ಅಂತರ್ ಯಾತ್ರೆಯೇ ಮಹಾ ಯಾತ್ರೆ ~ ಹಫೀಜ್ ಹೇಳಿದ್ದು : ಅರಳಿಮರ POSTER

“ಒಂದು ಅದ್ಭುತವಾದ ಯಾತ್ರೆ ಮಾಡಬೇಕು ಅನ್ನಿಸಿತು. ಮೂರು ದಿನಗಳ ಕಾಲ ಅಲ್ಲಾಡದೆ ಕುಳಿತೆ” ಅನ್ನುತ್ತಾನೆ 14ನೇ ಶತಮಾನದ ಇರಾನಿ ಕವಿ ಹಫೀಜ್ ಶಿರಾಜಿ

sit

ಮೂರು ದಿನಗಳ ನಿಶ್ಚಲ ಏಕಾಂತವನ್ನು ಹಫಿಜ್ ಇಲ್ಲಿ ಮಹಾಯಾತ್ರೆಗೆ ಸಮನಾಗಿ ಕಂಡಿದ್ದಾನೆ. ಅಥವಾ ಅಂಥಾ ನಿಶ್ಚಲ ಏಕಾಂತವೇ  ಅದ್ಭುತಯಾತ್ರೆ ಅನ್ನುವುದು ಅವನ ಆಲೋಚನೆಯಾಗಿದ್ದಿರಬಹುದು. 

ಹಾಗೆ ನಿಶ್ಚಲವಾಗಿ ಕುಳಿತುಕೊಂಡು ಹಫಿಜ್ ಮಾಡಿದ್ದೇನು? ಸುಮ್ಮನೆ ಕುಳಿತುಕೊಳ್ಳುವುದು ಯಾತ್ರೆ ಹೇಗಾಗುತ್ತದೆ? 

ಹೇಗೆಂದರೆ, ಅಂಥಾ ಅವಸ್ಥೆಯಲ್ಲಿ ನಮ್ಮ ಅಂತರ್ ಯಾತ್ರೆ ನಡೆಯುತ್ತದೆ. ಈ ಯಾತ್ರೆಯು ನಾವು ಗಮನಿಸದೆ ಬಿಟ್ಟು, ಹುಗಿದು ಹಾಕಿದ, ದಬ್ಬುತ್ತಲೇ ಬಂದ ನಮ್ಮದೇ ಅನೇಕ ಸಂಗತಿಗಳನ್ನು ನಮಗೇ ತೋರಿಸುತ್ತಾ ಹೋಗುತ್ತದೆ. ನಮ್ಮ ನಡವಳಿಕೆಯನ್ನು, ಮನಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕೆಂದರೆ, ನಮ್ಮ ಅಂತರಂಗದಲ್ಲಿ ಏನೇನಿದೆಯೋ ಅವೆಲ್ಲವನ್ನೂ ಆಗಾಗ ಸಾವಧಾನವಾಗಿ ಕುಳಿತು ನೋಡುತ್ತ ಇರಬೇಕು. ಇಲ್ಲವಾದರೆ ಅವು ಅಲ್ಲೇ ಕೊಳೆತು, ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತಾ ಸಾಗುತ್ತವೆ. ಅಂತರ್’ಯಾತ್ರೆಯ ಈ ಕಾಣ್ಕೆಗಳು ನಮ್ಮನ್ನು ನಮಗೆ ಅರ್ಥ ಮಾಡಿಸುತ್ತವೆ.

ಹೊರಗಿನ ಯಾತ್ರೆ ನಮಗೆ ಜಗತ್ತನ್ನು ಅರ್ಥ ಮಾಡಿಸುತ್ತದೆಯೇನೋ ಸರಿ. ಆದರೆ ನಾವು ಆ ಜಗತ್ತನ್ನೂ ಅರ್ಥ ಮಾಡಿಕೊಳ್ಳುವುದು ನಮಗೆ ಬೇಕಾದಂತೆಯೇ. ಹಾಗೆ ಅರ್ಥೈಸುವಿಕೆಯ ಮೇಲೆ ಪ್ರಭಾವ ಬೀರುವುದು ನಮ್ಮೊಳಗಿನ ಈ ಎಲ್ಲ ಸಂಗತಿಗಳು. ಆದ್ದರಿಂದ, ನಮ್ಮೊಳಗಿನ ಪ್ರಯಾಣವನ್ನು ಮಾಡುತ್ತಲೇ ನಾವು ಹೊರಗಿನ ಪ್ರಯಾಣವನ್ನು ಮಾಡುವುದು ಅವಶ್ಯಕ. 

ಹಫೀಜ್ ಹೇಳುತ್ತಾನೆ, “ಮೂರು ದಿನಗಳ ಕಾಲ ಅಲ್ಲಾಡದೆ ಕುಳಿತು ಅದ್ಭುತ ಯಾತ್ರೆ ಮಾಡಿದೆ” ಎಂದು. ಈ ಅಂತರಂಗದ ಯಾತ್ರೆ ಅವನಿಗೆ ಕಟ್ಟಿಕೊಟ್ಟಿರಬಹುದಾದ ಉಲ್ಲಾಸ, ಆತ್ಮವಿಶ್ವಾಸ ಮತ್ತು ಶಕ್ತಿಯನ್ನು ಊಹಿಸಿ. ಅವನ ಕಾಣ್ಕೆಯ ಭರವಸೆಯ ಮೇಲೆ ನಾವೂ ಅಂಥದೊಂದು ಪ್ರಯತ್ನವನ್ನು ಕನಿಷ್ಠ ತಿಂಗಳಿಗೆ ಒಮ್ಮೆ, ಒಂದು ದಿನದ ಮಟ್ಟಿಗಾದರೂ ಮಾಡಬಹುದು; ಅಲ್ಲವೆ? 

 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.