ಮೂಲ ~ ಹಫೀಜ್, ಸೂಫಿ ಸಂತ ಕವಿ | ಕನ್ನಡಕ್ಕೆ ~ ಚಿದಂಬರ ನರೇಂದ್ರ
ನೀನು
ಸಂಕೋಚದ ಸುಳಿಯಲ್ಲಿ
ಸಿಕ್ಕಿಹಾಕಿಕೊಂಡಿರುವ ಗಂಧ.
ನೀನು
ನಿನ್ನ ಜೊತೆಯೇ
ಕಣ್ಣುಮುಚ್ಚಾಲೆ ಆಡುತ್ತಿರುವ ಅಂಧ.
ಮುಸುಕಿನೊಳಗಿರುವ
“ನಾನು”
ಕಳಚಿ ಹೋಗಿಬಿಟ್ಟರೆ
ಆಮೇಲೆ ನಾಚುವ ಪ್ರಸಂಗವೇ ಇಲ್ಲ.
ನಿನ್ನ ಗೆಳೆಯ ಹಫೀಜ್ ನನ್ನು ಮಾತನಾಡಿಸು
ಅವನಿಗೆ ಈ ವಿಷಯದಲ್ಲಿ ಪಕ್ಕಾ ಸ್ಪಷ್ಟತೆ ಇದೆ.
ಒಮ್ಮೊಮ್ಮೆ
ಈ ಜಗತ್ತು ಜಾದೂ ಅನಿಸಬಹುದು
ಆದರೆ ಹಾಗೇನೂ ಇಲ್ಲ.
ಇಲ್ಲಿ ಒಬ್ಬರು ಹುಟ್ಟಿಸದೇ
ಬೇರೆ ಏನೊಂದೂ ಹುಟ್ಟುವುದಿಲ್ಲ.
ಪ್ರಯಾಣ ಶೂನ್ಯದಿಂದ ಶೂನ್ಯಕ್ಕೆ ಮಾತ್ರ.
ಇರುವೆಯ ಹುತ್ತಕ್ಕೆ ಲಗ್ಗೆ ಹಾಕಿರುವ
ಓ ಭವ್ಯ ಗಜರಾಜನೇ
ನಿನಗೆ ದಿವ್ಯ ಮರೆವಿನ ರೋಗ.
ಪ್ರೀತಿಯ ಗೆಳೆಯ,
ನೀನು
ನಾಚಿಕೆ ಸ್ವಭಾವದ ದೇವರು ಕಣೋ !
ಇಷ್ಟವಾಯಿತು