ಏಕಂ ದೃಷ್ಟ್ವಾ ಶತಂ ದೃಷ್ಟ್ವಾ ದೃಷ್ಟ್ವಾ ಪಂಚ ಶತಾದ್ಯಪಿ| ಅತಿ ಲೋಭೋ ನ ಕರ್ತವ್ಯಃ ಚಕ್ರೇ ಭ್ರಾಮತಿ ಮಸ್ತಕಃ : “ಒಂದನ್ನು ನೋಡಿ ಅದು ಬೇಕೆಂದು ಬಯಸಿ, ಪಡೆದು ಆಸೆ ಪೂರೈಸಿಕೊಂಡರೆ ನೂರು ಆಸೆಗಳು ಹುಟ್ಟಿಕೊಳ್ತವೆ. ಅವನ್ನೂ ಪೂರೈಸಿದೆವು ಅಂತಿಟ್ಟುಕೊಳ್ಳಿ, ಐನೂರು ಆಸೆಗಳು ಹುಟ್ಟಿ ತಲೆ ತಿರುಗಿಸುತ್ತವೆ. ಆದ್ದರಿಂದ ಬಯಸಿ, ಬಯಸಿದ್ದನ್ನು ಪಡೆಯಬೇಕೆನ್ನುವ ಲೋಭ ಒಂದರ ಕುರಿತಾದರೂ ಅಷ್ಟೇ, ನೂರರ ಕುರಿತಾದರೂ ಅಷ್ಟೇ, ಪರಿಣಾಮದಲ್ಲಿ ವ್ಯತ್ಯಾಸವೇನಿಲ್ಲ” – ಇದು ಈ ಸುಭಾಷಿತದ ಅರ್ಥ.
ಇದನ್ನೇ ಪುರಂದರ ದಾಸರು “ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂದಾಸೆ, ಅಷ್ಟು ದೊರಕಿದರೆ ಮತ್ತಿಷ್ಟರಾಸೆ / ಕಷ್ಟ ಬೇಡೆಂಬಾಸೆ, ಕಡು ಸುಖವ ಕಾಂಬಾಸೆ/ ನಷ್ಟ ಜೀವನದಾಸೆ ಪುರಂದರ ವಿಠಲ” – ಎಂದು ಹಾಡಿರುವುದು.
ಆದ್ದರಿಂದ ‘ಒಂದೇ ಒಂದು, ಇದೊಂದೇ ಒಂದು’ ಎಂದು ನೆವ ಹೇಳದೆ ಲೋಭಗಳನ್ನು ಅವು ಮೊಳೆಯುವಾಗಲೇ ನಿವಾರಿಸಿಕೊಳ್ಳೋಣ. ನಮ್ಮ ತಲೆಯನ್ನು ಬಯಕೆ – ಈಡೇರಿಕೆಯ ಚಕ್ರದಲ್ಲಿ ಗಿರಗಿರ ತಿರುಗಲು ಬಿಡದೆ ಸ್ಥಿರವಾಗಿರಿಸಿಕೊಳ್ಳೋಣ. ಆಗದೇ?