ಪ್ರಾಚೀನ ಸಾಹಿತ್ಯದಲ್ಲಿ ಪ್ರಕೃತಿ ಸಂರಕ್ಷಣೆಯ ಪಾಠ : ಅರಳಿಬಳಗ ಓದುಗರ ಲೇಖನ

ನೂರಾರು, ಸಾವಿರಾರು ವರ್ಷಗಳಿಂದ ಪ್ರಕೃತಿ ಸಂರಕ್ಷಣೆಯ ಮಹತ್ವವನ್ನು ಮತ್ತೆ ಮತ್ತೆ ಹೇಳುತ್ತ ಬಂದಿದ್ದರೂ ನಾವು ಅರ್ಥ ಮಾಡಿಕೊಂಡಿಲ್ಲ. ಮತ್ತೊಮ್ಮೆ ಹಳೆಯ, ಹೊಸತಾದ ಬೋಧನೆಗಳೆಲ್ಲವನ್ನೂ ನೆನೆಯುತ್ತಾ, ನಮ್ಮ ಜವಾಬ್ದಾರಿಯನ್ನು ಮನನ ಮಾಡಿಕೊಳ್ಳಲು ಇದು ಸಕಾಲ ~ ರಾಘವ  ಶರ್ಮ

envi

ಪ್ರಕೃತಿ ಸಂರಕ್ಷಣೆಯ ಬಗ್ಗೆ ವಿವರಿಸುವಾಗ ಇಂದಿನ ವಿಜ್ಞಾನಿಗಳು ‘ಹುಲಿಗಳಿಲ್ಲದಿದ್ದರೆ ನಮಗೆ ಕುಡಿಯುವ ನೀರಿಲ್ಲ’ ಎಂದಾಗ ಜನ ಸಾಮಾನ್ಯರಿಗೆ  ಗೂಂದಲವಾಗುವುದು ಸಹಜ. ಈ ಮಾತುಗಳನ್ನು ಕೂಲಂಕಷವಾಗಿ ವಿಶ್ಲೇಶಿಸಿದಾಗ ಅರ್ಥವಾಗುವುದು. ಹುಲಿಗಳ (ಮಾಂಸಾಹಾರಿ ಪ್ರಾಣೆಗಳ) ನಾಶದಿಂದ ಸಸ್ಯಹಾರಿ ಪ್ರಾಣೆಗಳ ಸಂಖ್ಯೆ  ಹೆಚ್ಚುತ್ತಾ ಹೋಗುತ್ತದೆ. ಅವುಗಳ ಸಂಖ್ಯೆ ಹೆಚ್ಚಿದಂತೆಲ್ಲ ಹುಲ್ಲು ಮತ್ತು ಇತರೆ ಸಸ್ಯಗಳು ಸಂಪೂರ್ಣವಾಗಿ ಸೇವಿಸಲ್ಪಡುತ್ತವೆ.  ಸಸ್ಯಗಳಿಲ್ಲದ ಬೋಳಾದ ಭೂವಿಯ ಮೇಲ್ಮೈ ಗಾಳಿ ಮಳೆಯ ಹೊಡೆತಕ್ಕೆ ಸಿಕ್ಕಿ ಮಣ್ಣೆನ ಸವಕಳಿ ಹೆಚ್ಚುತ್ತದೆ. ಇದರಿಂದ ಕಾಡುಗಳ ಬೆಳವಣೆಗೆ ನಿಲ್ಲುತ್ತದೆ, ಕಾಡುಗಳ ನಾಶದಿಂದ ಮಳೆ ಕಡಿವೆಯಾಗುತ್ತದೆ. ಮಳೆ ಕಡಿಮೆಯಾದಂತೆ ನಮ್ಮ ತೊರೆ, ನದಿಗಳು ಬತ್ತಿಹೋಗುತ್ತವೆ. ಅಂತರ್ಜಲ ನಾಶವಾಗುತ್ತದೆ. ನೀರಿನ ಕೊರತೆ ಹೆಚ್ಚಾಗುತ್ತಾಹೋಗುತ್ತದೆ. ನಮಗೆ ಕುಡಿಯುವ ನೀರಿನ ಕೊರತೆ ಉಂಟಾಗುತ್ತದೆ.

ನಾವು ಗಮನಿಸಬೇಕಾಗಿರುವ ಮುಖ್ಯ ಸಂಗತಿ ಎಂದರೆ ಈ ಮಾತನ್ನು ನಮ್ಮ ಪೂರ್ವಿಕರು  ಬಹಳ ಹಿಂದಿನಿಂದಲೂ ಸ್ಪಷ್ಟವಾಗಿ ಹೇಳುತ್ತ ಬಂದಿದ್ದಾರೆ.
“ಮಾ ವನಂ ಛಿಂಧಿ ಸವ್ಯಾಘ್ರಂ ಮಾ ವ್ಯಾಘ್ರಾ ವನಾತ್ ನೀನಶನ್ ವನಂ ಹಿ ರಕ್ಷತೇ ವ್ಯಾಘ್ರೈಃ ವ್ಯಾಘ್ರಾನ್ ರಕ್ಷತಿ ಕಾನನಂ” ಎನ್ನುವ ಹೇಳಿಕೆಯೊಂದಿದೆ.
ಇದರ ಸಾರಾಂಶ; “ಹುಲಿಗಳಿರುವ ಕಾಡುಗಳನ್ನು ನಾಶಮಾಡಬೇಡ, ಕಾಡುಗಳಲ್ಲಿರುವ ಹುಲಿಗಳನ್ನು ನಾಶ ಮಾಡಬೇಡ. ಕಾಡುಗಳು ಹುಲಿಗಳನ್ನೂ, ಹುಲಿಗಳು ಕಾಡುಗಳನ್ನೂ ರಕ್ಷಿಸುತ್ತವೆ” ಎಂದು.

ಪುರಂದರ ದಾಸರು ‘ಮಣ್ಣಿಂದ ಕಾಯ ಮಣ್ಣಿಂದ ಅನ್ನ ಉದಕ ಊಟವೀಯೋದು ಮಣ್ಣು’ ಎಂದು ಹಾಡುವ ಮೂಲಕ, ನಮ್ಮ ಪ್ರಾಚೀನರು ಹೇಳಿದ್ದ ಪಂಚ ಭೂತಗಳ ವಿಶ್ಲೇಷಣೆ ಮಾಡಿದ್ದಾರೆ. ಮಣ್ಣಿನಿಂದ ಸಸ್ಯರಾಶಿ, ಸಸ್ಯಗಳಿಂದ ಪ್ರಾಣೆಗಳ ಬದುಕು, ಮಣ್ಣಿನಿಂದಲೇ ಕಾಡು, ಕಾಡುಗಳಿಂದ ಮಳೆ, ಸಂಮೃದ್ಧ ಜಲಸಂಪತ್ತು ಇದರಿಂದ ನಮಗೆ ಆಹಾರದ ಬೆಳೆಗಳು. ಎಂಥಹ ಅರಿವು!
ಇನ್ನು, ವನ್ಯ ಜೀವಿಗಳ ಸಂರಕ್ಷಣೆ ಮತ್ತು ಅವುಗಳ ಪ್ರಾಮುಖ್ಯತೆಯ ವಿವರಗಳನ್ನು ‘ಕೌಟಿಲ್ಯನ ಅರ್ಥಶಾಸ್ತ್ರ’ ದಲ್ಲಿ ಕಾಣಬಹುದು. ವಿವಿಧ ಬಗೆಯ ಕಾಡುಗಳು, ಅವುಗಳ ಸಂರಕ್ಷಣೆ, ಸಂರಕ್ಷಣೆಯ ಹೊಣೆ ಹೊತ್ತ ವಿವಿದ ಇಲಾಖೆಗಳ, ಅಧಿಕಾರಿಗಳ ಕರ್ತವ್ಯಗಳು ಹೀಗೆ ಕೂಲಂಕುಷವಾಗಿ ಕೌಟಿಲ್ಯ ವಿವರಿಸಿದ್ದಾನೆ.

ಕೌಟಿಲ್ಯನ ಕಾಲದಲ್ಲಿ ಸಂರಕ್ಷಣೆಗೆ ಬೇಕಾದ ಕಟ್ಟುನಿಟ್ಟಾದ ಕಾನೂನುಗಳನ್ನು ಹೊಂದಿದ್ದರಲ್ಲದೆ ಅವುಗಳನ್ನು ಯಶಸ್ವಿಯಾಗಿ ಬಳಸುತ್ತಿದ್ದರು. ವನ್ಯ ಜೀವಿಗಳ ಹತ್ಯೆಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿತ್ತು. ಆನೆಯ ಹಂತಕನಿಗೆ ಮರಣದಂಡನೆಯ ಶಿಕ್ಷೆ ಕಡ್ಡಾಯವಾಗಿತ್ತು.
“ಪ್ರರೋಹಿಶಾಖಿನಾಂ ಶಾಖಾಸ್ಕಂಧಸರ್ವವಿದಾರಣೇ
ಉಪಜೀವ್ಯದ್ರುಮಾಣಾಂ ಚ ವಿಂಶತೇದ್ರ್ವಿಗುಣೋ ದಮ:”
ಪರೋಪಕಾರಿಯಾದ ಮರಗಳ ಕೊಂಬೆಯನ್ನಾಗಲಿ, ಬುಡವಾಗಲಿ ಅಥವಾ ಇಡಿ ಮರವನ್ನು
ಕಡೆದವರಿಗೆ ಮರದ ಬೆಲೆಯ ಎರಡಷ್ಟು ದ್ರವ್ಯದಂಡ ವಿಧಿಸಬೇಕು. ಎನ್ನುತ್ತಾರೆ ಯಾಜ್ಞವಲ್ಕ್ಯರು.

ನೂರಾರು, ಸಾವಿರಾರು ವರ್ಷಗಳಿಂದ ಇದನ್ನು ಮತ್ತೆ ಮತ್ತೆ ಹೇಳುತ್ತ ಬಂದಿದ್ದರೂ ನಾವು ಅರ್ಥ ಮಾಡಿಕೊಂಡಿಲ್ಲ. ಮತ್ತೊಮ್ಮೆ ಹಳೆಯ, ಹೊಸತಾದ ಬೋಧನೆಗಳೆಲ್ಲವನ್ನೂ ನೆನೆಯುತ್ತಾ, ನಮ್ಮ ಜವಾಬ್ದಾರಿಯನ್ನು ಮನನ ಮಾಡಿಕೊಳ್ಳಲು ಇದು ಸಕಾಲ.

ನೀವೂ ನಿಮ್ಮ ಲೇಖನವನ್ನು ಕಳುಹಿಸಬಹುದು. ನಮ್ಮ ಇ – ವಿಳಾಸ : aralimara123@gmail.com

Leave a Reply