ನೀವು ಏನಾಗಲು ಬಯಸುವಿರಿ? ತಾಲೀಬ್ ಕೇಳುತ್ತಿದ್ದಾನೆ….

ಮೂಲ : ಇದ್ರಿಸ್ ಷಾ | ಕನ್ನಡಕ್ಕೆ : ಚಿದಂಬರ ನರೇಂದ್ರ

ತಾಲೀಬ್ ಕೇಳುತ್ತಿದ್ದಾನೆ….

ಯಾರಿಗೆ ಏನೂ ಗೊತ್ತಿಲ್ಲವೋ
ಅಥವಾ ಕೊಂಚ ಮಾತ್ರ ಗೊತ್ತಿದೆಯೋ,
ಯಾರು ಕಲಿಸುವುದನ್ನ ಬಿಟ್ಟು
ಇನ್ನೂ ಕಲಿಯಬೇಕಿದೆಯೋ
ಅವರು ತಮ್ಮ ಸುತ್ತ
ನಿಗೂಢ ವಾತಾವರಣವನ್ನ
ಸೃಷ್ಟಿಮಾಡಿಕೊಳ್ಳಲು
ಸದಾ ಕಾತುರರಾಗಿರುತ್ತಾರೆ
ಮತ್ತು
ತಮ್ಮ ಬಗೆಗಿನ ವದಂತಿಯ ಉರಿಗೆ
ತಾವೇ ತುಪ್ಪ ಹಾಕಿ
ಇದೊಂದು ರಹಸ್ಯಮಯ ಕಾರಣಕ್ಕಾಗಿ
ಎನ್ನುವಂತೆ ಬಿಂಬಿಸಲು ಪ್ರಯತ್ನಿಸುತ್ತಾರೆ
ಹಾಗು
ತಮ್ಮ ಸುತ್ತಲಿನ
ಈ  ನಿಗೂಢ ಪ್ರಭಾವಳಿಯನ್ನ
ಹೆಚ್ಚಿಸಿಕೊಳ್ಳಲು
ಸದಾ ತುಡಿಯುತ್ತಿರುತ್ತಾರೆ.

ಆದರೆ ಈ ನಿಗೂಢತೆ ,
ಕೇವಲ ನಿಗೂಢತೆಯ ಕಾರಣಕ್ಕಾಗಿ
ಒಳಗಿನ ತಿಳುವಳಿಕೆಯ
ಹೊರಗಿನ ಅವ್ಯಕ್ತ ಆಯಾಮವಲ್ಲ.

ಒಳಗಿನ ರಹಸ್ಯಗಳನ್ನ ಬಲ್ಲ
ನಿಜದ ಸೂಫೀಗಳು
ಸಾಧಾರಣರಲ್ಲಿ ಸಾಧಾರಣರು.

ತಮ್ಮ ಸುತ್ತ ನಿಗೂಢತೆಯನ್ನ 
ಹಬ್ಬಿಸಿಕೊಳ್ಳುವವರು
ಜೇಡನ ಬಲೆಯನ್ನ ಹೋಲುವವರು
ಹುಳುಗಳನ್ನ ತಮ್ಮ ತೆಕ್ಕೆಗೆ
ತೆಗೆದುಕೊಳ್ಳುವವರು.

ನೀವು
ಹುಳುಗಳಾಗ ಬಯಸುವಿರ?
ಜೇಡನ ಹೊಟ್ಚೆಗೆ
ಆಹಾರವಾಗಬಯಸುವಿರ ?

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.