ಟಾಲ್ಸ್ಟೊಯ್ ತಾವು ಎಂದು ಮರೆಯಲು ಸಾಧ್ಯವಾಗದ ಝೆನ್ ಕತೆಯೊಂದರ ಬಗ್ಗೆ ಹೇಳುತ್ತಾರೆ, ಈ ಕತೆ ತಮ್ಮ ಜೀವನವನ್ನೇ ಬದಲಾಯಿಸಿತು ಎನ್ನುತ್ತಾರೆ ಅವರು… । ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ಒಬ್ಬ ಮನುಷ್ಯ ಕಾಡಿನ ದಾರಿಯಲ್ಲಿ ನಡೆಯುತ್ತ ಎಲ್ಲಿಗೋ ಹೊರಟಿದ್ದ. ಅವನ ಮುಂದೆ ಅಚಾನಕ್ ಆಗಿ ಒಂದು ಹುಲಿ ಕಾಣಿಸಿಕೊಂಡಿತು. ಗಾಬರಿಯಲ್ಲಿ ಆ ಮನುಷ್ಯ ಓಡತೊಡಗಿದ, ಹುಲಿ ಅವನ ಬೆನ್ನು ಹತ್ತಿತು. ಓಡುತ್ತ ಓಡುತ್ತ ಆ ಮನುಷ್ಯ ಬೆಟ್ಟದ ತುದಿ ತಲುಪಿದ. ಹುಲಿ ಕೂಡ ಅವನ ಹಿಂದೆಯೇ ಬಂದು ನಿಂತುಕೊಂಢಿತು. ಗಾಬರಿಯಲ್ಲಿ ಆ ಮನುಷ್ಯ ಒಂದು ಬಳ್ಳಿಯನ್ನು ಹಿಡಿದುಕೊಂಡು ಬೆಟ್ಟದಿಂದ ಕೆಳಗೆ ಧುಮುಕಿದ. ಮೇಲೆ ಅವನಿಗಾಗಿ ಹುಲಿ ಕಾಯುತ್ತಿದ್ದರೆ, ದೈತ್ಯಾಕಾರದ ಬಂಡೆಯೊಂದು ಅವನನ್ನು ಕೆಳಗೆ ಎದುರು ನೋಡುತ್ತಿತ್ತು. ತನ್ನ ಸಾವು ಇನ್ನು ನಿಶ್ಚಿತ ಎಂದು ಆ ವ್ಯಕ್ತಿ ಶೋಕಭರಿತನಾದ. ಆ ಗಳಿಗೆಯಲ್ಲಿಯೇ ಎರಡು ಇಲಿಗಳು, ಒಂದು ಬಿಳಿ ಮತ್ತು ಒಂದು ಕಪ್ಪು ಅಲ್ಲಿ ಕಾಣಿಸಿಕೊಂಡವು. ಆ ಇಲಿಗಳು ಮನುಷ್ಯ ಹಿಡಿದುಕೊಂಡಿದ್ದ ಬಳ್ಳಿಯನ್ನು ಕತ್ತರಿಸತೊಡಗಿದವು. ಇನ್ನು ತನ್ನ ಸಾವನ್ನು ತಪ್ಪಿಸುವುದು ಯಾರಿಂದಲೂ ಸಾಧ್ಯವಿಲ್ಲ ಎಂದುಕೊಂಡ ಆ ಮನುಷ್ಯ. ಆಗಲೇ ಆ ಮನುಷ್ಯನಿಗೆ ಅವನ ಎದುರು ಕಾಡು ಸ್ಟ್ರಾ ಬೆರ್ರಿ ಹಣ್ಣಿನ ಗಿಡ ಕಾಣಿಸಿತು. ಆ ಮನುಷ್ಯನಿಗೆ ಏನು ಮಾಡಬೇಕು ಗೊತ್ತಾಗಲಿಲ್ಲ. ಕೂಡಲೇ ಆ ಮನುಷ್ಯ ಬಾಗಿ ಎರಡು ಸ್ಟ್ರಾ ಬೆರ್ರಿ ಹಣ್ಣುಗಳನ್ನು ಕಿತ್ತು ಬಾಯಿಯಲ್ಲಿ ಹಾಕಿಕೊಂಡ. ಅವನಿಗೆ ಆ ಹಣ್ಣುಗಳು ತನ್ನ ಜೀವನದಲ್ಲಿ ತಾನು ತಿಂದ ಅತ್ಯಂತ ರುಚಿಕರ ಹಣ್ಣುಗಳು ಅನಿಸಿದವು.
ತನ್ನ ಪುಸ್ತಕ Confession ನಲ್ಲಿ ಟಾಲ್ಸ್ಟೊಯ್ ಈ ಕತೆ ತನ್ನನ್ನು ಬಹಳ ಕಾಡಿದ ಕತೆ ಎಂದು ಬರೆದುಕೊಂಡಿದ್ದಾರೆ. ಹಗಲು ರಾತ್ರಿ ಎನ್ನುವ ಎರಡು ಇಲಿಗಳು ತನ್ನ ಬದುಕಿನ ಆಧಾರವನ್ನು ಕತ್ತರಿಸುತ್ತಿರುವಾಗ, ಮೇಲೆ ಕೆಳಗೆ ಸಾವು ತನಗಾಗಿ ಕಾಯುತ್ತಿರುವಾಗ, ಸಾವಿನ ನಿರೀಕ್ಷೆ ಎಲ್ಲವನ್ನೂ ವಿಷಮಯವಾಗಿಸುವಾಗ, ಹೇಗೆ ತಾನೆ ಮನುಷ್ಯ ಸ್ಟ್ರಾ ಬೆರ್ರಿ ಹಣ್ಣುಗಳನ್ನ ಆನಂದಿಸಿದ ಎನ್ನುವುದು ಟಾಲ್ಸ್ಟೊಯ್ ಗೆ ಅರ್ಥವಾಗದ ವಿಷಯವಾಗಿತ್ತು.
ಆದರೆ ಈ ಕತೆಯ ಝೆನ್ ಓದುವಿಕೆ ವಿಭಿನ್ನವಾದದ್ದು. ಇಲ್ಲಿ ಸ್ಟ್ರಾ ಬೆರ್ರಿ ಹಣ್ಣು ಸಾವಿನಿಂದ distraction ಅಲ್ಲ. ಮೇಲೆ ಹುಲಿ ಕೆಳಗೆ ಬಂಡೆ ನಮ್ಮನ್ನು ಸಾವಿನ ಭಯದಲ್ಲಿ ಕುಗ್ಗಿಸುತ್ತಿರುವಾಗಲೇ ಸ್ಟ್ರಾ ಬೆರ್ರಿ ಹಣ್ಣಿನ ಸ್ವಾದ ನಮ್ಮೊಳಗೆ ಬದುಕಿನ ರುಚಿಯನ್ನು ಹೆಚ್ಚಿಸುತ್ತದೆ. ಹೀಗಲ್ಲದೇ ನಾವು ಬದುಕುವುದಾದರೂ ಹೇಗೆ?

