“ಬದುಕಿಗೆ ವಿದ್ಯಾಮಾಯೆ, ಅವಿದ್ಯಾಮಾಯೆ ಎರಡೂ ಅವಶ್ಯಕ” ಅನ್ನುತ್ತಾರೆ ರಾಮಕೃಷ್ಣ ಪರಮಹಂಸ
ಭಕ್ತನ ಪ್ರಶ್ನೆ : ಅವಿದ್ಯೆಯಿಂದ ಅಜ್ಞಾನ ಉಂಟಾಗುವುದಾದರೆ, ಭಗವಂತ ಅದನ್ನೇಕೆ ಸೃಷ್ಟಿಸಿದ?
ಪರಮಹಂಸರು : ಕತ್ತಲೆ ಇಲ್ಲದೆ ಹೋದರೆ ಬೆಳಕಿನ ಮಹತ್ವ ಅರಿವಾಗುವುದಿಲ್ಲ. ದುಃಖ ಇಲ್ಲದಿದ್ದರೆ ಸುಖವೆಂದರೆ ಏನೆಂದು ಗೊತ್ತಾಗುವುದಿಲ್ಲ.
ಸಿಪ್ಪೆ ಇರುವುದರಿಂದ ತಾನೆ ಮಾವಿನಕಾಯಿ ಚೆನ್ನಾಗಿ ಬೆಳೆಯುವುದು, ಹಣ್ಣಾಗುವುದು? ಮಾವಿನ ಕಾಯಿ ಸಂಪೂರ್ಣ ಹಣ್ಣಾಗಿ ತಿನ್ನಲು ಸಿದ್ಧವಾದ ಮೇಲೆ ಸಿಪ್ಪೆಯನ್ನು ಬಿಸಾಡುತ್ತೇವೆ ಅಲ್ಲವೆ? ಮಾಯೆಯೂ ಈ ಸಿಪ್ಪೆಯ ಹಾಗೆಯೇ. ಅದು ಇರುವುದರಿಂದಲೇ ಕಾಲಕ್ರಮದಲ್ಲಿ ಬ್ರಹ್ಮಜ್ಞಾನವನ್ನು ಪಡೆಯಲು ಸಾಧ್ಯವಾಗೋದು. ಬದುಕಿಗೆ ವಿದ್ಯಾಮಾಯೆ, ಅವಿದ್ಯಾಮಾಯೆ ಎರಡೂ ಅವಶ್ಯಕ.
ಈ ಜಗತ್ತು ಸೃಷ್ಟಿಯಾಗಿರುವುದೇ ಭಗವಂತನ ಮಾಯೆಯಿಂದ. ಮಹಾಮಾಯೆಯಲ್ಲಿ ಮೇಲೆ ಹೇಳಿದ ವಿದ್ಯಾಮಾಯೆ, ಅವಿದ್ಯಾಮಾಯೆ ಎರಡೂ ಇವೆ. ವಿದ್ಯಾಮಾಯೆಯನ್ನು ಅವಲಂಬಿಸಿದರೆ ಸಾಧು ಸಂಗ, ಜ್ಞಾನ – ಭಕ್ತಿ, ಪ್ರೇಮ – ವೈರಾಗ್ಯ ಇತ್ಯಾದಿ ಉಂಟಾಗುತ್ತವೆ. ಅವಿದ್ಯಾಮಾಯೆ ಎಂದರೆ ಪಂಚಭೂತಗಳು ಮತ್ತು ಪಂಚೇಂದ್ರಿಯ ವಸ್ತುಗಳ ಪ್ರಭಾವದಿಂದ ಭಗವಂತನನ್ನು ಸಂಪೂರ್ಣ ಮರೆಸಿಬಿಡುವ ಮಾಯೆ.
ಅರ್ಥವಾಯಿತೇ?
(ಆಕರ : ರಾಮಕೃಷ್ಣ ವಚನ ವೇದ)