ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ
ನಿಷ್ಣಾತ ಯೋಧನಿಗೆ
ಆಕ್ರಮಣ ಮಾಡುವ ಉತ್ಸಾಹಕ್ಕಿಂತ
ಕಾಯ್ದು ಆಹ್ವಾನಿಸುವ ತಂತ್ರದ ಮೇಲೆ
ನಂಬಿಕೆ ಜಾಸ್ತಿ.
ಒಂದು ಹೆಜ್ಜೆ
ಮುಂದಿಡುವ ಹುಂಬತನಕ್ಕಿಂತ
ಹತ್ತು ಹೆಜ್ಜೆ ಹಿಂದೆ ಸರಿಯುವ
ಧೈರ್ಯ ದೊಡ್ಡದು.
ಇದೇ ಕದನವಲ್ಲದ ಕದನ.
ತೋಳೇರಿಸಿದರೂ ಸ್ನಾಯುಗಳು
ಮೌನ ಮುರಿಯಬಾರದು.
ಅಪ್ರತಿಮ ಯೋಧ
ಆಯುಧಗಳಿಲ್ಲದೆಯೇ ಶಸ್ತ್ರಸಜ್ಜಿತನಾಗಿರುತ್ತಾನೆ.
ಆಕ್ರಮಣ ಮಾಡುವವನ ಎದುರು
ಪ್ರತಿಸ್ಪರ್ಧಿಯನ್ನು ನಿಲ್ಲಿಸಬಾರದು,
ಸೋಲುವುದನ್ನು ಸೋಲಿಸುವುದೆಂದರೆ
ಗೆಲುವನ್ನು ಬಿಟ್ಟುಕೊಟ್ಟಂತೆ.
ಸಮ ಶಕ್ತಿಗಳು ಎದುರಾದಾಗ
ಗೆಲ್ಲುವವನು
ಸೋಲನ್ನು ಅರಿತವನು.