ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ.
ಅಧ್ಯಾಯ 10 ವಿಭೂತಿ ಯೋಗ
ಹತ್ತನೇ ಅಧ್ಯಾಯವು ಪರಮ ಅಸ್ತಿತ್ವದ ಮಹಿಮೆಯನ್ನು ವಿವರಿಸುತ್ತದೆ. ಅರ್ಜುನನು ಸಂಪೂರ್ಣ ಶರಣಾಗತನಾಗಿ, ಈ ಪರಮೋನ್ನತ ಸಂಗತಿಯನ್ನು ಕೇಳಲು ಮತ್ತು ಅರಿತುಕೊಳ್ಳಲು ಅರ್ಹತೆ ಪಡೆದಿರುವನೆಂದು ಖಾತ್ರಿಯಾದ ನಂತರವೇ ಗೀತಾಚಾರ್ಯನು ಇದನ್ನು ಬೋಧಿಸುತ್ತಾನೆ.
ಯಾರಲ್ಲಿ ಬುದ್ಧಿ, ಜ್ಞಾನ, ಅಸಮ್ಮೋಹ, ಕ್ಷಮಾ, ಸತ್ಯ ಹಾಗೂ ದಮ -ಶಮಗಳು ಇರುವವೋ ಅವರು ಇದನ್ನು ಕೇಳುವ ಅರ್ಹತೆ ಪಡೆಯುತ್ತಾರೆ ಎಂದು ಕೃಷ್ಣನು ಹೇಳುತ್ತಾನೆ. ಈ ಮೂಲಕ ಅವನು ಜ್ಞಾನಾರ್ಜನೆಗೆ ಈ ಗುಣಗಳನ್ನು ಹೊಂದಿರಬೇಕಾದುದು ಅಗತ್ಯದೆಂದು ಸೂಚಿಸುತ್ತಾನೆ. ಜೀವಿಯ ಪ್ರತಿಯೊಂದು ಚಲನವಲನ – ಭಾವಗಳೂ ಪರಮ ಅಸ್ತಿತ್ವದ ಮರ್ಜಿಯಿಂದಲೇ ಉದಿಸುವವು ಎಂಬುದನ್ನೂ ಈ ಅಧ್ಯಾಯದಲ್ಲಿ ಗೀತಾಚಾರ್ಯನು ಸ್ಪಷ್ಟಪಡಿಸುತ್ತಾನೆ. ಪರಮ ಅಸ್ತಿತ್ವವು ಸಾಕಾರವಾಗಿ ಕಾಣಬಯಸುವವರಿಗೆ ಯಾವುದೆಲ್ಲ ರೀತಿಯಲ್ಲಿ ತನ್ನನ್ನು ತೋರ್ಪಡಿಸಿಕೊಳ್ಳುತ್ತದೆ ಎಂಬುದನ್ನೂ ಹಾಗೆ ನೋಡಲು ಬಯಸುವವನು ಹೊಂದಿರಬೇಕಾದ ಜ್ಞಾನವನ್ನೂ ಕೃಷ್ಣನು ವಿವರಿಸುತ್ತಾನೆ.
ಈ ಅಧ್ಯಾಯದ ಕೊನೆಯಲ್ಲಿ ಅರ್ಜುನನು ಪರಮ ಅಸ್ತಿತ್ವ ಅಥವಾ ಭಗವಂತನ ಉಪಾಸನಾ ವಿಧಾನ ಯಾವುದು ತಿಳಿಸಿಕೊಡು ಎಂದು ಕೇಳಿಕೊಳ್ಳುತ್ತಾನೆ.
ಅಧ್ಯಾಯ 11 ವಿಶ್ವರೂಪ ದರ್ಶನ ಯೋಗ
ಹನ್ನೊಂದನೆ ಅಧ್ಯಾಯವು ಪರಮ ಅಸ್ತಿತ್ವವನ್ನು ಅಥವಾ ಭಗವಂತನನ್ನು ಕುರಿತು ಚಿಂತನೆ ನಡೆಸುವಾಗ ಅನುಸರಿಸಬೇಕಾದ ವಿಧಾನವನ್ನು ತಿಳಿಸುತ್ತದೆ. ಇದು ಭಗವಂತನ ವಿಶ್ವರೂಪ ದರ್ಶನ ಅಧ್ಯಾಯ.
ಕೃಷ್ಣ ಅರ್ಜುನನಿಗೆ ದಿವ್ಯನೇತ್ರವನ್ನು ಕರುಣಿಸಿ ತನ್ನ ವಿಶ್ವರೂಪ ದರ್ಶನ ಮಾಡಿಸುತ್ತಾನೆ. ಆ ವಿಶ್ವರೂಪದ ವರ್ಣನೆ ಇಲ್ಲಿದೆ. ಇಲ್ಲಿ ಸರ್ವವ್ಯಾಪ್ತ, ಸರ್ವಾಂತರ್ಯಾಮಿ, ಸರ್ವಸಮರ್ಥ ಭಗವಂತನ ಚಿಂತನೆ ಹೇಗೆ ಮಾಡಬೇಕು ಎನ್ನುವ ಮಾರ್ಗದರ್ಶನವಿದೆ. ಭಗವಂತನ ರೂಪವನ್ನು ಯಾವುದೋ ಒಂದು ಲೌಕಿಕ ಅನುಭವದೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ. ಅದು ಲೋಕಾತೀತ ಅನುಭವ. ಆ ಅದ್ಭುತ ಅನುಭವದ ಚಿತ್ರಣ ಈ ಅಧ್ಯಾಯ.
ಭಗವಂತನ ಸರ್ವಗತವಾದ ವಿಶ್ವರೂಪವನ್ನು ಎಲ್ಲರೂ ಧ್ಯಾನ ಮಾಡಲು ಸಾಧ್ಯವಿಲ್ಲ. ಆದರೆ ಎಲ್ಲ ಕಡೆ ತುಂಬಿರುವ ಭಗವಂತನ ಕಿಂಚಿತ್ ದರ್ಶನ ಪ್ರತಿಯೊಬ್ಬರೂ ಧ್ಯಾನ ಯೋಗದಲ್ಲಿ ಪಡೆಯಲು ಸಾಧ್ಯವಿದೆ. ಹೇಗೆ ಅರ್ಜುನನಿಗೆ ಕೃಷ್ಣ ತನ್ನ ವಿಶ್ವರೂಪವನ್ನು ತೋರಿಸಿದನೋ ಹಾಗೆ ನಮಗೆ ಧ್ಯಾನದಲ್ಲಿ ಕೂಡ ತನ್ನ ರೂಪವನ್ನು ಆತನೇ ತೋರಿಸಬೇಕು. ಇದು ಹೊರಪ್ರಪಂಚದಲ್ಲಿ ಕಾಣುವ ರೂಪವಲ್ಲ. ನಾವು ನಮ್ಮ ಒಳಗಣ್ಣನ್ನು ತೆರೆದು ಕುಳಿತು ಧ್ಯಾನ ಮಾಡಬೇಕು, ಭಗವಂತನಲ್ಲಿ ಶರಣಾಗಬೇಕು. ಕಾತರತೆಯಿಂದ ಕರೆದಾಗ ಒಳಗಿನಿಂದ ಯಾವ ಅನುಭೂತಿ ಉಂಟಾಗುತ್ತದೆಯೋ, ಅದು ಲೌಕಿಕ ಅನುಭೂತಿಯನ್ನು ಮೀರಿದ ವಿಚಾರವಾಗಿದೆ. ಆದ್ದರಿಂದ ಅದರ ವಿವರಣೆ ಅಸಾಧ್ಯ.
ಈ ಅಧ್ಯಾಯದಲ್ಲಿ ಭಗವಂತನ ಮಾತು ಕಡಿಮೆ. ಇಲ್ಲಿ ಕೃಷ್ಣನ ವಿಶ್ವರೂಪವನ್ನು ಕಂಡವರ ಮಾತಿದೆ. ಅವರು ಕಂಡ ರೀತಿಯನ್ನು ಕೇಳಿ ನಾವು ಭಗವಂತನನ್ನು ಕಾಣಲು ಪ್ರಯತ್ನ ಮಾಡಬೇಕು. ಇದು ನಮ್ಮ ಅಂತರಂಗದ ಅಧ್ಯಾತ್ಮದ ಸಾಕ್ಷಾತ್ಕಾರಕ್ಕೆ ಪೂರಕವಾದ, ಧ್ಯಾನದ ದಾರಿಯಲ್ಲಿ ನಮ್ಮನ್ನು ಕೊಂಡೊಯ್ಯುವ ಬಹಳ ಮಹತ್ವದ ಅಧ್ಯಾಯ.