ಒಬ್ಬ ಝೆನ್ ಮಾಸ್ಟರ್ ಸಾವಿನ ಹಾಸಿಗೆಯಲ್ಲಿದ್ದ. ಅವನ ಸುತ್ತ ಶಿಷ್ಯರೆಲ್ಲ ನೆರೆದಿದ್ದರು. ಹಿರಿಯ ಶಿಷ್ಯ ಮಾಸ್ಟರ್ ನತ್ತ ಬಾಗಿ ಕಿವಿಯಲ್ಲಿ ಮಾತಾಡಿದ.
“ ಮಾಸ್ಟರ್, ಇಲ್ಲಿ ನೆರೆದಿರುವ ಶಿಷ್ಯರಿಗಾಗಿ ನಿಮ್ಮ ಕೊನೆಯ ಸಂದೇಶವೇನಾದರೂ ಇದೆಯೆ?”
ಮಾಸ್ಟರ್ ನಿಧಾನವಾಗಿ ಕಣ್ತೆರೆಯುತ್ತ ಹಿರಿಯ ಶಿಷ್ಯನ ಕಿವಿಯಲ್ಲಿ ಸಣ್ಣ ದನಿಯಲ್ಲಿ ಹೇಳಿದ.
“ ಅವರಿಗೆಲ್ಲ ಹೇಳು, ಸತ್ಯ ನದಿಯಂತೆ”
ಹಿರಿಯ ಶಿಷ್ಯ ತನ್ನ ಪಕ್ಕ ಕುಳಿತವನ ಕಿವಿಯಲ್ಲಿ ಮಾಸ್ಟರ್ ಹೇಳಿದ ಮಾತು ಹೇಳಿದ, ಸತ್ಯ ನದಿಯಂತೆ.
ಹೀಗೆ ಪ್ರತಿಯೊಬ್ಬರೂ ತಮ್ಮ ಪಕ್ಕದಲ್ಲಿ ಕುಳಿತವರ ಕಿವಿಯಲ್ಲಿ ಸರತಿಯಂತೆ ಈ ಮಾತು ಹೇಳುತ್ತ ಹೋದರು.
ಈ ಮಾತು ಕೊನೆಯಲ್ಲಿ ಕುಳಿತಿದ್ದ ಶಿಷ್ಯನ ಕಿವಿ ಮುಟ್ಟಿದಾಗ, ಅವ ತಿರುಗಿ ಪ್ರಶ್ನೆ ಮಾಡಿದ
“ ಈ ಮಾತಿನ ಅರ್ಥ ಏನು ? “
ಈ ಪ್ರಶ್ನೆ ಮತ್ತೆ ಮೊದಲಿನಂತೆ ಮತ್ತೆ ಎಲ್ಲ ಕಿವಿಗಳ ಮೂಲತ ಹಾಯ್ದು, ವಾಪಸ್ ಹಿರಿಯ ಶಿಷ್ಯನನ್ನು ತಲುಪಿತು.
ಹಿರಿಯ ಶಿಷ್ಯ ಮಾಸ್ಟರ್ ನತ್ತ ಬಾಗಿ ಅವನ ಕಿವಿಯಲ್ಲಿ ಕೇಳಿದ
“ ಸತ್ಯ ನದಿಯಂತೆ, ಈ ಮಾತಿನ ಅರ್ಥ ಏನು ಮಾಸ್ಟರ್ ?”
ಮಾಸ್ಟರ್ ನಿಧಾನವಾಗಿ ಕಣ್ತೆರೆದು ಸಣ್ಣ ದನಿಯಲ್ಲಿ ಹೇಳಿದ
“ ಈ ಮಾತು ವಾಪಸ್ ನನ್ನ ಕಿವಿಗೆ ಬಂದಿದೆಯೆಂದರೆ, ಒಂದಂತೂ ಪಕ್ಕಾ ಆಯ್ತು, ಸತ್ಯ ನದಿಯಂತಲ್ಲ”
(ಸಂಗ್ರಹ ಮತ್ತು ನಿರೂಪಣೆ: ಚಿದಂಬರ ನರೇಂದ್ರ)