ಆನಂದದಿಂದ ಇರುವುದು ಆತ್ಮದ ಅಭ್ಯಾಸ. ಅದನ್ನು ಹೊರಗಿನಿಂದ ಎರವಲು ಪಡೆಯಬೇಕಾಗಿಲ್ಲ. ಆತ್ಮವು ಆನಂಮಯ ಕೋಶದಿಂದ ಸದಾ ಸುತ್ತುವರಿಯಲ್ಪಟ್ಟಿರುತ್ತದೆ – ಎನ್ನುತ್ತದೆ ವೇದಾಂತ ಸೂತ್ರ.
ಆನಂದಮಯ ಎಂಬ ಪದದ ತಾತ್ತ್ವಿಕ, ಪಾಂಡಿತ್ಯಪೂರ್ಣ ಜಿಜ್ಞಾಸೆಗಳೇನೇ ಇರಲಿ… ದೈನಂದಿನ ಬದುಕಿನ ಆನ್ವಯಿಕ ಅರ್ಥಕ್ಕೆ ಹಚ್ಚಿದರೆ ಇದು ಬಹಳ ಸರಳವಾಗಿದೆ. ಆತ್ಮವನ್ನು ‘ಆನಂದಮಯೋsಅಭ್ಯಾಸಾತ್’ ಎನ್ನುತ್ತದೆ ಬ್ರಹ್ಮಸೂತ್ರ. ಇದರ ಸರಳ ಅರ್ಥ – “ಆತ್ಮಕ್ಕೆ ಆನಂದವಾಗಿರುವುದೇ ಅಭ್ಯಾಸ. ಆನಂದವು ಆತ್ಮದ ಸಹಜ ಭಾವ. ಅದು ಆತ್ಮದ ಸಹಜ ಸಿದ್ಧಿ. ಆತ್ಮವು ಆನಂದಮಯ ಕೋಶದಿಂದ ಸುತ್ತುವರಿಯಲ್ಪಟ್ಟಿದ್ದು, ಅದನ್ನೇ ರೂಢಿಯಾಗಿಸಿಕೊಂಡಿದೆ” ಎಂದು.
ಇಂಥಾ ಆನಂದಮಯವಾದ ಆತ್ಮ ನಮ್ಮೊಳಗೆ ಇರುವಾಗ ನಾವು ದುಃಖಿತರಾಗಿ ಇರುವುದನ್ನೆ ಹೆಚ್ಚು ಹಂಬಲಿಸುತ್ತೇವೆ. ನಮಗೆ ಸಂತಸವನ್ನು ಕಾಪಿಟ್ಟುಕೊಳ್ಳುವುದಕ್ಕಿಂತ ದುಃಖಗಳನ್ನು ಕೆದಕಿ ನೋಯುವುದರಲ್ಲೇ ಹೆಚ್ಚಿನ ಆಸಕ್ತಿ. ದುಃಖಕ್ಕೆ ಕಾರಣವಾದ ಅರಿಷಡ್ವರ್ಗಗಳೊಡನೆ ನಮ್ಮ ಗೆಳೆತನ. ಯಾವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ಮನುಷ್ಯ ಜೀವದ ಆರು ಶತ್ರುಗಲೆಂದು ಕರೆದಿದ್ದಾರೋ, ಆ ಶತ್ರುಗಳೇ ನಮ್ಮ ಪರಮ ಮಿತ್ರರು. ಅವುಗಳ ಸಹವಾಸಲದಲಿ ನಾವು ನಮ್ಮ ಗುರುತು ಪಡೆಯಲು ಹವಣಿಸುತ್ತೇನೆ. ಪರಿಣಾಮವಾಗಿ ಹೆಚ್ಚುಹೆಚ್ಚು ದುಃಖ್ಕಕೆ ಒಳಗಾಗುತ್ತಾ ಹೋಗುತ್ತೇವೆ.
ಆದ್ದರಿಂದ, ಈ ಶತ್ರುಗಳನ್ನು ದೂರವಿಡಿ. ದುಃಖಕ್ಕೆ ಕಾರಣ ಏನಿವೆಯೋ ಅವನ್ನೇ ದೂರ ಮಾಡಿದರೆ ನಮ್ಮ ನೈಜ ಸುಖಕ್ಕೆ ಮುಸುಕಿದ ತೆರೆ ಸರಿಯುವುದು. ಅಲ್ಲಿ ಆನಂದದ ಬೆಳಕು ಮೂಡುವುದು.