“ಯಾರು ಅನಂತತೆಯನ್ನು ಅರಸುತ್ತಾರೋ, ಅನಂತವು ಅವರನ್ನು ಆಯ್ಕೆ ಮಾಡಿಕೊಳ್ಳುತ್ತದೆ” ಎಂದು ಮಹರ್ಷಿ ಅರವಿಂದರು ತಮ್ಮ ‘ಸಾವಿತ್ರಿ’ ಕೃತಿಯಲ್ಲಿ ಬರೆಯುತ್ತಾರೆ…
ಹೌದು. ನಾವು ಏನನ್ನು ಅರಸುತ್ತೇವೋ ಅದು ನಮ್ಮನ್ನು ಹುಡುಕಿಕೊಂಡು ಅಲೆಯುತ್ತಿರುತ್ತದೆ. ನಾವು ಸಂಕುಚಿತ ಮನಸ್ಸಿನಿಂದ, ನಮ್ಮ ಭದ್ರತೆಗಷ್ಟೇ ಜಾಗವನ್ನು ಅರಸುತ್ತಿದ್ದರೆ, ಕೇವಲ ಸಂಕುಚಿತ – ಸೀಮಿತ ಅವಕಾಶಗಳಷ್ಟೆ ನಮಗೆ ಒದಗಿ ಬರುತ್ತವೆ. ನಾವು ವಿಶಾಲವಾಗಿ ಯೋಚಿಸಿದರೆ, ವೈಶಾಲ್ಯತೆ ನಮ್ಮದಾಗುತ್ತದೆ. ಸೃಷ್ಟಿಯೆಲ್ಲವನ್ನೂ ಒಳಗೊಂಡ ಯೋಚನೆ ನಮ್ಮದಾದರೆ, ಅನಂತ ಸೃಷ್ಟಿಯು ನಮ್ಮನ್ನು ತನ್ನ ಬಾಹುಗಳಲ್ಲಿ ಪ್ರೇಮದಿಂದ ಎತ್ತಿಕೊಳ್ಳುತ್ತದೆ.
ಮಹರ್ಷಿ ಅರವಿಂದರ ‘ಸಾವಿತ್ರಿ’ ಮಹಾ ಕಾವ್ಯದಲ್ಲಿ ಬರುವ ಈ ಸಾಲು ಹೇಳುತ್ತಿರುವುದು ಅದನ್ನೇ.
ಸೂಫಿ ಕವಿ ರೂಮಿ ಕೂಡಾ ಇದನ್ನು ಹೇಳಿದ್ದಾನೆ, “ನೀನು ಏನನ್ನು ಹುಡುಕುತ್ತಿದ್ದೀರೋ ಅದು ನಿನ್ನನ್ನು ಹುಡುಕುತ್ತಿರುತ್ತದೆ” ಎಂದು. ಬುದ್ಧ ಕೂಡಾ “ನೀನು ದುಃಖವನ್ನು ಅರಸುವಾಗ ದುಃಖವೂ ಸಂತಸವನ್ನು ಅರಸುವಾಗ ಸಂತಸವೂ ನಿಮ್ಮನ್ನು ಹುಡುಕುತ್ತಾ ಇರುತ್ತವೆ” ಎಂದಿದ್ದಾನೆ.
ಅವರೆಲ್ಲ ಅನುಭಾವಿಸಿ ಪಡೆದ ತಿಳಿವನ್ನು ನಮಗೆ ಕಾಣ್ಕೆಯಾಗಿ ನೀಡಿದ್ದಾರೆ. ಈ ಕಾಣ್ಕೆಯನ್ನು ಕಣ್ಣಲ್ಲಿಟ್ಟುಕೊಂಡು ಬದುಕಿನ ದಾರಿ ನಡೆದರೆ, ನಮ್ಮ ಜೀವನ ಯಾನ ಸಂತಸದಾಯಕವಾಗಿರುವುದರಲ್ಲಿ ಅನುಮಾನವಿಲ್ಲ.