ಕಥಾ ಸರಿತ್ಸಾಗರ : ಪಾಟಲೀಪುತ್ರ ನಗರದ ಕಥೆ  ~ ಮಯಾಸುರನ ಮೂರ್ಖ ಮಕ್ಕಳು ಮತ್ತು ಮಾಯಾ ವಸ್ತುಗಳು

ವರ್ಷೋಪಾಧ್ಯಾಯನು ವರರುಚಿಗೆ ಪಾಟಲೀಪುತ್ರ ನಗರದ ವೈಭವಗಾಥೆಯನ್ನು ಹೇಳುತ್ತಿದ್ದಾನೆ.
ಇಲ್ಲಿಯವರೆಗೆ…
ಪುತ್ರಕನು ತನ್ನ ತಂದೆ ಮತ್ತು ಆತನ ಸಹೋದರರನ್ನು ಮರಳಿ ಪಡೆದನು. ಆದರೆ ಅವರು ಮಹಾ ವಂಚಕರೂ ಕಡುಲೋಭಿಗಳೂ ಆಗಿದ್ದು, ಮಗನನ್ನೇ ಕೊಲ್ಲಿಸುವ ಸಂಚು ಹೂಡಿದರು. ಪುತ್ರಕನು ಅದರಿಂದ ಪಾರಾಗಿ ದೇಶಾಂತರ ಹೋಗುವ ನಿರ್ಧಾರ ಮಾಡಿದನು.
ಮುಂದೆ…

katha

ತಂದೆಯ ವಂಚನೆಯಿಂದ ದುಃಖಿತನಾದ ಪುತ್ರಕನು ತನ್ನ ರಾಜ್ಯವನ್ನು ತೊರೆದು ಹೊರಟನು. ಕಾಡಿನಲ್ಲಿ ಅಲೆದಾಡುತ್ತಾ ಇರುವಾಗ ಯಕ್ಷರಂತೆ ಕಾಣುವ ಇಬ್ಬರು ಮಲ್ಲಯುದ್ಧದಲ್ಲಿ ತೊಡಗಿರುವುದನ್ನು ಕಂಡನು. ಅಚ್ಚರಿಗೊಂಡ ಪುತ್ರಕನು ಅವರನ್ನು ಕುರಿತು, “ನೀವು ಯಾರು? ಯಾಕೆ ಯುದ್ಧ ಮಾಡುತ್ತಿದ್ದೀರಿ?” ಎಂದು ವಿಚಾರಿಸಿದನು.

ಆ ಯಕ್ಷರು ಯುದ್ಧ ನಿಲ್ಲಿಸಿ, “ಅಯ್ಯಾ! ನಾವು ಮಯಾಸುರನ ಮಕ್ಕಳು. ನಮ್ಮ ತಂದೆ ನಮಗೆ ಬಳುವಳಿಯಾಗಿ ಈ ಮಾಯಾ ಕೋಲು, ಮಾಯಾ ಬಟ್ಟಲು ಮತ್ತು ಮಾಯಾ ಚಪ್ಪಲಿಗಳನ್ನು ಕೊಟ್ಟು ಹೊರಟುಹೋದನು. ಆದರೆ ಇವು ನಮ್ಮಿಬ್ಬರಲ್ಲಿ ಯಾರಿಗೆ ಸೇರಬೇಕು ಅನ್ನುವುದು ಪ್ರಶ್ನೆ. ಆದ್ದರಿಂದ, ಮಲ್ಲಯುದ್ಧ ನಡೆಸಿ ಯಾರು ಗೆಲ್ಲುತ್ತಾರೋ ಈ ಎಲ್ಲವೂ ಅವರ ಸೊತ್ತು ಎಂದು ನಿರ್ಧರಿಸಿದ್ದೇವೆ” ಎಂದರು.

ಆ ವಸ್ತುಗಳ ವಿಶೇಷವೇನು ಎಂದು ವಿಚಾರಿಸಿದನು ಪುತ್ರಕ.
ಅದಕ್ಕೆ ಆ ಸಹೋದರರು, “ಈ ಮಾಯಾ ಕೋಲಿನಿಂದ ಯಾವುದರ ಚಿತ್ರ ಬಿಡಿಸುತ್ತೀರೋ ಅದು ಮೂಡಿಬರುವುದು. ಈ ಮಾಯಾಬಟ್ಟಲಿನಲ್ಲಿ ನಿಮ್ಮ ಬಯಕೆಯ ಆಹಾರವು ಸಿದ್ಧಗೊಳ್ಳುವುದು. ಮಾಯಾ ಚಪ್ಪಲಿಯನ್ನು ತೊಟ್ಟುಕೊಂಡು ನೀವು ಬಯಸಿದಲ್ಲಿಗೆ ಆಕಾಶ ಮಾರ್ಗದಲ್ಲಿ, ಮಿಂಚಿನ ವೇಗದಲ್ಲಿ ಸಾಗಬಹುದು” ಎಂದು ವಿವರಿಸಿದರು.

ಅವರ ಮಾತುಗಳನ್ನು ಕೇಳಿದ ಪುತ್ರಕನು ಅವರು ಮಹಾ ಮೂರ್ಖರೆಂದು ಅಂದಾಜು ಮಾಡಿದನು. “ಹೀಗೆ ಹೊಡೆದಾಡುವುದರಿಂದ ಏನು ಪ್ರಯೋಜನ? ಒಂದು ಕೆಲಸ ಮಾಡಿ. ಓಟದ ಸ್ಪರ್ಧೆ ನಡೆಯಲಿ. ಯಾರು ನಿಗದಿತ ಸಮಯದಲ್ಲಿ ಹೆಚ್ಚು ದೂರ ಓಡುವರೋ ಅವರಿಗೆ ಈ ವಸ್ತುಗಳು ಸಲ್ಲಲಿ” ಎಂದನು.
ಆ ಮೂರ್ಖರಿಬ್ಬರೂ ಓಡಲು ಶುರು ಮಾಡಿದರು. ಪುತ್ರಕನು ಬಟ್ಟಲನ್ನೂ ಕೋಲನ್ನೂ ತೆಗೆದುಕೊಂಡು, ಮಾಯಾಚಪ್ಪಲಿಯನ್ನು ಮೆಟ್ಟಿಕೊಂಡು ಹಾರಿದನು!

ಹಾಗೆ ಹಾರುತ್ತಾ ಪುತ್ರಕನು ಅತ್ಯಂತ ಸುಂದರವಾದ ಪಟ್ಟಣವೊಂದನ್ನು ನೋಡಿದನು. ಆ ಪಟ್ಟಣದ ಹೆಸರು ‘ಆಕರ್ಷಿಕಾ’. ಹೆಸರಿಗೆ ತಕ್ಕ ಹಾಗೆ ಆಕರ್ಷಕವಾಗಿದ್ದ ಆ ಪಟ್ಟಣದಲ್ಲಿ ಪುತ್ರಕನು ಇಳಿದನು. ಕೆಲಕಾಲ ಅಲ್ಲಿಯೇ ತಂಗಿದ್ದು ಮುಂದಿನ ಯೋಜನೆ ರೂಪಿಸುವುದು ಅವನ ಉದ್ದೇಶವಾಗಿತ್ತು. ಆದ್ದರಿಂದ ಅವನು ವೇಷ ಮರೆಸಿಕೊಂಡು, ಊರಂಚಿನ ಒಂದು ಮುರುಕು ಮನೆಯ ಬಳಿ ಬಂದನು.

ಆ ಮನೆಯಲ್ಲಿ ಒಬ್ಬ ಮುದುಕಿಯ ಹೊರತಾಗಿ ಯಾರೂ ಇರಲಿಲ್ಲ. ಪುತ್ರಕನು ಆಕೆಗೆ ಸ್ವಲ್ಪ ಹಣ ನೀಡಿ, ಸ್ವಲ್ಪ ದಿನಗಳ ವರೆಗೆ ಅಲ್ಲಿ ವಾಸಿಸಲು ಅವಕಾಶ ನೀಡಬೇಕೆಂದು ಕೇಳಿಕೊಂಡನು.

(ಮುಂದುವರೆಯುವುದು…)

(ಕಥಾ ಸರಿತ್ಸಾಗರ, ಹಲವು ಕಥಾಧಾರೆಗಳು ಬಂದು ಸೇರುವ ಸಮುದ್ರ. ಆ ಕಥೆಗಳೆಲ್ಲವೂ ಒಂದಕ್ಕೊಂದು ಹೆಣೆದುಕೊಂಡಿರುವಂಥದ್ದು. ಯಾವುದಾದರೂ ಒಂದು ಕಥೆಯ ಒಂದು ಎಳೆ ಬಿಟ್ಟುಹೋದರೂ ಇಡೀ ಕಥೆಯ ಸೂತ್ರವೇ ತಪ್ಪಿದಂತಾಗುವುದು. ಪ್ರತ್ಯೇಕವಾಗಿ ಅವು ನಮ್ಮನ್ನು ಓದಿಸಿಕೊಂಡುಹೋದರೂ ಒಟ್ಟು ಓದಿನ ಸಮಗ್ರ ಅನುಭವದಿಂದ ನಾವು ವಂಚಿತರಾಗುವೆವು. ಆದ್ದರಿಂದ, ಈ ಕಥೆಗಳ ಪ್ರತಿ ಕಂತನ್ನೂ ಓದಲು ಯತ್ನಿಸಿ. ಹಿಂದಿನ ಕಂತುಗಳ ಕೊಂಡಿ ಇಲ್ಲಿದೆ:

https://aralimara.com/category/ಕಥಾಲೋಕ/ಕಥಾ-ಸರಿತ್ಸಾಗರ/  )

Leave a Reply