತ್ಮಸಂಗಾತಿಯಷ್ಟೇ. ಅವನ ಸಂಬಂಧಕ್ಕೆ ಲೌಕಿಕ ನೀತಿ ಒಪ್ಪುವಂಥ ಗಂಡ-ಹೆಂಡತಿ ಅನ್ನುವ ಹಣೆಪಟ್ಟಿಗಳು ಬೇಕಾಗಿಲ್ಲ ಅನಿಸುತ್ತವೆ. ಒಪ್ಪಿತವಾದ ನೈತಿಕ ಚೌಕಟ್ಟನ್ನು ಹೀಗೆ ಅನುಭವ ಸತ್ಯವಾಗಿ ಗ್ರಹಿಸುವುದೇ, ಅದನ್ನು ಮುಕ್ತವಾಗಿ ಹೇಳುವ ಅವಕಾಶವಿದ್ದುದೇ ವಚನಗಳು ಸಾಧಿಸಿದ ʻಕ್ರಾಂತಿʼ ಅನಿಸುತ್ತದೆ. ಒಲುಮೆ ಒಚ್ಚತವಾಗಿ ಬದುಕುವುದು ಮುಖ್ಯ ಅನ್ನುವುದು ಬಹಳಷ್ಟು ಸಾರಿ ನಾವು ಅರಗಿಸಿಕೊಳ್ಳಲಾಗದ ಸತ್ಯವೇನೊ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.