ಅಷ್ಟಾಂಗ ಯೋಗ : ಹಾಗೆಂದರೇನು? ಮಾಡುವುದು ಹೇಗೆ?

ಅಷ್ಟಾಂಗ ಯೋಗವನ್ನು ನಿರಂತರವಾಗಿ ಅಭ್ಯಾಸ ಮಾಡಿದರೆ ದೇಹಸ್ವಾಸ್ಥ್ಯ, ಮನೋಸ್ವಾಸ್ಥ್ಯ ಮತ್ತು ನಮ್ಮ ಪ್ರಯತ್ನಬಲದ ಮೇಲೆ ಆತ್ಮೋನ್ನತಿ ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

ನಮ್ಮನ್ನು ನಾವು ದೇಹದೊಂದಿಗೆ ಗುರುತಿಸಿಕೊಂಡು ನಿಜವಾದ ಅಸ್ತಿತ್ವವನ್ನು, ನಾವು ಸಚ್ಚಿದಾನಂದ ರೂಪಿ ಆತ್ಮ ಎಂಬುದನ್ನು ಮರೆತುಬಿಟ್ಟಿದ್ದೇವೆ. ಯೋಗದ ಗುರಿಯು ನಮ್ಮನ್ನು ಈ ದೈಹಿಕ ಗುರುತಿನಿಂದ ‘ವಿಯೋಗ’ಗೊಳಿಸುವುದೇ ಆಗಿದೆ.
ಈ ನಿಟ್ಟಿನಲ್ಲಿ ಯೋಗಾಚಾರ್ಯ ಪತಂಜಲಿಯು ಅಷ್ಟಾಂಗ ಯೋಗವನ್ನು ನಿರೂಪಿಸಿದ್ದು, ಅವು ಹೀಗಿವೆ: ಯಮ (ನಿಗ್ರಹ), ನಿಯಮ (ಕಟ್ಟಳೆ), ಆಸನ (ಭಂಗಿ), ಪ್ರಾಣಾಯಾಮ (ಪ್ರಾಣಶಕ್ತಿಗಳ ನಿಯಂತ್ರಣ), ಪ್ರತ್ಯಾಹಾರ(ಹಿಂತೆಗೆದುಕೊಳ್ಳುವ ಪ್ರಕ್ರಿಯೆ), ಧಾರಣ (ಒಟ್ಟುಗೂಡಿಸುವಿಕೆ ಅಥವಾ ಕೇಂದ್ರೀಕರಿಸುವಿಕೆ), ಧ್ಯಾನ (ಏಕಾಗ್ರಗೊಳಿಸುವಿಕೆ ಅಥವಾ ಲಕ್ಷದ ಮೇಲೆ ಗಮನಕೊಡುವಿಕೆ), ಮತ್ತು ಸಮಾಧಿ (ಸಂಪೂರ್ಣ ತಲ್ಲೀನತೆ/ತನ್ಮಯವಾಗುವಿಕೆ).

ಯೋಗ ಸ್ಥಿತಿಯ ಪ್ರಾಪ್ತಿಯಲ್ಲಿ ಇವುಗಳಲ್ಲಿ ಮೊದಲ ಐದು ನಿಯಮಗಳನ್ನು ‘ಬಹಿರಂಗ ಮತ್ತು ಕಡೆಯ ಮೂರನ್ನು ‘ಅಂತರಂಗ’ ಸಾಧನೆಗಳೆನ್ನುತ್ತಾರೆ.
ಅಹಿಂಸಾ (ನೋವುಂಟು ಮಾಡದೇ ಇರುವುದು), ಸತ್ಯ (ನಿಜವನ್ನು ನುಡಿಯುವುದು), ಅಸ್ತೇಯ (ಕಳ್ಳತನ ಮಾಡದೇ ಇರುವುದು), ಬ್ರಹ್ಮಚರ್ಯ(ಇಂದ್ರಿಯ ನಿಗ್ರಹ) ಮತ್ತು ಅಪರಿಗ್ರಹ (ದಾನವನ್ನು ಸ್ವೀಕರಿಸದೇ ಇರುವುದು) ಇವುಗಳು ಮೊದಲನೆಯ ಹಂತವಾದ ‘ಯಮ’ದ ನಿಯಮಾವಳಿಗಳು.

ಎರಡನೇ ಹಂತವಾದ ‘ನಿಯಮ’ದಲ್ಲಿ ಶೌಚ (ಪರಿಶುದ್ಧತೆ), ಸಂತೋಷ(ತೃಪ್ತಿ), ತಪಸ್ಸು(ತ್ರಿಕರಣ ಶುದ್ಧತೆ ಅಂದರೆ ಕಾಯ, ವಾಚ, ಮನಸಾ ನಿಗ್ರಹವನ್ನು ಹೊಂದಿರುವುದು), ಸ್ವಾಧ್ಯಾಯ (ವೇದ ಶಾಸ್ತ್ರಗಳ ಅಧ್ಯಯನ) ಮತ್ತು ಈಶ್ವರಪ್ರಣಿಧಾನ (ದೇವರ ಮೇಲೆ ಭಕ್ತಿಯನ್ನಿರಿಸುವುದು) ಇವುಗಳನ್ನು ಒಳಗೊಂಡಿದೆ.
ಶೌಚವು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿದರೆ ಸಂತೋಷವು ನಮ್ಮ ಅಸ್ತಿತ್ವವು ಸ್ವತಃ ನಮ್ಮನ್ನೂ ಇತರರನ್ನೂ ಆಹ್ಲಾದಗೊಳಿಸುತ್ತದೆ. ಇತರ ಮೂರು ನಿಯಮಗಳಾದ ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರಪ್ರಣಿಧಾನಗಳನ್ನು ಒಟ್ಟುಗೂಡಿಸಿ ಅವುಗಳನ್ನು ಪತಂಜಲಿಯು ‘ಕ್ರಿಯಾಯೋಗ’ವೆಂದು ಕರೆದಿದ್ದಾನೆ. ಇದು ಯೋಗಕ್ಕೆ ಕೊಂಡೊಯ್ಯುವ ಪರಿಣಾಮಕಾರಿ ಮತ್ತು ಹತ್ತಿರದ ಮಾರ್ಗವಾಗಿದೆ.
ಆಸನವೆಂದರೆ ಯೋಗಾಭ್ಯಾಸವನ್ನು ಕೈಗೊಳ್ಳುವ ವ್ಯಕ್ತಿಯು ಅನುಕೂಲಕರವಾಗಿ ಮತ್ತು ಸ್ಥಿರವಾಗಿ ಕುಳಿತುಕೊಳ್ಳಲು ಅನುವಾಗಿರುವ ಭಂಗಿ. ಪ್ರಾಣಾಯಾಮವೆಂದರೆ ಕ್ರಮಬದ್ಧ ಉಸಿರಾಟದ ಮೂಲಕ ಜೀವನಾಧಾರವಾದ ಪ್ರಾಣವಾಯುಗಳನ್ನು ನಿಯಂತ್ರಿಸುವುದು. ಪಂಚೇಂದ್ರಿಯಗಳನ್ನು ವಿಷಯವಸ್ತುಗಳಿಂದ ಒಳಸೆಳೆದುಕೊಂಡಾಗ ಅವು ಯಾವುದೇ ಪ್ರತಿಕ್ರಿಯೆಯಿಲ್ಲದೆ ಮನಸ್ಸಿನೊಂದಿಗೆ ಏಕೀಕರಣಗೊಳ್ಳುತ್ತವೆ; ಇದನ್ನೇ ಪ್ರತ್ಯಾಹಾರವೆಂದು ಕರೆಯುತ್ತಾರೆ.

ಮುಂದಿನ ಮೂರು ಹಂತಗಳಾದ ಧಾರಣ, ಧ್ಯಾನ ಮತ್ತು ಸಮಾಧಿಗಳು ಒಂದೇ ಕ್ರಿಯೆಯ ಮುಂದುವರೆದ ಹೆಜ್ಜೆಗಳು. ಧಾರಣದಲ್ಲಿ ಮನಸ್ಸು ಲಕ್ಷ್ಯವಿಡಬೇಕಾದ ವಸ್ತುವಿನ ಮೇಲೆ ಕೇಂದ್ರಿತವಾಗಿರುತ್ತದೆ. ಈ ಏಕಾಗ್ರತೆಯು ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ಸುರಿಯಲ್ಪಡುವ ಎಣ್ಣೆಯಂತೆ ನಿರಾತಂಕವಾಗಿ ಹರಿಯುವಂತಹ ಸ್ಥಿತಿಯಲ್ಲಿದ್ದಾಗ ಅದು ಧ್ಯಾನವೆನಿಸುಕೊಳ್ಳುತ್ತದೆ.

ಯಾವಾಗ ಧ್ಯಾನವು ಪಕ್ವಗೊಂಡು ವ್ಯಕ್ತಿಯು ತನ್ನ ಇರಿವನ್ನು ಸಹ ಮರೆತು ಲಕ್ಷ್ಯದೊಂದಿಗೆ ತನ್ಮಯತೆಯನ್ನು ಹೊಂದುತ್ತಾನೋ ಆ ಸ್ಥಿತಿಯನ್ನು ಸಮಾಧಿಯೆನ್ನುತ್ತಾರೆ. ಸಮಾಧಿ ಸ್ಥಿತಿಯು ಈಶ್ವರಪ್ರಣಿಧಾನ ಅಥವಾ ಭಗವದ್ಭಕ್ತಿಯಿಂದಲೂ ಲಭ್ಯವಾಗುತ್ತದೆ.
ಧಾರಣ, ಧ್ಯಾನ ಮತ್ತು ಸಮಾಧಿ ಈ ಮೂರನ್ನೂ ಒಟ್ಟಾಗಿಸಿ ಪತಂಜಲಿಯು ಅದನ್ನು ‘ಸಂಯಮ’ವೆಂದು ಕರೆದಿದ್ದಾನೆ.

ಅಷ್ಟಾಂಗ ಯೋಗವನ್ನು ನಿರಂತರವಾಗಿ ಅಭ್ಯಾಸ ಮಾಡಿದರೆ ದೇಹಸ್ವಾಸ್ಥ್ಯ, ಮನೋಸ್ವಾಸ್ಥ್ಯ ಮತ್ತು ನಮ್ಮ ಪ್ರಯತ್ನಬಲದ ಮೇಲೆ ಆತ್ಮೋನ್ನತಿ ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.