ಭೌತಿಕ ರೂಪದ ಮೋಹದಲ್ಲಿ ಮೈಮರೆತರೆ ನಾವೂ ನಾರ್ಸಿಸಸ್ನಂತೆ, ಫರೀದನ ಕತೆಯ ಹಕ್ಕಿಯಂತೆ ಕೊನೆಯಾಗಿಹೋಗ್ತೀವಿ. ಕೇವಲ ಹೊರಗಿನ ಆವರಣವನ್ನು ಪಡೆಯಲು ಹವಣಿಸುವ ನಾವು, ಅಂತಃಸತ್ವವನ್ನು ಸಾಕ್ಷಾತ್ಕರಿಸಿಕೊಳ್ಳುವ ನಮ್ಮ ಹುಟ್ಟಿನ ಮೂಲ ಉದ್ದೇಶವನ್ನೇ ಮರೆತುಬಿಡ್ತೀವಿ. ಪರಿಣಾಮ? ಕೆಲವೊಬ್ಬರು ಸತ್ತೇ ಹೋಗುತ್ತಾರೆ, ಕೆಲವರು ಬದುಕಿದ್ದೂ ಸತ್ತಂತೆ ಇರುತ್ತಾರೆ । ಚೇತನಾ ತೀರ್ಥಹಳ್ಳಿ
ಸೌಂದರ್ಯವನ್ನು ಆಸ್ವಾದಿಸುವ ಅಭಿರುಚಿ, ಸೌಂದರ್ಯವನ್ನು ಮೆಚ್ಚುವ ಗುಣ ಕೆಟ್ಟದೇನಲ್ಲ. ನಮ್ಮದೇ ರೂಪವನ್ನು ನಾವು ಮೆಚ್ಚುವುದು ಅಥವಾ ಮೋಹಿಸುವುದೂ ತಪ್ಪಲ್ಲ. ಆದರೆ ಈ ಮೆಚ್ಚುಗೆ, ಈ ಮೋಹ ಮಿತಿ ಮೀರಬಾರದು. ಯಾವುದೇ ಸಂಗತಿಯಂತೆ ಈ ಬಾಹ್ಯ ರೂಪದ ಮೋಹವೂ ನಮ್ಮನ್ನು ವಿನಾಶಕ್ಕೆ ತಳ್ಳುತ್ತದೆ. ಅದರಲ್ಲೂ ಆ ರೂಪ ನಮ್ಮದೇ ಆಗಿದ್ದಾಗ ಈ ವಿನಾಶ ಇನ್ನಷ್ಟು ದಾರುಣ. ಇದು ಇನ್ನೂ ಉಸಿರಿದ್ದಾಗಲೇ ನಮ್ಮ ಶವಪೆಟ್ಟಿಗೆಯ ಮೊಳೆ ನಾವೇ ಹೊಡೆದುಕೊಂಡಂತೆ. ಸೌಂದರ್ಯದ ಮೋಹ, ನಮ್ಮಲ್ಲಿ ಅದನ್ನು ಪಡೆದೇ ತೀರುವ ಹಠ ಹುಟ್ಟಿಸುತ್ತೆ. ನಮ್ಮೆದುರು ಕಾಣುತ್ತಿರುವ ರೂಪ ಮಿಥ್ಯೆಯೆಂದು ಅರಿಯದೇ ಹೋದರೆ ಮಿರರ್ ರೂಮಿನಲ್ಲಿ ನೂರಾರು ಬಿಂಬಗಳೆದ್ದು ಭ್ರಮೆ ಹುಟ್ಟಿಸುವಂತೆ ನಮ್ಮನ್ನು ಮಾಯೆ ಮುಸುಕುತ್ತದೆ. ನಾವೂ ಸೇರಿದಂತೆ ಸೃಷ್ಟಿಯ ಜಡ ಚೇತನಗಳೆಲ್ಲ ಪರಮ ಅಸ್ತಿತ್ವದ ಬಿಂಬಗಳಷ್ಟೇ. ಯಾವುದೇ ರೂಪ, ಯಾವುದೇ ಸೌಂದರ್ಯವೂ ಕೇವಲ ಬಿಂಬವೇ. ಅದನ್ನು ಮೋಹಿಸುವುದು, ಅದಕ್ಕಾಗಿ ಹಂಬಲಿಸುವುದು, ನಮ್ಮನ್ನು ನಮ್ಮ ಅಂತರಂಗದಿಂದ ದೂರ ಮಾಡಿಕೊಳ್ಳುವ ಮರುಳುತನವಷ್ಟೇ.
ಇದನ್ನು ಮನದಟ್ಟು ಮಾಡಿಸುವ ಎರಡು ಕತೆಗಳು ಇಲ್ಲಿವೆ…
~
ಮೊದಲನೆಯದು, ಗ್ರೀಕ್ ಪುರಾಣದಲ್ಲಿ ಬರೋ ನಾರ್ಸಿಸಸ್ನಕತೆ. ನಾರ್ಸಿಸಸ್ ಅನ್ನೋ ದೇವತೆ ಬಹಳ ಸುಂದರವಾಗಿರ್ತಾನೆ. ಆದ್ರೆ ಅವ್ನು ಯಾವತ್ತೂ ತನ್ನ ಮುಖಾನೇ ನೋಡ್ಕೊಂಡಿರಲ್ಲ. ಬೇರೆಯವರು ತನ್ನನ್ನ ಹೊಗಳೋದು ಕೇಳಿ ಅವನಿಗೆ ತನ್ನ ರೂಪದ ಬಗ್ಗೆ ಒಂಥರಾ ಅಹಂಕಾರ ಬೆಳೆದಿರತ್ತೆ. ಒಂದಿನ ನಾರ್ಸಿಸಸ್ ಒಂದು ಕೊಳದ ಬಳಿ ಬರ್ತಾನೆ. ಅದರೊಳಗೇನಿದೆ ಅಂತ ಹಣಕ್ತಾನೆ. ಕಂಡಿದ್ದೇನು? ಬಹಳ ಸುಂದರ ರೂಪದ, ಸದೃಢ ಮೈಕಟ್ಟಿನ ತರುಣ! ಮೊದಲ ನೋಟಕ್ಕೇ ಅವನಿಗೆ ಆ ರೂಪದ ಮೇಲೆ ಮೋಹ ಹುಟ್ಟಿಕೊಳ್ಳುತ್ತೆ. ಅವನನ್ನ ಪಡ್ಕೋಬೇಕು ಅನಿಸುತ್ತೆ. ಆ ಬಿಂಬದ ರೂಪವನ್ನೇ ನೋಡ್ತಾ, ನೀರೊಳಗಿರೋ ಅವನೂ ನನ್ನನ್ನೇ ನೋಡ್ತಿದಾನೆ, ಅವನಿಗೂ ನನ್ನ ರೂಪ ಇಷ್ಟವಾಗಿರಬೇಕು ಅಂದುಕೊಳ್ತಾನೆ. ‘ಮೇಲೆ ಬಾ’ ಅಂತ ಕರೀತಾನೆ. ಬಿಂಬವೂ ಅದೇ ಮಾತು ಹೇಳ್ತಿರೋ ಹಾಗೆ ಭಾಸವಾಗುತ್ತೆ. ಅವನು ಬರೋದನ್ನೆ ಕಾಯ್ತಾ, ಅವನ ಕಣ್ಣಲ್ಲೆ ಕಣ್ಣು ನೆಟ್ಟು ದಡದಲ್ಲಿ ಕುಳಿತುಬಿಡ್ತಾನೆ. ಬಿಂಬದ ತರುಣ ಮೇಲೆ ಬರೋದು ಹೇಗೆ? ನಾರ್ಸಿಸಸ್ಗೆ ಅವನನ್ನು ಬಿಟ್ಟು ಕದಲಲು ಮನಸೇ ಬರೋದಿಲ್ಲ. ನೀರಡಿಕೆಯಾಗುತ್ತೆ, ಹಸಿವಾಗುತ್ತೆ, ಚಳಿಯಾಗುತ್ತೆ, ಏನಾದ್ರೂ ಅವ್ನು ಅಲ್ಲಾಡೋದಿಲ್ಲ. ದಿನಗಳು ಕಳೆದು, ವಾರವೂ ಉರುಳುತ್ತೆ. ನಾರ್ಸಿಸಸ್ ಕೊಳದೊಳಗೆ ಬಾಗಿ ಕೈಚಾಚಿ ‘ಇನ್ನು ತಡೆಯಲು ಆಗೋದಿಲ್ಲ, ಬಂದುಬಿಡು’ ಅಂತ ಅಂಗಲಾಚ್ತಾನೆ. ಬಿಂಬವೂ ಕೈಚಾಚುತ್ತೆ. ನಾರ್ಸಿಸಸ್ ಅದನ್ನ ಆಹ್ವಾನ ಅಂದುಕೊಂಡು ಕೊಳಕ್ಕೆ ಜಿಗಿತಾನೆ. ಅದರಲ್ಲಿ ಮುಳುಗಿ ಜೀವ ಕಳೆದುಕೊಳ್ತಾನೆ.
~
ಇಂಥದೇ ಇನ್ನೊಂದು ಕತೆ, ಸೂಫಿ ಕವಿ ಫರೀದ್ ಉದ್ದೀನ್ ಅತ್ತಾರನ ಮಂತಿಕ್ ಅಲ್ ತೈರ್ (ಹಕ್ಕಿಗಳ ಸಮ್ಮೇಳನ) ಕೃತಿಯಲ್ಲಿದೆ.
ಅದೊಂದು ಸುಂದರವಾದ ಹಕ್ಕಿ. ಅದರ ಕಂಠವೂ ಅಷ್ಟೇ ಮಧುರ. ಅದಕ್ಕೆ ತನ್ನ ಮೇಲೆ ಇನ್ನಿಲ್ಲದ ಮೋಹ. ಒಂದು ದಿನ ಆ ಹಕ್ಕಿ ಬಾಯಾರಿ ಕೊಳವೊಂದರ ಬಳಿ ಬರುತ್ತೆ. ದಾಹದಿಂದ ಗಂಟಲು ಒಣಗಿ, ತಾಳಲಾರದೆ ಇನ್ನೇನು ಕೊಕ್ಕು ಇಳಿಸಬೇಕು, ಅಲ್ಲೊಂದು ಮಿರುಗುವ ಗರಿಗಳ, ಕೆಂಪು ಜುಟ್ಟಿನ, ನೀಲಿ ಕಂಗಳ ಸುಂದರ ರೂಪ! ಅದನ್ನು ಕಂಡ ಹಕ್ಕಿ, ಅದು ತನ್ನ ಪ್ರತಿಬಿಂಬವೆಂದು ಅರಿಯದೇ ಅದರ ಮೇಲೆ ಮೋಹಗೊಳ್ಳುತ್ತೆ. ನಾನೇ ಸುಂದರ ಅಂದರೆ ಇದು ನನಗಿಂತ ಸುಂದರವಾಗಿದೆ ಎಂದು ಅದನ್ನೆ ದಿಟ್ಟಿಸುತ್ತ ಕುಳಿತುಕೊಳ್ಳುತ್ತೆ. ದಿನ ಕಳೆದು ರಾತ್ರಿಯಾದರೂ ನೀರಡಿಕೆ ಮರೆತು, ಕಣ್ಣೆದುರೇ ನೀರಿದ್ದರೂ ಅದನ್ನು ಕುಡಿಯದೆ, ತನ್ನದೇ ಬಿಂಬವನ್ನು ಹೀರುತ್ತ ಉಳಿದುಬಿಡುತ್ತೆ. ಆ ನೀರಿನೊಳಗಿನ ಹಕ್ಕಿಯನ್ನು ಭೇಟಿಯಾಗಲು, ಅದನ್ನು ಮುಟ್ಟಲು ಹಂಬಲಿಸುತ್ತೆ. ಆದರೆ ಅದು ನೀರಿನ ಬಳಿ ಹೋದಾಗೆಲ್ಲಾ ರೆಕ್ಕೆಯ ಗಾಳಿ ಬೀಸಿ ಅಲೆಯೆದ್ದು ಬಿಂಬ ಮಾಯ! ಇದರಿಂದ ಹಕ್ಕಿ ಮತ್ತಷ್ಟು ಕಂಗಾಲಾಗುತ್ತದೆ. ಹಗಲಿರುಳು ಆ ಕೊಳದ ದಡದಲ್ಲೇ ಕುಳಿತು ತನ್ನ ಬಿಂಬವನ್ನೇ ದಿಟ್ಟಿಸುತ್ತ ಕೊನೆಗೊಂದು ದಿನ ನಿತ್ರಾಣವಾಗಿ, ಇನ್ನು ಕಾಯಲು ಸಾಧ್ಯವಿಲ್ಲ ಅನ್ನುತ್ತಾ ನೀರಹಕ್ಕಿಯನ್ನು ತಬ್ಬಿಕೊಳ್ಳಲು ಕೊಳದುಳಗೆ ಧುಮುಕುತ್ತೆ. ಈಜಲು ಶಕ್ತಿ ಇಲ್ಲದೆ ರೆಕ್ಕೆ ಸೋತು ಸತ್ತುಹೋಗುತ್ತೆ.
ಭೌತಿಕ ರೂಪದ ಮೋಹದಲ್ಲಿ ಮೈಮರೆತರೆ ನಾವೂ ನಾರ್ಸಿಸಸ್ನಂತೆ, ಫರೀದನ ಕತೆಯ ಹಕ್ಕಿಯಂತೆ ಕೊನೆಯಾಗಿಹೋಗ್ತೀವಿ. ಕೇವಲ ಹೊರಗಿನ ಆವರಣವನ್ನು ಪಡೆಯಲು ಹವಣಿಸುವ ನಾವು, ಅಂತಃಸತ್ವವನ್ನು ಸಾಕ್ಷಾತ್ಕರಿಸಿಕೊಳ್ಳುವ ನಮ್ಮ ಹುಟ್ಟಿನ ಮೂಲ ಉದ್ದೇಶವನ್ನೇ ಮರೆತುಬಿಡ್ತೀವಿ. ಪರಿಣಾಮ? ಕೆಲವೊಬ್ಬರು ಸತ್ತೇ ಹೋಗುತ್ತಾರೆ, ಕೆಲವರು ಬದುಕಿದ್ದೂ ಸತ್ತಂತೆ ಇರುತ್ತಾರೆ.

