“ವಿಶ್ವದ ಹಿಂದೆ ಗೋಚರಿಸುವ ‘ನಾನು’, ದೇವರೆಂದು ಕರೆಯಲ್ಪಡುತ್ತದೆ. ಅದೇ ‘ನಾನು’, ದೇಹದ ಹಿಂದೆ ಕಂಡುಬಂದರೆ, ಅದನ್ನು ‘ಆತ್ಮ’ವೆಂದು ಕರೆಯುತ್ತೇವೆ” ಅನ್ನುತ್ತಾರೆ ಸ್ವಾಮಿ ವಿವೇಕಾನಂದ.
ಪರಮೋನ್ನತ ಶಕ್ತಿ ಅಥವಾ ಪರಮ ಅಸ್ತಿತ್ವವೇ ದೇವರು. ಸೃಷ್ಟಿಯೊಂದು ಇದೆ ಎಂದಾದಮೇಲೆ, ಸೃಷ್ಟಿಗೆ ಚಾಲನೆ ನೀಡಿ ಅದನ್ನು ಸಂಭಾಳಿಸುತ್ತಿರುವ ಶಕ್ತಿಯೂ ಇರಲೇಬೇಕು. ಈ ಕರ್ತೃತ್ವ ಶಕ್ತಿಯೇ ‘ನಾನು’.
ಸೃಷ್ಟಿಯನ್ನು ಸಚೇತನಗೊಳಿಸುವ ಕರ್ತೃವಾದ ‘ನಾನು’, ದೇವರೆಂದು ಕರೆಸಿಕೊಂಡರೆ; ದೇಹವನ್ನು ಸಚೇತನಗೊಳಿಸುವ ‘ನಾನು’ ಎಂಬ ಕರ್ತೃವು ‘ಆತ್ಮ’ವೆಂದು ಕರೆಯಲ್ಪಡುತ್ತದೆ.
ಸರಳವಾಗಿ ಹೇಳುವುದಾದರೆ : ಚಾಲಕಶಕ್ತಿಯೇ ನಾನು. ಇದನ್ನೇ ನಾವು ದೇವರೆಂದೂ ಆತ್ಮವೆಂದೂ ಕರೆಯುತ್ತೇವೆ. ಈ ಸಮೀಕರಣದ ಪ್ರಕಾರ, ಆತ್ಮವೇ ದೇವರೂ ದೇವರೇ ಆತ್ಮವೂ ಆಗಿದೆ!