ವೃಷಭನಾಥ ತೀರ್ಥಂಕರರು ಸಂಸಾರದ ನಶ್ವರತೆಯನ್ನು ಅರಿತು, ವೈರಾಗ್ಯ ದೀಕ್ಷೆಯನ್ನು ಪಡೆದು, ದಿಗಂಬರರಾಗಿ ತಪಸ್ಸಿಗೆ ತೆರಳುತ್ತಾರೆ. ಆರು ತಿಂಗಳು ಕಠಿಣ ತಪಸ್ಸನ್ನು ಮಾಡಿದ ಮೇಲೆ ಭಿಕ್ಷಾನ್ನಕ್ಕಾಗಿ ನಗರಕ್ಕೆ ಆಗಮಿಸುತ್ತಾರೆ. ಆದರೆ ನಗರದ ಜನರಿಗೆ ನವಧಾ ಭಕ್ತಿಯಿಂದ ಭಿಕ್ಷೆ ನೀಡುವ ಬಗೆಯೇ ತಿಳಿದಿರುವುದಿಲ್ಲ. ಅಲ್ಲದೆ, ವೃಷಭನಾಥರು ಆ ಮೊದಲು ಮಹಾರಾಜನಾಗಿದ್ದರಿಂದ, ಜನರು ಆಹಾರ ಭಿಕ್ಷೆ ನೀಡುವ ಬದಲು ಅವರ ಜೋಳಿಗೆಗೆ ವಿವಿಧ ಒಡವೆ, ವಸ್ತ್ರಗಳನ್ನು ನೀಡಲು ಮುಂದಾಗುತ್ತಾರೆ. ಕೆಲವರು ತಮ್ಮ ಹೆಣ್ಣು ಮಕ್ಕಳನ್ನು ಮದುವೆಯಾಗುವಂತೆ ಕೇಳಿಕೊಳ್ಳುತ್ತಾರೆ.
ವೃಷಭನಾಥರಿಗೆ ಇದ್ಯಾವುದೂ ಬೇಕಾಗಿರುವುದಿಲ್ಲ. ಅವರು ಪುನಃ ಕಾಡಿಗೆ ತೆರಳುತ್ತಾರೆ.
ಮತ್ತೆ 7 ತಿಂಗಳು 9 ದಿನಗಳ ಉಪವಾಸದ ನಂತರ ಹಸ್ತಿನಾಪುರ ಎಂಬ ನಗರಕ್ಕೆ ಭಿಕ್ಷೆಗಾಗಿ ವೃಷಭನಾಥರು ಹೋಗುತ್ತಾರೆ. ಆಗಲೂ ಅದೇ ರೀತಿಯ ಪ್ರತಿಕ್ರಿಯೆ ಜನರಿಂದ ದೊರೆಯುತ್ತದೆ.
ಅದೇ ನಗರದ ರಾಜಾ ಶ್ರೇಯಾಂಸ ಕೂಡಾ ಇವರ ದರ್ಶನಕ್ಕೆಂದು ಪರಿವಾರ ಸಹಿತ ಆಗಮಿಸುತ್ತಾನೆ.
ಆಗ ಅವನಿಗೆ ಹಿಂದಿನ ಜನ್ಮದ ಸ್ಮರಣೆ ಉಂಟಾಗುತ್ತದೆ. ಹಿಂದಿನ ಜನ್ಮದಲ್ಲಿ ವೃಷಭನಾಥರೊಡನೆ ತಾನು ಸೆರೀ ದಿಗಂಬರ ಮುನಿಗಳಿಗೆ ನವಧಾ ಭಕ್ತಿಯಿಂದ ಆಹಾರ ನೀಡಿದ ಸ್ಮರಣೆ ಅವನಿಗಾಗುತ್ತದೆ.
ತಡಮಾಡದೆ ಶ್ರೇಯಾಂಸನು ಸೋಮರಾಜನೊಡಗೂಡಿ ಸೆರೀ ನವಧಾ ಭಕ್ತಿಯಿಂದ ವೃಷಭನಾಥರಿಗೆ ಕಬ್ಬಿನ ಹಾಲು ನಿಡುವ ಮೂಲಕ ಮೊದಲ ಭಿಕ್ಷೆ ನೀಡುತ್ತಾರೆ. ಹೀಗೆ ವೃಷಭ ನಾಥರಿಗೆ ಉಪವಾಸದ ನಂತರ ಮೊದಲು ಆಹಾರ ಪಾರಣೆಯಾದ ದಿವಸ ವೈಶಾಖ ಶುಕ್ಲ ತೃತೀಯ ತಿಥಿ. ಆದ್ದರಿಂದ ಜೈನರು ಈ ದಿನವನ್ನು ‘ಅಕ್ಷಯ ತೃತೀಯ’ವೆಂದು ಆಚರಿಸುತ್ತಾರೆ.