ಲಕ್ಷ್ಮೀ ದೇವಿಯನ್ನು ಸ್ತುತಿಸುವ 12 ನಾಮಶ್ಲೋಕಗಳು ಇಲ್ಲಿವೆ….
|| ಭದ್ರೈಷಾಮ್ ಲಕ್ಷ್ಮೀರ್ನಿಹಿತಾಧಿ ವಾಚೀ || ಋಗ್ವೇದ 10:71:2
“ಲಕ್ಷ್ಮಿಯ ವಾಕ್ಕಿನಲ್ಲೇ ಒಳಿತು ಬೆಸೆದುಕೊಂಡಿದೆ” ಅನ್ನುತ್ತದೆ ಋಗ್ವೇದ.
ಲಕ್ಷ್ಮಿ ಸ್ವಯಂ ಅದೃಷ್ಟ. ವೇದಗಳಲ್ಲಿ ಲಕ್ಷ್ಮಿಯನ್ನು ‘ಭದ್ರೆ’ – ಅಂದರೆ ಮಂಗಳಕರಳು, ಒಳಿತನ್ನೇ ತರುವವಳು ಎಂದು ಬಣ್ಣಿಸಲಾಗಿದೆ. ವೇದಗಳು ಸಂಪತ್ತು ಅಥವಾ ವೈಭವದೊಂದಿಗೆ ಲಕ್ಷ್ಮಿಯನ್ನು ಗುರುತಿಸುವುದಿಲ್ಲ.
ಲಕ್ಷ್ಮಿ ಎಂಬ ಪದಮೂಲವೂ ಲಕ್ಷ್ಮಿಯನ್ನು ಧನ ಸಂಪತ್ತಿನೊಡನೆ ಗುರುತಿಸುವುದಿಲ್ಲ. ಲಕ್ಷ್ಮಿ ಪದವು ‘ಲಕ್ಷ್’ ಅಥವಾ ‘ಲಕ್ಷ್ಯ್’ ಮೂಲದಿಂದ ಬಂದಿದೆ. ಯಾರು ಲಕ್ಷ್ಯವಿಟ್ಟು ಧ್ಯಾನಿಸುತ್ತಾರೋ, ಪ್ರಯತ್ನ ಮಾಡುತ್ತಾರೋ ಅವರಿಗೆ ಮಂಗಳವನ್ನು ಉಂಟು ಮಾಡುವ ದೇವತೆಯೇ ‘ಲಕ್ಷ್ಮೀ’.
ಆದ್ದರಿಂದ ಲಕ್ಷ್ಮಿಯನ್ನು ಈ ಬಗೆಯಲ್ಲೂ ಅರ್ಥ ಮಾಡಿಕೊಳ್ಳಬಹುದು :
ಮಾಂಗಲ್ಯ ಅಥವಾ ಕಲ್ಯಾಣವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಕೆಲವರಿಗೆ ಸಂಪತ್ತು ಕಲ್ಯಾಣಕರವೆನಿಸಿದರೆ, ಕೆಲವರಿಗೆ ವಿದ್ಯೆ ಕಲ್ಯಾಣಕಾರಿ. ಮತ್ತೆ ಕೆಲವರಿಗೆ ರಾಜಕಾರಣ ಮಂಗಳವನ್ನುಂಟುಮಾಡಿದರೆ, ಮತ್ತೆ ಕೆಲವರಿಗೆ ಕಲೆಗಳನ್ನು ಕರಗತ ಮಾಡಿಕೊಳ್ಳುವುದು ಮಂಗಳ ತರುತ್ತದೆ. ಆದ್ದರಿಂದ, ‘ಲಕ್ಷ್ಯವಿಟ್ಟು’ ಕಮಲ ಸಂಜಾತೆಯನ್ನು ಧ್ಯಾನಿಸಿದರೆ, ಆಕೆ ನಾವು ಬಯಸಿದ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ ಆಶೀರ್ವದಿಸುತ್ತಾಳೆ ಎಂಬ ನಂಬಿಕೆ ಇದೆ.
ಶ್ರಾವಣ ಮಾಸದ ಶುಕ್ರವಾರಗಳಲ್ಲಿ ಲಕ್ಷ್ಮಿ ವರದ ಹಸ್ತಳಾಗಿ ಶ್ರದ್ಧಾವಂತರನ್ನು ಹರಸುತ್ತಾಳೆ ಎಂಬುದು ಪ್ರತೀತಿ. ಆದ್ದರಿಂದಲೇ ಇಂದು ವರಮಹಾ ಲಕ್ಷ್ಮಿ ಪೂಜೆಯನ್ನು ಆಚರಿಸಲಾಗುತ್ತದೆ.
ಲಕ್ಷ್ಮಿಯನ್ನು ಒಲಿಸಿಕೊಳ್ಳಲು ವಿಜೃಂಭಣೆಯ ಆಚರಣೆಯಲ್ಲ, ಲಕ್ಷ್ಯಪೂರ್ಣ ಧ್ಯಾನ ಮತ್ತು ಪ್ರಯತ್ನ ಮುಖ್ಯ ಎಂಬುದು ಆಕೆಯ ಹೆಸರಲ್ಲೇ ಇದೆ.
ಇಂದಿನ ಪೂಜೆ ಆ ನಿಟ್ಟಿನಲ್ಲಿ ನಡೆದರೆ, ನಮ್ಮ ನಮ್ಮ ಪಾಲಿನ ಸಂಪತ್ತು ನಮಗೆ ಅಗತ್ಯವಾಗಿ ದೊರೆಯುವುದು.
ಈ ಸಂದರ್ಭದಲ್ಲಿ ಒಳಿತು ಮತ್ತು ಸಂಪತ್ತಿಗಾಗಿ ಸ್ತುತಿಸಬೇಕಾದ ಭದ್ರಲಕ್ಷ್ಮಿಯ ದ್ವಾದಶ ನಾಮ ಸ್ತೋತ್ರ ಹೀಗಿದೆ :
ಶ್ರೀದೇವೀ ಪ್ರಥಮಂ ನಾಮ ದ್ವಿತೀಯಮಮೃತೋದ್ಭವಾ |
ತೃತೀಯಂ ಕಮಲಾ ಪ್ರೋಕ್ತಾ ಚತುರ್ಥಂ ಲೋಕಸುಂದರೀ || ೧ ||
ಪಂಚಮಂ ವಿಷ್ಣುಪತ್ನೀತಿ ಷಷ್ಠಂ ಶ್ರೀವೈಷ್ಣವೀತಿ ಚ |
ಸಪ್ತಮಂ ತು ವರಾರೋಹಾ ಅಷ್ಟಮಂ ಹರಿವಲ್ಲಭಾ || ೨ ||
ನವಮಂ ಶಾರ್ಙ್ಗಿಣೀ ಪ್ರೋಕ್ತಾ ದಶಮಂ ದೇವದೇವಿಕಾ |
ಏಕಾದಶಂ ಮಹಾಲಕ್ಷ್ಮೀರ್ದ್ವಾದಶಂ ತ್ರಿಲೋಕಸುಂದರೀ || ೩ ||
ಶ್ರೀಃ ಪದ್ಮಾ ಕಮಲಾ ಮುಕುಂದಮಹಿಷೀ ಲಕ್ಷ್ಮೀಸ್ತ್ರೀಲೋಕೇಶ್ವರೀ |
ಮಾ ಕ್ಷೀರಾಬ್ಧಿಸುತಾಽರವಿಂದಜನನೀ ವಿದ್ಯಾ ಸರೋಜಾತ್ಮಿಕಾ || ೪ ||
ಸರ್ವಾಭೀಷ್ಟಫಲಪ್ರದೇತಿ ಸತತಂ ನಾಮಾನಿ ಯೇ ದ್ವಾದಶ |
ಪ್ರಾತಃ ಶುದ್ಧತರಾಃ ಪಠಂತಿ ಸತತಂ ಸರ್ವಾಂಲ್ಲಭಂತೇ ಶುಭಾನ್ || ೫ ||
ಭದ್ರಲಕ್ಷ್ಮೀಸ್ತವಂ ನಿತ್ಯಂ ಪುಣ್ಯಮೇತಚ್ಛುಭಾವಹಮ್ |
ಕಾಲೇ ಸ್ನಾತ್ವಾಽಪಿ ಕಾವೇರ್ಯಾಂ ಜಪ ಶ್ರೀವೃಕ್ಷಸನ್ನಿಧೌ || ೬ ||
ಈ ಸ್ತೋತ್ರದಲ್ಲಿ ಶ್ರೀಲಕ್ಷ್ಮೀದೇವಿಯನ್ನು ಶ್ರೀದೇವಿ, ಅಮೃತೋದ್ಭವೆ, ಕಮಲಾ, ಲೋಕಸುಂದರಿ, ವಿಷ್ಣುಪತ್ನಿ, ವೈಷ್ಣವಿ, ವರಾರೋಹಾ, ಹರಿವಲ್ಲಭೆ, ಶಾರ್ಙ್ಗಿಣೀ, ದೇವದೇವಿಕಾ, ಮಹಾಲಕ್ಷ್ಮೀ, ತ್ರಿಲೋಕಸುಂದರಿ – ಎಂಬ 12 ಹೆಸರುಗಳಿಂದ ಸ್ತುತಿಸಲಾಗಿದೆ. ನಿತ್ಯವೂ ಈ ಹೆಸರುಗಳನ್ನು ಜಪಿಸುವುದರಿಂದ ಸದಾ ಸರ್ವಮಂಗಳವಾಗುವುದೆಂದು ಈ ಸ್ತೋತ್ರ ರಚನೆಕಾರರು ಹೇಳಿದ್ದಾರೆ.
Good and useful information about God and godessess.