
ಮೂಲ : ಅತ್ತಾರ್ ನಿಶಾಪುರಿ | ಅನುವಾದ : ಚೇತನಾ ತೀರ್ಥಹಳ್ಳಿ
ಸರ್ರಕ್ಸಿನ ಲುಖ್ಮಾನ ಬೇಡಿದ,
“ಅಲ್ಲಾಹ್! ನಿನ್ನ ನಿಷ್ಠಾವಂತ ಸೇವಕ,
ಬಡವ, ವಿಭ್ರಾಂತ, ಮುಪ್ಪಿನ ಈ ಮುದಿ ಗುಲಾಮನನ್ನು ಬಿಡುಗಡೆಗೊಳಿಸು.
ಆಯುಷ್ಮಾನವಿಡೀ ನೀಯತ್ತಿನ ವಿನಾ ಮತ್ತೇನೂ ಬದುಕಿಲ್ಲ ನಾನು!
ದುಗುಡದ ಹೊರೆ ಹೊತ್ತು ಬೆನ್ನು ಬಾಗಿಹುದು,
ಯೌವನದ ಕರಿಗೂದಲೀಗ ಹಿಮದ ಬಣ್ಣ.
ವಿಮೋಚನೆ ಕೊಡು; ನನ್ನನ್ನು ಹೋಗಲು ಬಿಡು”
ಉತ್ತರಿಸಿತು ದೇವವಾಣಿ :
“ನೀನು ಚಿಂತೆಯಲಿ ಬಂಧಿ, ಚಿತ್ತದಲಿ ಕೀಲಿ ಇದೆ.
ಬಿಡಿಸಿಕೊಂಡರೆ ನಿನ್ನ, ಬಿಡುಗಡೆ ಹೊಂದುವೆ ನೀನು;
ಕಳೆದರೆ ಚಿತ್ತ – ಚಿಂತೆ, ಮತ್ತೆ ಗುಲಾಮನಲ್ಲ ನೀನು!”
ಲುಖ್ಮಾನ, ಮುಗಿಲೆಡೆಗೆ ಕೈಚಾಚಿ ನುಡಿದ;
“ಖುದಾ! ನೀನಲ್ಲದೆ ಮತ್ತಾರು ನನಗೆ?
ಚಿತ್ತ – ಚಿಂತೆಗಳ ಹಂಗು ಇನ್ನೇಕೆ ನನಗೆ!?”
ದ್ವಂದ್ವ ತೊರೆದು ಶರಣಾದ ಮರುಕ್ಷಣ,
ಶುರುವಾಯಿತು, ಅದೋ! ಉನ್ಮತ್ತ ನರ್ತನ!!
“ಯಾರೀಗ ನಾನು? ಗುಲಾಮನೆಲ್ಲೋ ಸತ್ತ!!
ಬಿಡುಗಡೆ ಏನು? ದಾಸ್ಯವೇನು?
ಎಲ್ಲಿ ಎಲ್ಲದರ ತಾಣ?
ಸುಖ ದುಃಖಗಳು ಹಾರಿಹೋದವು;
ಸಕಲ ಗುಣಗಳೂ ಕರಗಿಹೋದವು;
ನಾನೀಗ ನಿರ್ಲಿಪ್ತ, ನಾನೀಗ ನಿರ್ಗುಣ..
ಕಣ್ ಮುಚ್ಚಿ ಕುಳಿತಿರುವೆ,
ಗುಟ್ಟು ಬಿಚ್ಚಿಕೊಳ್ಳುತ್ತಿದೆ…
ಕಾಣುತಿರುವ ನಾನು, ನೀನೇ;
ಅಥವಾ ನೀನು ನಾನೇ!?
ಕಳೆದಿರುವೆ ನಿನ್ನೊಳಗೆ, ಎರಡಳಿದು ಒಂದಾಗಿ
ಅದ್ವೈತ! ಮತ್ತಿಲ್ಲಿ, ಮತ್ತೊಬ್ಬರಿಲ್ಲ.”
~