ಅನ್ನದಾನವೇ ಮುಖ್ಯ ಎಂದು ಸಾರುವ ಪಿತೃಪಕ್ಷ

ಮಹಾಲಯ ಅಮಾವಾಸ್ಯೆಗೊಂದು ಪೌರಾಣಿಕ ಹಿನ್ನೆಲೆಯೂ ಇದೆ. ಅದು ಕರ್ಣನಿಗೆ ಸಂಬಂಧಿಸಿದ್ದು. ಆ ಕಥೆ ಯಾವುದು? ಇಲ್ಲಿ ನೋಡಿ….

ಇಂದು ಮಹಾಲಯ ಅಮಾವಾಸ್ಯೆ. ಭಾದ್ರಪದ ಮಾಸದ ದ್ವಿತೀಯಾರ್ಧವನ್ನು ಪಿತೃಪಕ್ಷ ಎಂದು ಕರೆದು, ಈ (ಸಾಮಾನ್ಯವಾಗಿ 15) ದಿನಗಳ ಕಾಲ ಪಿತೃಗಳಿಗೆ ತರ್ಪಣ ನೀಡುವ ಆಚರಣೆ ನಡೆಸಲಾಗುತ್ತದೆ. ಈ ಪಕ್ಷದ ಅವಧಿಯಲ್ಲಿ ನಮ್ಮ ಪೂರ್ವಜರು ಭೂಮಿಗೆ ಸಮೀಪಿಸುತ್ತಾರೆ. ಆ ಸಂದರ್ಭದಲ್ಲಿ ನಾವು ಅವರಿಗೆ ಆಹಾರವನ್ನು ನೀಡಿದರೆ ಅವರು ಅತ್ಯಂತ ತೃಪ್ತಿಯನ್ನು ಪಡೆದುಕೊಳ್ಳುವರು. ಜೊತೆಗೆ ನಮ್ಮನ್ನು ಹರಸುತ್ತಾರೆ ಎಂದು ಹೇಳಲಾಗುವುದು. 
ಈ ಪಕ್ಷದ ಕೊನೆಯ ದಿನವೇ ಮಹಾಲಯ ಅಮಾವಾಸ್ಯೆ. ಇಂದು ಮುಂಜಾನೆ 3.46ಕ್ಕೆ ಆರಂಭಗೊಂಡ ಅಮಾವಾಸ್ಯೆ ರಾತ್ರಿ 11.56ಕ್ಕೆ ಮುಕ್ತಾಯಗೊಳ್ಳಲಿದೆ. 

ಮಹಾಲಯ ಅಮಾವಾಸ್ಯೆಗೊಂದು ಪೌರಾಣಿಕ ಹಿನ್ನೆಲೆಯೂ ಇದೆ. ಅದು ಕರ್ಣನಿಗೆ ಸಂಬಂಧಿಸಿದ್ದು. ನಮಗೆಲ್ಲ ತಿಳಿದೇ ಇರುವಂತೆ ಕರ್ಣನು ‘ದಾನಶೂರ’. ಅವನು ತನ್ನ ಜೀವಿತಾವಧಿಯಲ್ಲಿ ಸಾಕಷ್ಟು ದಾನಧರ್ಮಗಳನ್ನು ಮಾಡಿದ್ದನು. ಅನ್ನದಾನ ಮಾಡುವುದಕ್ಕಿಂತ ಚಿನ್ನ ಮತ್ತು ಆಭರಣಗಳನ್ನೇ ಹೆಚ್ಚು ದಾನ ಮಾಡುತ್ತಿದ್ದನು. ಈ ಪುಣ್ಯ ಸಂಪಾದನೆಯಿಂದ ಮತ್ತು ಕುರುಕ್ಷೇತ್ರ ಯುದ್ಧದಲ್ಲಿ ವೀರಮರಣವನ್ನೂ ಹೊಂದಿದ್ದರಿಂದ ಅವನನ್ನು ಸ್ವರ್ಗಕ್ಕೆ ಕರೆದೊಯ್ಯಲಾಯಿತು.

ಆದರೆ ಸ್ವರ್ಗದಲ್ಲಿ ಕರ್ಣನಿಗೆ ಸುಖ ಸಿಗಲಿಲ್ಲ. ಅವನಿಗೆ ಅಲ್ಲಿ ಪ್ರತಿದಿನವೂ ಚಿನ್ನದ ಊಟವನ್ನೇ ನೀಡಲಾಗುತ್ತಿತ್ತು. ಅವನು ಎಲ್ಲಿ ನೋಡಿದರೂ ಐಷಾರಾಮಿ ವಸ್ತುಗಳು ಹಾಗೂ ಚಿನ್ನದ ಊಟವೇ ಗೋಚರಿಸುತ್ತಿತ್ತು. ಇದರಿಂದ ತಲೆಕೆಟ್ಟು ಹೋಯಿತು ಕರ್ಣನಿಗೆ.  ಅವನು ಯಮನಲ್ಲಿ ಕೇಳಿದನು, “ನನಗೇಕೆ ಅನ್ನವನ್ನು ನೀಡುತ್ತಿಲ್ಲ. ಎಲ್ಲಾ ಚಿನ್ನದಿಂದ ಕೂಡಿರುವುದನ್ನೇ ನೀಡುತ್ತಿದ್ದೀರಿ?” ಎಂದು. ಆಗ ಯಮ, “ನೀನು ಸಾಕಷ್ಟು ಚಿನ್ನಾಭರಣಗಳನ್ನೇ ದಾನ ಮಾಡಿರುವೆ. ಆದರೆ ಬಡ ಜನರಿಗೆ ನೀನು ನೀಡಿದ ದಾನದ ಅಗತ್ಯ ಇರಲಿಲ್ಲ. ಅವರು ಆಹಾರಕ್ಕಾಗಿ ಕಾಯುತ್ತಿದ್ದರು. ನೀನು ಚಿನ್ನ ಮತ್ತು ಹಣವನ್ನು ದಾನ ಮಾಡಿದಾಗ ಅವರ ಮನಸ್ಸು ಆಹಾರವನ್ನಾದರೂ ದಾನ ಮಾಡಬಹುದಿತ್ತು ಎಂದು ಹಂಬಲಿಸುತ್ತಿತ್ತು. ನೀನು ನಿನ್ನ ಪೂರ್ವಜರಿಗೂ ಅನ್ನ ದಾನ ಮಾಡಲಿಲ್ಲ. ಅದಕ್ಕಾಗಿಯೇ ನಿನಗೆ ನಿನ್ನ ದಾನದ ಫಲವಾಗಿ ಚಿನ್ನದ ಊಟವನ್ನೇ ನೀಡಲಾಗುತ್ತಿದೆ” ಎಂದನು. 

ಕರ್ಣನು ನಾನು ನನ್ನ ತಪ್ಪು ತಿದ್ದಿಕೊಳ್ಳುತ್ತೇನೆ, ಒಂದು ಅವಕಾಶ ಕೊಡು ಎಂದು ಕೇಳಿಕೊಂಡನು. ಅದಕ್ಕೆ ಒಪ್ಪಿದ ಯಮನು ಕರ್ಣನನ್ನು ಭಾದ್ರಪದ ಮಾಸದ ದ್ವಿತೀಯಾರ್ಧದಲ್ಲಿ 15 ದಿನಗಳ ಕಾಲ ಭೂಮಿಗೆ ಕಳುಹಿಸಿದನು. ಆಗ ಕರ್ಣನು ಪೂರ್ವಜರ ಶ್ರಾದ್ಧವನ್ನು ಮಾಡಿ, ಅವರ ಸ್ಮರಣೆಯಲ್ಲಿ ಆಹಾರ ಮತ್ತು ನೀರನ್ನು ದಾನ ಮಾಡಿದನು. ಆ ಅವಧಿಯನ್ನೇ ಪಿತೃಪಕ್ಷ ಎಂದು ಕರೆಯಲಾಯಿತು.

ಕರ್ಣನ ಈ ಪ್ರಕರಣವು ಪಿತೃಗಳನ್ನು ಸ್ಮರಿಸುವ ಕರ್ತವ್ಯದ ಜೊತೆಗೇ ಅನ್ನದಾನದ ಮಹತ್ವವನ್ನೂ ಸಾರುತ್ತದೆ. ಯಾರಿಗೆ ಏನು ದಾನ ನೀಡಿದರೂ ಅನ್ನದಾನಕ್ಕಿಂತ ಮಹತ್ವದ್ದು ಯಾವುದೂ ಇಲ್ಲ. ಇದು ಕರ್ಣನ ಕಥೆಯಿಂದ ಸಾಬೀತಾಗಿದೆ. ಆದ್ದರಿಂದ, ಈ ಅವಧಿಯಲ್ಲಿ ಪಿತೃಗಳಿಗೆ ತರ್ಪಣ ನೀಡುವುದರ ಜೊತೆಗೇ ಆಗಾಗ ಅನ್ನದಾನವನ್ನೂ ಮಾಡುತ್ತಿರಬೇಕು. ಇದರಿಂದ ಪುಣ್ಯಸಂಚಯವಾಗುವುದು ಅನ್ನುವ ಧಾರ್ಮಿಕ ನಂಬಿಕೆಯ ಜೊತೆಗೆ, ನಮ್ಮ ಸಾಮಾಜಿಕ ಕರ್ತವ್ಯವೂ ನೆರವೇರಿದಂತಾಗುವುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.