ಅಧ್ಯಾತ್ಮ ಡೈರಿ : ಕೊಟ್ಟು ಹೆಚ್ಚಿಸಿಕೊಳ್ಳುವುದಕ್ಕಿಂತ ಕೊಂಡು ಹೆಚ್ಚಿಸಿಕೊಳ್ಳಲಿಕ್ಕೇ ಹೆಚ್ಚು ಆಸಕ್ತಿ!

ಹಿಂದಿನ ದಶಕಗಳಲ್ಲಿ ಅಕ್ಷಯ ತೃತೀಯವನ್ನು ಆಚರಿಸುವ ಸಮುದಾಯಗಳು ದಾನ ನೀಡಿಕೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದವು. ದಾನ ನೀಡಿದಷ್ಟೂ ನಮ್ಮಲ್ಲಿನ ಸಂಪತ್ತು ಹೆಚ್ಚುತ್ತಾ ಹೋಗುತ್ತದೆ ಅನ್ನುವ ನಂಬಿಕೆ ಇದರ ಹಿಂದಿತ್ತು. ಆದರೆ ಈಗ ಆಗಿರುವುದೇನು!? ~ ಅಲಾವಿಕಾ

ಕೆಲವು ಆಚರಣೆಗಳು ಅದು ಹೇಗೆ ಧಿಡೀರನೆ ಹುಟ್ಟಿಕೊಳ್ತವೋ! ಅಚ್ಚರಿಯಾಗುತ್ತೆ. ಒಂದೆರಡು ದಶಕಗಳ ಹಿಂದೆ ಕೇವಲ ಪಂಚಾಗದಲ್ಲಿ ನಮೂದಾಗಿರುತ್ತಿದ್ದ ‘ಅಕ್ಷಯತೃತೀಯಾ’ ಇತ್ತೀಚೆಗೆ ಸಡಗರದ ಹಬ್ಬವಾಗಿದೆ!! ಇದರ ಹಿನ್ನೆಲೆ ಅರಿಯದವರೂ ಇದನ್ನೊಂದು ಸಂಭ್ರಮವನ್ನಾಗಿ ಕಾಣುವುದು ವಿಚಿತ್ರ ಅನ್ನಿಸುತ್ತದೆ.

ವಾಸ್ತವದಲ್ಲಿ ಅಕ್ಷಯ ತೃತೀಯಾ ಅಥವಾ ವೈಶಾಖ ಶುದ್ಧ ತದಿಗೆಯು ಹಲವು ಕಾರಣಗಳಿಗೆ ಮಹತ್ವದ ದಿನವಾಗಿದೆ.  ಪುರಾಣಗಳ ಪ್ರಕಾರ: ವೇದವ್ಯಾಸರು ಮಹಾಭಾರತವನ್ನು ರಚಿಸುವ ಸಂದರ್ಭ ಅವರಿಗೆ ಸಹಾಯಕನಾಗಿ ಗಣೇಶನು ನೆರವಾಗಿದ್ದು ಇದೇ ದಿನದಂದು. ಭಗೀರಥನ ಪ್ರಯತ್ನದಿಂದ ಗಂಗಾವತರಣವಾಗಿದ್ದು (ಶಿವನ ಜಟೆಯಿಂದ ಗಂಗೆ ಭೂಮಿಗೆ ಇಳಿದದ್ದು) ಇದೇ ದಿನದಂದು. ದಶಾವತಾರಗಳಲ್ಲಿ ಒಂದಾದ ಪರಶುರಾಮಾವತಾರ ಪ್ರಾರಂಭವಾಗಿದ್ದು (ಹುಟ್ಟಿದ ದಿನ) ಇದೇ ದಿನದಂದು. ಕುಬೇರನಿಗೆ ಸಂಪತ್ತು ದೊರೆತದ್ದು ಇದೇ ದಿನದಂದು. ಕುಚೇಲನಿಗೆ ಗೆಳೆಯ ಶ್ರೀಕೃಷ್ಣನಿಂದ ಅನುಗ್ರಹ ಪ್ರಾಪ್ತಿಯಾಗಿದ್ದು ಇದೇ ದಿನದಂದು. ಅಮೃತ ಪ್ರಾಪ್ತಿಗಾಗಿ ದೇವತೆಗಳು ಮತ್ತು ರಾಕ್ಷಸರು ಸಮುದ್ರ ಮಥನ ಮಾಡುತ್ತಿದ್ದ ವೇಳೆ ಲಕ್ಷ್ಮೀ ಜನಿಸಿದ್ದು ಇದೇ ದಿನದಂದು.

ಆದರೆ ಈ ದಿನಗಳಲ್ಲಿ ಮಿಕ್ಕೆಲ್ಲ ಕಾರಣಗಳು ಗೌಣವಾಗಿ ಮಥನ ಸಂದರ್ಭದಲ್ಲಿ ಲಕ್ಷ್ಮಿಯ ಉದ್ಭವ ಹಾಗೂ ಕುಬೇರನಿಗೆ ಸಂಪತ್ತು ದೊರಕಿದ್ದೇ ಮುಖ್ಯವಾಗಿದೆ. ಈ ದಿನ ಏನನ್ನೇ ಕೊಂಡರೂ ಅದು ಅಕ್ಷಯವಾಗುವುದು ಅಥವಾ ವೃದ್ಧಿಯಾಗುವುದು ಅನ್ನುವುದು ಹೊಸ ನಂಬಿಕೆ.

ಹಿಂದಿನ ದಶಕಗಳಲ್ಲಿ ಅಕ್ಷಯ ತೃತೀಯವನ್ನು ಆಚರಿಸುವ ಸಮುದಾಯಗಳು ದಾನ ನೀಡಿಕೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದವು. ದಾನ ನೀಡಿದಷ್ಟೂ ನಮ್ಮಲ್ಲಿನ ಸಂಪತ್ತು ಹೆಚ್ಚುತ್ತಾ ಹೋಗುತ್ತದೆ ಅನ್ನುವ ನಂಬಿಕೆ ಇದರ ಹಿಂದಿತ್ತು. ಆದರೆ ಈಗ ಆಗಿರುವುದೇನು!?

ಈ ಸಂಗತಿಯನ್ನು ಗಮನವಿಟ್ಟು ಅವಲೋಕಿಸಿ. ನಾವು ಸಂಪ್ರದಾಯದ ಹೆಸರಲ್ಲಿ ನಮಗೇನು ಬೇಕೋ ಅದನ್ನು ರೂಪಿಸಿಕೊಳ್ಳುತ್ತೇವೆ. ನಮ್ಮದೇ ಹೊಸ ಸೃಷ್ಟಿಗೆ, ನಾವೇ ಸೇರ್ಪಡಿಸಿದ್ದಕ್ಕೆ ಸಂಪ್ರದಾಯದ ಹೆಸರಿಟ್ಟು ನಮ್ಮನ್ನು ನಾವೇ ವಂಚಿಸಿಕೊಳ್ತೇವೆ!

ಈಗ ನೋಡಿ; ಕೃಷ್ಣ – ಕುಚೇಲರ ಕಥನದ ಹಿನ್ನೆಲೆಯಲ್ಲಿ, ಕೃಷ್ಣನು ಕುಚೇಲನಿಗೆ ಐಶ್ವರ್ಯವನ್ನು ಕರುಣಿಸಿದನು ಅನ್ನುವ ನಂಬಿಕೆಯಿಂದ, ಭಗವಂತನನ್ನು ಅನುಸರಿಸಿ ದಾನ ನೀಡುವುದು ಈ ಮೊದಲಿನ ರಿವಾಜು. ಆದರೆ ಇತ್ತೀಚೆಗೆ ಕೊಡುವುದಕ್ಕಿಂತ ಕೊಳ್ಳುವುದರಲ್ಲಿ ಹೆಚ್ಚು ಆಸಕ್ತಿ. ಕೊಟ್ಟಷ್ಟೂ ಸಂಪತ್ತು ಅಕ್ಷಯವಾಗುತ್ತದೆ ಅನ್ನುವ ಮಾತಿನಲ್ಲಿ ನಂಬಿಕೆ ಇಡದವರು, ಕೊಂಡಷ್ಟೂ  ಸಂಪತ್ತು ಅಕ್ಷಯವಾಗುತ್ತದೆ ಎಂದು ತಮ್ಮನ್ನೇ ನಂಬಿಸಿಕೊಳ್ಳಲು ಶುರು ಮಾಡಿದ್ದು ಯಾಕೆ!?

ಉತ್ತರ ಬಹಳ ಸರಳ. ನಮಗೆ ಸಂಪ್ರದಾಯಗಳಲ್ಲಿ ನಂಬಿಕೆ ಇಲ್ಲ! ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ನಂಬಿಕೆ ಇಲ್ಲ! ನಾವು ದಾನ ಕೊಟ್ಟು, ಅದು ಮರುಪೂರಣವಾಗದೆ ಹೋದರೆ!? ಅಷ್ಟು ನಷ್ಟವಾದಂತೆಯೇ ಅಲ್ಲವೆ!? ಅದೇ ನಾವು ಕೊಳ್ಳಲು ಹಣ ವಿನಿಯೋಗಿಸಿದರೆ, ಸಂಪತ್ತು ಸಂಪ್ರದಾಯದಂತೆ ಅಕ್ಷಯವಾಗದೇ ಹೋದರೂ ಆಭರಣ ಅತವಾ ಇನ್ಯಾವುದೇ ವಸ್ತುವಿನ ರೂಪದಲ್ಲಿ ಉಳಿದುಕೊಂಡಿರುತ್ತದೆ. ಶಾಸ್ತ್ರಪುರಾಣಗಳು ಹೇಳುವಂತೆ ಅಕ್ಷಯವಾಗುತ್ತದೋ ಇಲ್ಲವೋ… ಲಾಸ್ ಅಂತೂ ಆಗುವುದಿಲ್ಲವಲ್ಲ!! – ಹೀಗಿದೆ ನಮ್ಮ ಯೋಚನೆ!!

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.