ಪಾರ್ವತಿಯು ಶಿವನಲ್ಲಿ ಭೂಲೋಕದ ಜನರು ಸಂಪತ್ತಿನ ಹಿಂದೆ ಓಡುವುದಕ್ಕೆ ಕಾರಣವನ್ನು ಕೇಳಿದಾಗ ಶಿವನು “ಅವರು ಸಂಪತ್ತಿನ ದಾಸರಾಗಿರುವುದೇ ಅದಕ್ಕೆ ಕಾರಣ. ಸಂಪತ್ತಿನ ಒಡೆಯರು ಅದು ಕುಣಿಸಿದಂತೆ ಕುಣಿಯುತ್ತಾರೆ. ಹಾಗೆಂದೇ ಅವರಿಗೆ ಸಂಪತ್ತು ನೆಮ್ಮದಿ ನೀಡುವುದಿಲ್ಲ” ಎಂದು ಉತ್ತರಿಸುತ್ತಾನೆ.
ಸಂಪತ್ತನ್ನು ಹೊಂದಿರಬೇಕಾದ್ದು ಲೌಕಿಕದಲ್ಲಿ ಅನಿವಾರ್ಯ. ಸಂಸಾರ ನಿರ್ವಹಣೆಗೆ, ದೈನಂದಿನ ಬದುಕು ಸಾಗಿಸಲಿಕ್ಕೆ ಸಂಪತ್ತನ್ನು ಒಂದು ಮಿತಿಯಲ್ಲಿ ಕಾಯ್ದಿಟ್ಟುಕೊಳ್ಳಬೇಕಾಗುತ್ತದೆ. ದುಡಿಮೆಯ ಪ್ರತಿಫಲವೇ ಸಂಪತ್ತು. ಕೆಲವೊಮ್ಮೆ ವ್ಯಕ್ತಿಯ ಕೌಶಲ್ಯ, ಪಾಂಡಿತ್ಯ, ಅಧಿಕಾರಗಳೂ ಸಂಪತ್ತನ್ನು ನೀಡುತ್ತವೆ.
ಆದರೆ ನಾವು ಈ ಸಂಪತ್ತಿನ ದಾಸರಾಗಬಾರದು. ಸಂಪತ್ತು ನಮ್ಮನ್ನು ಕುಣಿಸಿದಂತೆ ಕುಣಿಯಬಾರದು. ಅದರ ಕಾವಲಿನಲ್ಲೇ ದಿನ ಕಳೆಯಬಾರದು. ನಮ್ಮ ಆಲೋಚನೆಗಳು, ನಮ್ಮ ನಡವಳಿಕೆ, ಬಾಂಧವ್ಯಗಳೆಲ್ಲವನ್ನೂ ಸಂಪತ್ತೇ ನಿರ್ಧರಿಸುವಂತೆ ಆಗಬಾರದು. ಹಾಗೇನಾದರೂ ನಾವು ಅವಕಾಶ ಮಾಡಿಕೊಟ್ಟರೆ, ನಾವು ಸಂಪತ್ತಿನ ಜೀತಕ್ಕೆ ಬಿದ್ದಂತೆಯೇ ಸರಿ.
ಸಂಪತ್ತಿನ ಒಡೆಯರಾದ ನಾವು, ಅದರ ದಾಸರಂತೆ ವರ್ತಿಸುವುದು ಸ್ವತಃ ನಮಗೂ ನಮ್ಮ ಸಂಪತ್ತಿಗೂ ಅವಮಾನಕರ ಸಂಗತಿಯೇ ಆಗಿರುತ್ತದೆ.