ಸಂಗ್ರಹಾನುವಾದ : ಚಿದಂಬರ ನರೇಂದ್ರ
ಸಾರ್ತ್ರೆಯ ಬದುಕಿನಲ್ಲಿ ನಡೆದ ಒಂದು ಕುತೂಹಲಕಾರಿ ಘಟನೆ ಹೀಗಿದೆ…..
ಅದು ನಾಜಿಗಳು ಫ್ರಾನ್ಸ್ ನ ಮೇಲೆ ಆಕ್ರಮಣ ಮಾಡಿದ ಸಮಯ. ಸಾರ್ತ್ರೆಯ ವಿದ್ಯಾರ್ಥಿಯೊಬ್ಬ ಅವನ ಬಳಿ ಬಂದು ಪ್ರಶ್ನೆ ಮಾಡುತ್ತಾನೆ, “ಜಾನ್ ಪೌಲ್, ನನಗೊಂದು ಸಹಾಯ ಬೇಕಿದೆ. ನನ್ನ ಸೋದರನನ್ನು ನಾಜಿಗಳು ಕೊಂದು ಹಾಕಿದ್ದಾರೆ. ನನಗೆ ಫ್ರೆಂಚರ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ತೀವ್ರವಾಗಿ ಅನಿಸುತ್ತಿದೆ. ಆದರೆ ಮನೆಯಲ್ಲಿ ನಾನು ನನ್ನ ತಾಯಿಯನ್ನ ನೋಡಿಕೊಳ್ಳಬೇಕಿದೆ. ಏನು ಮಾಡಲಿ ನಾನು?”
ಒಂದು ಕ್ಷಣ ಯೋಚನೆ ಮಾಡಿ ಸಾರ್ತ್ರೆ ಉತ್ತರಿಸಿದ, “You are free. Therefore choose”
ಹಾಗೆಂದರೆ ನಿನ್ನ ಆಯ್ಕೆಯನ್ನು ನೀನೇ ನಿರ್ಧರಿಸು. ಆ ವಿದ್ಯಾರ್ಥಿ, ಆಯ್ಕೆಯನ್ನ ತನ್ನಿಂದ outsource ಮಾಡಲು ಬಯಸುತ್ತಿದ್ದಾನೆ ಎನ್ನುವುದನ್ನ ಸಾರ್ತ್ರೆ ಗಮನಿಸಿದ. ಆ ಹುಡುಗ ಗಾಳಿಯಲ್ಲಿ ಹಾರುವ ಎಲೆಯಾಗ ಬಯಸಿದ್ದ, ಏಕೆಂದರೆ ಇದು ಬಹಳ ಸುಲಭ. ಮತ್ತು ಆ ವಿದ್ಯಾರ್ಥಿ ತನ್ನ ಬದುಕಿನ ಅಸ್ತಿತ್ವದ ಬಗ್ಗೆಯೂ ದುಃಖಿತನಾಗಿರುವುದು ಸಾರ್ತ್ರೆಯ ಗಮನಕ್ಕೆ ಬಂದಿತ್ತು.
ನೀವು ಯಾರೊಬ್ಬರ ಸಲಹೆಯ ಪ್ರಕಾರ ಕಾರ್ಯನಿರ್ವಹಿಸುತ್ತೀರಾದರೆ, ಅದು ನಿಮ್ಮ ತಂದೆ ತಾಯಿ ಆಗಿರಬಹುದು ಅಥವಾ ಟೀಚರ್ ಆಗಿರಬಹುದು ಅಥವಾ ಯಾವುದೇ ಕಾನೂನು, ನಿಯಮ ಆಗಿರಬಹುದು, ಆಗ ನೀವು ಅವುಗಳ ಬಗ್ಗೆ ಅಸಮಾಧಾನ ಬೆಳೆಸಿಕೊಳ್ಳುತ್ತೀರಿ. ನಿಮ್ಮ ಮೇಲೆ ಬಲವಂತವಾಗಿ ಹೇರಲಾಗಿರುವ ಬದುಕಿನ ಬಗ್ಗೆ ಅತೃಪ್ತಿಯನ್ನು ಹೊಂದುತ್ತೀರಿ.
ಆದರೆ ಸಾರ್ತ್ರೆಗೆ, ನಿಮ್ಮ ಮೇಲೆ ಬಲವಂತವಾಗಿ ಹೇರಲಾಗಿರುವ ಬದುಕಿನ ಬಗ್ಗೆ ಅಸಮಾಧಾನವನ್ನು ಹೊಂದುವುದಕ್ಕಿಂತ, ನೀವು ಆಯ್ಕೆ ಮಾಡಿದೊಂಡ ಬದುಕಿನ ಬಗ್ಗೆ ಪಶ್ಚತಾಪವನ್ನು ಅನುಭವಿಸುವುದು ಹೆಚ್ಚು ಉತ್ತಮ.

