ಪ್ರತಿ ದಿನಕ್ಕೂ ತನ್ನದೇ ಸ್ವಾದವಿದೆ ~ ರೂಮಿ

ಸಮಯ ಸಾಲುವುದಿಲ್ಲ ಎಂಬ ಮಾತು ಇಲ್ಲಿ ಅಪ್ರಸ್ತುತ. ಯಾಕೆಂದರೆ ಇಲ್ಲಿ ಹೇಳುತ್ತಿರುವುದು ಪ್ರತಿಕ್ಷಣವನ್ನೂ ಆಸ್ವಾದಿಸು ಎಂದು. ಹಾಗಿರುವಾಗ ಅದಕ್ಕೆಂದೇ ಸಮಯ ಮೀಸಲಿಡುವ ಅಗತ್ಯವಾದರೂ ಹೇಗೆ ಬರುತ್ತದೆ? ~ ಸಾಕಿ

WhatsApp Image 2018-06-04 at 20.20.30

ನಾಳೆಯ ಕೆಲಸ ಇಂದು ಮಾಡು, ಇಂದಿನ ಕೆಲಸ ಈ ಕೂಡಲೇ ಮಾಡು ಎಂದು ಹೇಳುವುದನ್ನು ಕೇಳಿದ್ದೇವೆ. ನಮ್ಮ ಜೀವನಶೈಲಿ ಎಷ್ಟೊಂದು ವೇಗವಾಗಿದೆ ಎಂಬುದನ್ನು ಈ ಮಾತು ಸೂಕ್ಷ್ಮವಾಗಿ ತೋರಿಸುತ್ತದೆ. ಆದರೆ ಇಂತಹ ಅತಿವೇಗದಿಂದಾಗಿ ನಾವು ಕಳೆದುಕೊಳ್ಳುತ್ತಿರುವ ಸಣ್ಣಪುಟ್ಟ ಖುಷಿಗಳಿಗೆ ಲೆಕ್ಕವಿಟ್ಟವರಿಲ್ಲ; ಅಲ್ಲವೇ? ಎಂದೇ ರೂಮಿ ಇದಕ್ಕೆಲ್ಲ ವ್ಯತಿರಿಕ್ತವಾಗಿ ಪ್ರತಿ ದಿನವನ್ನೂ ಆಸ್ವಾದಿಸು ಎಂದು ಹೇಳುತ್ತಾನೆ. ನಾಳೆಯ ಚಿಂತೆ ಇಂದಿನ ಸ್ವಾದ ಕೆಡಿಸದಿರಲಿ ಎಂಬುದಕ್ಕೆ ಉದಾಹರಣೆಯಾಗಿ ಇಂದಿನ ಸ್ವಾದ ನಿನ್ನೆಯದಲ್ಲ ಎಂದು ಒತ್ತಿ ಹೇಳುತ್ತಾನೆ. ಆ ಮೂಲಕ ನಾಳೆಯ ಬಗ್ಗೆ ಚಿಂತಿಸಿ ಈ ದಿನದ ನೆಮ್ಮದಿ ಕಳೆದು ಕೊಳ್ಳುವುದು ಬೇಡ ಎಂಬುದು ರೂಮಿಯ ಕಿವಿ ಮಾತು.

ಆಧುನಿಕ ಮನುಷ್ಯ ಸಂಪಾದನೆಯ ಹಿಂದೆ ಬಿದ್ದಿದ್ದಾನೆ. ಅದು ಸಂಪತ್ತಾಗಿರಲಿ ಅಥವಾ ಸಂಬಂಧಗಳೇ ಆಗಿರಲಿ, ಒಟ್ಟಿನಲ್ಲಿ ಸಂಪಾದಿಸಿಕೊಳ್ಳುವ ತವಕ. ಒಂದು ದಿನವೂ ಆಸ್ವಾದಿಸುವಷ್ಟು ಬಿಡುವಿಲ್ಲದ ಜೀವನ ಪದ್ಧತಿ. ಹಾಗಾದರೆ ಈ ಸಂಪಾದನೆಗಳು ಯಾತಕ್ಕಾಗಿ? ಧಾವಂತದ ಬದುಕಿನಲ್ಲಿ ಒಂದು ಕ್ಷಣ ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಸ್ವಲ್ಪ ಬಿಗುಮಾನ ಬಿಟ್ಟು, ನಮ್ಮ ಸ್ಥಾನ ಮಾನಗಳ ಬಗೆಗಿನ ಮೇಲರಿಮೆ ಅಥವಾ ಕೀಳರಿಮೆ ಏನೇ ಇದ್ದರೂ ಅದೆಲ್ಲವನ್ನು ಬಿಟ್ಟು ಮಾಡುತ್ತಿರುವ ವೃತ್ತಿಯ ಜೊತೆಗೇ ಪ್ರವೃತ್ತಿಯನ್ನೂ ಪೋಷಿಸಿಕೊಂಡರೆ ಸಾಕು; ಪ್ರತಿ ದಿನವನ್ನೂ, ಪ್ರತಿ ಕ್ಷಣವನ್ನೂ ಆಸ್ವಾದಿಸಬಹುದು.

ನೆನಪಿರಲಿ, ಸಮಯ ಸಾಲುವುದಿಲ್ಲ ಎಂಬ ಮಾತು ಇಲ್ಲಿ ಅಪ್ರಸ್ತುತ. ಯಾಕೆಂದರೆ ಇಲ್ಲಿ ಹೇಳುತ್ತಿರುವುದು ಪ್ರತಿಕ್ಷಣವನ್ನೂ ಆಸ್ವಾದಿಸು ಎಂದು. ಹಾಗಿರುವಾಗ ಅದಕ್ಕೆಂದೇ ಸಮಯ ಮೀಸಲಿಡುವ ಅಗತ್ಯವಾದರೂ ಹೇಗೆ ಬರುತ್ತದೆ?

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.