ಇಲ್ಲವಾಗುವುದು ಮುಕ್ತಿ? : ಅಕ್ಕ ಮಹಾದೇವಿ #72

ನೀರಿನ ಉಪಮೆಯಿಂದ ಹುಟ್ಟುವುದು ಶುರುವಾಗಿ ಚೆನ್ನಮಲ್ಲಿಕಾರ್ಜುನನನ್ನು ಮುಟ್ಟಿ ಸುಟ್ಟು ಹೋದ ವೈರುಧ್ಯದವರೆಗೆ ಈ ವಚನ ಬೆಳೆಯುತ್ತದೆ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 6ಲಜ್ಜೆಯಳಿದು-ನಾನು ನೀನಾಗಿ

ಮುತ್ತು ನೀರಲಾಯಿತ್ತು
ವಾರಿಕಲ್ಲು ನೀರಲಾಯಿತ್ತು
ಉಪ್ಪು ನೀರಲಾಯಿತ್ತು
ಉಪ್ಪು ಕರಗಿತ್ತು
ವಾರಿಕಲ್ಲು ಕರಗಿತ್ತು
ಮುತ್ತು ಕರಗಿದುದನಾರೂ ಕಂಡವರಿಲ್ಲ
[ಈ ಸಂಸಾರಿಮಾನವರು ಲಿಂಗವಮುಟ್ಟಿ ಭವಭಾರಿಗಳಾದರು]
ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ  [೩೪೧]

[ವಾರಿಕಲ್ಲು=ಆಲಿಕಲ್ಲು; ಕರಿಗೊಂಡೆ=ಸುಟ್ಟು ಹೋದೆ]

ಮುತ್ತು ಹುಟ್ಟುವುದು ನೀರಿನಲ್ಲಿ, ಆಲಿಕಲ್ಲು ಹುಟ್ಟುವುದು ನೀರಿನಿಂದ, ಉಪ್ಪು ಆಗುವುದೂ ನೀರಿನಲ್ಲೇ. ಉಪ್ಪು, ಆಲಿಕಲ್ಲು ನೀರಿನಲ್ಲಿ ಕರಗುತ್ತವೆ. ಮುತ್ತು ಕರಗಿದ್ದನ್ನು ಯಾರೂ ಕಂಡವರಿಲ್ಲ. ನಾನು ನಿಮ್ಮನ್ನು ಮುಟ್ಟಿ ಸುಟ್ಟು ಭಸ್ಮವಾದೆ.

ಸಂಸ್ಕೃತದ ʻಮುಕ್ತ/ಕʼ ಕನ್ನಡದಲ್ಲಿ ಮುತ್ತು ಆಗುತ್ತದೆ. ಇಲ್ಲಿ ಅಕ್ಕಮಹಾದೇವಿಯ ವಚನ ನಾನು ಎಂಬುದು ಇಲ್ಲವಾದ ಸ್ಥಿತಿಯನ್ನು ಹೇಳುತ್ತಿದೆ. ನೀರಿನ ಉಪಮೆಯಿಂದ ಹುಟ್ಟುವುದು ಶುರುವಾಗಿ ಚೆನ್ನಮಲ್ಲಿಕಾರ್ಜುನನನ್ನು ಮುಟ್ಟಿ ಸುಟ್ಟು ಹೋದ ವೈರುಧ್ಯದವರೆಗೆ ಈ ವಚನ ಬೆಳೆಯುತ್ತದೆ.  ʻನಾನುʼ ಎಂಬುದು ಇಲ್ಲವಾಗಿ ಇರುವುದು ಅಪೇಕ್ಷಣೀಯ ಅನ್ನುವ ವಿಚಾರವನ್ನು ಈ ವಚನ ಹೇಳುವಂತಿದೆ.

ಅಲ್ಲಮನ ವಚನವೊಂದರಲ್ಲಿ [೨.೬೬೮] ʻಗುಹೇಶ್ವರನೈದಾನೆ ಇಲ್ಲದಂತೆʼ ಎಂಬ ಮಾತು ಬರುತ್ತದೆ. ಯಹೂದಿ ತತ್ವಜ್ಞಾನಿ ಸಿಮಿಯೊನ್‌ ವೇಲ್‌ [೧೯೦೯-೧೯೪೩] ದೇವರು ತನ್ನ ಸೃಷ್ಟಿಯಲ್ಲಿ ಇಲ್ಲವಾಗಿ ಮಾತ್ರ ಇರಬಲ್ಲ [““God can only be present in creation under the form of absence.”] ಅನ್ನುತ್ತಾಳೆ. ಮುಕ್ತಿ ಅನ್ನುವುದನ್ನು ಅಕ್ಕ ಮತ್ತು ಅಲ್ಲಮ ಇಬ್ಬರೂ ಇದೇ ರೀತಿಯಲ್ಲೇ ವಿವರಿಸುತ್ತಿದ್ದಾರೆ ಅನ್ನಿಸುತ್ತದೆ. ನೀರಿನಲ್ಲಿ ಕರಗುವ ಆಲಿಕಲ್ಲು, ಉಪ್ಪು, ಮತ್ತು ಸುಟ್ಟ ಬೂದಿ ಎರಡೂ ಇಲ್ಲವಾಗಿ ಇರುವ, ʻನಾನಿಲ್ಲವಾಗಿʼ ಅದಾಗಿ ಇರುವ ಸ್ಥಿತಿಯ ಚಿತ್ರಣ ಎಂದು ತೋರುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.