ಅಮುಗೆ ರಾಯಮ್ಮನವರ ಈ ವಚನ ಧರ್ಮವೆಂಬುದು ಅನುಭವ ಸತ್ಯವೇ ಹೊರತು ಸ್ಥಾಪಿತವಾದ ಅಚರಣೆ, ಅನುಸರಣೆಗಳ ಕ್ರಮದ ಪಾಲನೆಯಲ್ಲ ಎಂದು ಹೇಳುತ್ತಿದೆ । ಓ.ಎಲ್.ನಾಗಭೂಷಣ ಸ್ವಾಮಿ
ಕತ್ತಲೆಯ ಮನೆಯಲ್ಲಿ ಸಕ್ಕರೆಯ ಸವಿದವನಂತಿರಬೇಕು
ಬಟ್ಟಬಯಲಲ್ಲಿ ನಿಂದು ಇಷ್ಟಲಿಂಗವ ಕಂಡವನಂತಿರಬೇಕು
ಇದಕ್ಕೆ ಗುರುವಿನ ಹಂಗೇಕೆ
ಲಿಂಗದಪೂಜೆ ಏಕೆ
ಸಮಯದ ಹಂಗೇಕೆ
ತನ್ನ ತಾನು ಅರಿದವಂಗೆ ಏಣಾಂಕಧರನ ಶರಣರ ಸಂಗವೇಕೆ
ಇಷ್ಟವನರಿದವಂಗೆ ನಾನೇನು ನೀನೇನು ಎಂಬ ಗೊಜಡಿನ ಭ್ರಮೆಯೇಕೆ
ಅಮುಗೇಶ್ವರಾ [೫.೬೨೧]
[ಬಟ್ಟಬಯಲು-ಖಾಲಿಯಾಗಿರುವ ಬಯಲು; ಇಷ್ಟಲಿಂಗ-ದೇಗುಲದೊಳಗೆ ಇರುವ ಸಾರ್ವಜನಿಕ ಆರಾಧನೆಗೆ ಒದಗುವ ಸ್ಥಾವರ ಲಿಂಗಕ್ಕಿಂತ, ಒಂದು ಸ್ಥಳದಲ್ಲಿ ಸ್ಥಾಪಿತವಾದ ಲಿಂಗಕ್ಕಿಂತ ಬೇರೆಯದು; ಆಧ್ಯಾತ್ಮಿಕ ಸಾಧನೆಯನ್ನು ಮಾಡಲು ಇಷ್ಟಪಟ್ಟು ಗುರುವಿನಿಂದ ಪಡೆದುಕೊಳ್ಳುವ ಜೀವವಿರುವವರೆಗೂ ತನ್ನೊಡನೆಯೇ ತನ್ನದು ಮಾತ್ರವೇ ಆಗಿ ಉಳಿಯುವ ಲಿಂಗ, ದೈವದ ಕುರುಹು; ಸಮಯ-ಧರ್ಮ; ಏಣಾಂಕಧರ-ಏಣ, ಜಿಂಕೆ, ಏಣಾಂಕ- ಜಿಂಕೆಯ ಕುರುಹನ್ನು ಹೊಂದಿರುವ ಚಂದ್ರ; ಚಂದ್ರನನ್ನು ಧರಿಸಿರುವವನು ಶಿವ; ಇಷ್ಟ-ಇಷ್ಟಲಿಂಗ, ಬಯಕೆ, ಇಷ್ಟ; ಗೊಜಡು-ಅರ್ಥವಿರದ, ಅಸಂಗತವಾದ ಮಾತು]
ಕತ್ತಲೆಯ ಮನೆಯಲ್ಲಿ ಸಕ್ಕರೆಯನ್ನು ಸವಿದವನ ಹಾಗೆ ಇರಬೇಕು, ಖಾಲಿಯಾದ ಬಯಲಲ್ಲಿ ಇಷ್ಟದೈವವನ್ನು ಕಂಡವನ ಹಾಗಿರಬೇಕು, ಈ ಅನುಭವ ಪಡೆಯಲು ಗುರು ಯಾಕೆ ಬೇಕು, ಲಿಂಗದ ಪೂಜೆ ಯಾಕೆ ಬೇಕು, ಧರ್ಮದ ಕಟ್ಟಳೆಯ ಹಂಗು ಯಾಕೆ ಬೇಕು? ತಮ್ಮನ್ನು ತಾವು ಅರಿತವರಿಗೆ ಇತರ ಶರಣರ ಸಂಗವಾದರೂ ಯಾಕೆ ಬೇಕು? ಇಷ್ಟವನ್ನು ಅರಿತವರಿಗೆ ನಾನು ಏನು, ನೀನು ಏನು ಅನ್ನುವ ಅರ್ಥವಿರದ ಅಸಂಗತ ಮಾತಿನ ಭ್ರಮೆ ಯಾಕೆ ಬೇಕು?
ಅಮುಗೆ ರಾಯಮ್ಮನವರ ಈ ವಚನ ಧರ್ಮವೆಂಬುದು ಅನುಭವ ಸತ್ಯವೇ ಹೊರತು ಸ್ಥಾಪಿತವಾದ ಅಚರಣೆ, ಅನುಸರಣೆಗಳ ಕ್ರಮದ ಪಾಲನೆಯಲ್ಲ ಎಂದು ಹೇಳುತ್ತಿದೆ. ಆಧ್ಯಾತ್ಮಿಕ ಅನುಭವ ಕತ್ತಲೆಯ ಮನೆಯಲ್ಲಿ ಸಕ್ಕರೆ ಸವಿದ ಹಾಗೆ ಅನ್ನುವ ಮಾತು ಈ ಅನುಭವ ಆದವರಿಗೆ ಮಾತ್ರ ಗೊತ್ತಾಗುತ್ತದೆಯೇ ಹೊರತು ಅದಕ್ಕೆ ಸಾಕ್ಷಿಯಾಗಿ ಬೇರೆ ಯಾರೂ ಇರಲು ಸಾಧ್ಯವಿಲ್ಲ, ಅನುಭವವನ್ನು ಮಾತಿನಲ್ಲಿ ವಿವರಿಸಿ ಹೇಳುವುದೂ ಸಾಧ್ಯವಿಲ್ಲ ಎಂದು ಸೂಚಿಸುತ್ತಿದೆ.ಯಾವ ಆಕಾರವೂ ಇರದ ಬರಿಯ ಬಯಲಿನಲ್ಲಿ ಇಷ್ಟದೈವದ ರೂಪ ಕಂಡವರಂತೆ ಇದು. ಕಂಡವರಿಗೆ ಮಾತ್ರವೇ ಹೊರತು ಬೇರೆಯವರಿಗಲ್ಲ. ಮುಂದಿನ ಮಾತು ನಾವು ಯಾವುದನ್ನು ಧಾರ್ಮಿಕ ವ್ಯವಸ್ಥೆ ಎನ್ನುತ್ತೇವೋ ಅದನ್ನು ಸ್ಫೋಟಿಸುತ್ತದೆ. ಇಷ್ಟದೈವದ ಮೂಲಕ ಅನುಭವ ಪಡೆಯಲು ಗುರುವಿನ, ಲಿಂಗ ಪೂಜೆಯ, ಧರ್ಮದ ಹಂಗು ಯಾಕೆ ಬೇಕು. ಇತರ ಶರಣರ ಸಂಗವಾದರೂ ಯಾಕೆ ಬೇಕು. ಇಷ್ಟಲಿಂಗ ಎಂಬ ಶಬ್ದವೇ ಇಂಥ ಧಾರ್ಮಿಕ ಆಧ್ಯಾತ್ಮಿಕ ಅನುಭವ ಪೂರಾ ವೈಯಕ್ತಿಕ ಎಂದು ಸೂಚಿಸುತ್ತದೆಯಲ್ಲವೇ! ದಿನ ನಿತ್ಯದ ಬದುಕಿನಲ್ಲಿ ನಾವು ಇತರರೊಡನೆ ಹೋಲಿಸಿಕೊಂಡು ನಾನು ಹೀಗೆ, ಅವರು ಹಾಗೆ ಎಂದು ವ್ಯರ್ಥವಾಗಿ ಅಸಂಗತವಾಗಿ ಬದುಕುತ್ತೇವೆ. ಅಧ್ಯಾತ್ಮ ಸಾಧನೆಯಲ್ಲಿ ಯಾರಿಗೂ ಏನನ್ನೂ ಪ್ರೂವ್ ಮಾಡುವ ಆಸೆ, ಮಾತು ಇವೆಲ್ಲ ಅಸಂಗತ, ಅಸಂಬದ್ಧ ಭ್ರಮೆ ಎಂಬ ದಿಟ್ಟ ನಿಲುವು ಈ ವಚನದಲ್ಲಿ ವ್ಯಕ್ತವಾಗಿದೆ. ಹೆಣ್ಣುಮಕ್ಕಳು ಧರ್ಮ, ಆಚರಣೆ, ಪದ್ಧತಿಗಳ ನಿಷ್ಠಾವಂತ ಪರಿಪಾಲಕರು, ಮತ್ತು ಅವರು ಹಾಗೇ ಇರಬೇಕು ಎಂಬ ಭ್ರಮೆಯನ್ನು ಅಮುಗೆ ರಾಯಮ್ಮನವರ ವಚನ ಅಲ್ಲಗಳೆಯತ್ತಿದೆ.
ಅಮುಗೆ ರಾಯಮ್ಮ
ಸು. ೧೧೫೦ರ ಕಾಲದ ವಚನಕಾರ್ತಿ, ವರದಾನಿಯಮ್ಮ ಎಂಬುದು ಈಕೆಯ ಇನ್ನೊಂದು ಹೆಸರು. ಈಕೆಯ ೧೧೬ ವಚನಗಳು ಪ್ರಕಟವಾಗಿವೆ. ಅಮುಗೇಶ್ವರ ಎಂಬುದು ವಚನಾಂಕಿತ. ರಾಯಮ್ಮನು ಅಮುಗೆ ದೇವಯ್ಯನ ಹೆಂಡತಿ. ನೇಕಾರ ವೃತ್ತಿಯವರು. ಸೊನ್ನಲಿಗೆಯ ಸಮೀಪದ ಪುಳಜೆ,ಇದ್ದೆ ಎಂಬ ಊರುಗಳಲ್ಲಿದ್ದವರು. ಅಮುಗಿ ದೇವಯ್ಯನಿಗೆ ಇದ್ದೆ ಎಂಬ ಗ್ರಾಮವನ್ನು ದಾನವಾಗಿ ಕೊಟ್ಟ ಬಗ್ಗೆ ೧೧೯೯ರ ಶಾಸನವೊಂದು ಹೇಳುತ್ತದೆ, ಅಥವಾ ಈಗಿನ ಸೊಲ್ಲಾಪುರದಲ್ಲಿದ್ದ ದಂಪತಿ ಇವರು. ಅಮುಗೆ ದೇವಯ್ಯನ ಬಗ್ಗೆ ಅಮುಗೆ ದೇವಯ್ಯ ಸಾಂಗತ್ಯ ಎಂಬ ಕೃತಿ ನಡುಗನ್ನಡ ಕಾಲದಲ್ಲಿ ರಚನೆಯಾಗಿದೆ. ಈ ದಂಪತಿ ಕುರಿತು ಹಲವು ಐತಿಹ್ಯಗಳಿವೆ. ದೇವಯ್ಯನು ಸಿದ್ಧರಾಮನನ್ನು ಭವಿ ಎಂದು ಕರೆದು, ಆತ ನೀಡಿದ ಭಿಕ್ಷೆ ತಿರಸ್ಕಾರ ಮಾಡಿದ; ಸಿದ್ಧರಾಮನ ಆಜ್ಞೆಯಂತೆ ಊರು ಬಿಟ್ಟು ಹೋಗುವಾಗ ಸ್ವತಃ ಕಪಿಲಸಿದ್ಧ ಮಲ್ಲಿಕಾರ್ಜುನನು ಬಂದು ಅವನ ಸಾಮಗ್ರಿಗಳನ್ನು ಹೊತ್ತು ನಡೆದ ಎಂಬ ಕಥೆ ಪ್ರಸಿದ್ಧವಾಗಿದೆ. ಸಿದ್ಧರಾಮ ಅನುಸರಿಸುತ್ತಿದ್ದ ಸ್ಥಾವರ ಪೂಜೆಯನ್ನು ತಿರಸ್ಕಾರ ಮಾಡಿ ಇಷ್ಟಲಿಂಗದ ಆರಾಧನೆಯತ್ತ ಜನ ಒಲಿದದ್ದರ ಸಂಕೇತವೆಂದು ಈ ಕಥೆಯನ್ನು ವ್ಯಾಖ್ಯಾನಿಸುವುದಿದೆ.

