“ ಹಂಸದಂತೆ ಎತ್ತರಕ್ಕೆ ಏರಿ ಸರೋವರಕ್ಕೆ ವಿದಾಯ ಹೇಳಿ “ ಬಹುಶಃ ಬುದ್ಧ, ರಾಮಕೃಷ್ಣರ ಬಗ್ಗೆ ಭವಿಷ್ಯ ಹೇಳುತ್ತಿರುವಂತೆ ಇದೆ ಈ ಮಾತು. ಬುದ್ಧ ಮತ್ತು ರಾಮಕೃಷ್ಣರ ನಡುವೆ ಇಪ್ಪತ್ತೈದು ಶತಮಾನಗಳು ಆದರೂ ಈ ಭವಿಷ್ಯವಾಣಿಯಂಥದು ನಿಜವಾದದ್ದು ಅಪೂರ್ವ ಅಪರೂಪ.
~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ಹಂಸಗಳು ಸರೋವರವನ್ನ ಬಿಟ್ಟು ಹಾರಿ ಹೋಗುತ್ತಿರುವ ದೃಶ್ಯವನ್ನು ಎಂದಾದರೂ ಗಮನಿಸಿದ್ದೀರಾ? ನನಗೆ ರಾಮಕೃಷ್ಣರ ನೆನಪಾಗುತ್ತಿದೆ. ಅವರ ಮೊದಲ ಸಮಾಧಿ, ಮೊದಲ ಭಗವಂತನ ಸಾಕ್ಷಾತ್ಕಾರ, ಮೊದಲ ಸತ್ಯ ದರ್ಶನ ನೆನಪಾಗುತ್ತಿದೆ. ಆಗ ಅವರಿಗೆ ಕೇವಲ ಹದಿಮೂರು ವರ್ಷ ವಯಸ್ಸು. ಅವರು ರೈತನ ಮಗ, ಅಂದು ಅವರು ಹೊಲದಿಂದ ಮನೆಗೆ ವಾಪಸ್ಸು ಹೊರಟಿದ್ದರು.
ವಾಪಸ್ಸು ಹೊರಟ ಹಾದಿಯಲ್ಲಿ ಒಂದು ಸರೋವರ. ಇನ್ನೇನು ಮಳೆಗಾಲ ಆರಂಭವಾಗುವುದಿತ್ತು, ಮಾನ್ಸೂನ್ ಹೊಸ್ತಿಲಲ್ಲಿತ್ತು. ಆಕಾಶದಲ್ಲಿ ತುಂಬಿ ತುಳುಕುತ್ತಿದ್ದ ಕಪ್ಪು ಮೋಡಗಳು, ಬಿರುಸಿನ ಮಿಂಚು ಗುಡುಗು. ಬಾಲಕ ರಾಮಕೃಷ್ಣ ಲಗುಬಗೆಯಿಂದ ಮನೆಯತ್ತ ಹೆಜ್ಜೆ ಹಾಕುತ್ತಿದ್ದ. ಮಳೆ ಶುರುವಾಗುವ ಲಕ್ಷಣಗಳು ನಿಚ್ಚಳವಾಗಿದ್ದರಿಂದ ರಾಮಕೃಷ್ಣ ಮನೆಯತ್ತ ಓಡಲು ಶುರು ಮಾಡಿದ. ರಾಮಕೃಷ್ಣನ ಓಟದ ಸದ್ದು ಸರೋವರದಲ್ಲಿ ಪ್ರಶಾಂತವಾಗಿ ವಿಹರನಸುತ್ತಿದ್ದ ಹಂಸಗಳನ್ನು ಗಲಿಬಿಲಿಗೊಳಿಸಿತು. ಎಲ್ಲ ಹಂಸಗಳು ಸರೋವರನ್ನು ಬಿಟ್ಟು ಒಮ್ಮೆಲೇ ಹಾರತೊಡಗಿದವು.
ಹಂಸಗಳು ಅತ್ಯಂತ ಸುಂದರ ಪಕ್ಷಿಗಳು. ಅವುಗಳ ಶುಭ್ರ ಶ್ವೇತ ಬಣ್ಣ ಶುದ್ಧತೆಗೆ, ಮುಗ್ಧತೆಗೆ ಹುರುಪು ತುಂಬುವಂಥದು. ಸಾಲಾಗಿ ಹಾರುತ್ತಿದ್ದ ಹಂಸಗಳ ಹಿಂಡು ಥಟ್ಟನೇ ಕಪ್ಪು ಆಕಾಶದ ಹಿನ್ನೆಲೆಯನ್ನು ಮೀರಿ ಮೇಲೆ ಏರಿ ಹಾರತೊಡಗಿದವು. ಬಾಲಕ ರಾಮಕೃಷ್ಣನನ್ನು ಈ ದೃಶ್ಯ ಇನ್ನೊಂದು ಲೋಕಕ್ಕೆ ಕರೆದುಕೊಂಡು ಹೋಯಿತು. ಆ ನೋಟ ಎಷ್ಟು ಮನೋಹರವಾಗಿತ್ತೆಂದರೆ ರಾಮಕೃಷ್ಣ ಉತ್ಕಟ ಆನಂದದಿಂದ ಸರೋವರದ ದಂಡೆಯಲ್ಲಿ ಕುಸಿದು ಬಿದ್ದ. ಇಂಥ ಅಪಾರ ಆನಂದವನ್ನು ಸಹಿಸಲು ಸಾಧ್ಯವಾಗದೇ ಹೊರ ಜಗತ್ತಿಗೆ ಬಹುತೇಕ ಪ್ರಜ್ಞಾಹೀನನಾದ.
ಮಳೆಯಿಂದ ತಪ್ಪಿಸಿಕೊಂಡು ಮನೆ ಸೇರಲು ಓಡುತ್ತಿದ್ದ ಕೆಲ ರೈತರು, ಸರೋವರದ ದಂಡೆಯಲ್ಲಿ ಪ್ರಜ್ಞಾಹೀನನಂತೆ ಬಿದ್ದಿದ್ದ ರಾಮಕೃಷ್ಣನನ್ನು ಗುರುತಿಸಿದರು. ರಾಮಕೃಷ್ಣನ ಮುಖದಲ್ಲಿನ ಅಪೂರ್ವ ಕಳೆ , ದೇಹದಲ್ಲಿನ ದಿವ್ಯ ಕಾಂತಿಯನ್ನು ಕಂಡು ಭಾವುಕರಾದ ರೈತರು ರಾಮಕೃಷ್ಣನ ಎದುರು ಮಂಡಿಯೂರಿದರು. ಇಡೀ ವಾತಾವರಣ ದೈವಿಕವಾಗಿತ್ತು, ಅದು ಯಾವುದೋ ಇನ್ನೊಂದು ಲೋಕದಂತೆ ಭಾಸವಾಗುತ್ತಿತ್ತು.
ರೈತರು ರಾಮಕೃಷ್ಣನನ್ನು ಭಯ ಭಕ್ತಿಗಳಿಂದ ಮನೆಗೆ ಹೊತ್ತು ಕರೆದೊಯ್ದರು, ಪೂರ್ಣವಾಗಿ ಎಚ್ಚರವಾದಮೇಲೆ “ ಆದದ್ದು ಏನು “ ಎಂದು ಪ್ರಶ್ನೆ ಮಾಡಿದರು.
“ ಯಾವುದೋ ಅಗೋಚರದಿಂದ ಒಂದು ಕರೆ ;
ರಾಮಕೃಷ್ಣ ಹಂಸವಾಗು ! ನಿನ್ನ ಎರಡೂ ರೆಕ್ಕೆಗಳನ್ನು ಬಿಚ್ಚಿ ಹಾರು, ಇಡೀ ಆಕಾಶ ನಿನಗಾಗಿ ಕಾಯುತ್ತಿದೆ. ಸರೋವರದ ಸೌಂದರ್ಯ, ನಿರಾಳತೆ, ಸುರಕ್ಷತೆಯಲ್ಲಿ ಸಿಕ್ಕಿಹಾಕಿಕೊಳ್ಳಬೇಡ. “
“ ಈಗ ನಾನು ಮೊದಲಿನ ರಾಮಕೃಷ್ಣನಲ್ಲ, ನನಗೆ ಕರೆ ಬಂದಿದೆ, ಭಗವಂತ ನನಗಾಗಿ ಕಾಯುತ್ತಿದ್ದಾನೆ “
ಆ ದಿನದಿಂದ ರಾಮಕೃಷ್ಣ ಸಂಪೂರ್ಣವಾಗಿ ಬದಲಾಗಿಬಿಟ್ಟ . ಆಕಾಶದ ಎತ್ತರಕ್ಕೆ ಏರುತ್ತಿದ್ದ ಹಂಸಗಳ ಸಾಲು ಅವನನ್ನು ಟ್ರಿಗರ್ ಮಾಡಿಬಿಟ್ಟಿತ್ತು.
ಬುದ್ಧ ಹೇಳಿದ ಹಾಗೆ ;
“ ಹಂಸದಂತೆ ಎತ್ತರಕ್ಕೆ ಏರಿ ಸರೋವರಕ್ಕೆ ವಿದಾಯ ಹೇಳಿ “
ಬಹುಶಃ ಬುದ್ಧ, ರಾಮಕೃಷ್ಣರ ಬಗ್ಗೆ ಭವಿಷ್ಯ ಹೇಳುತ್ತಿರುವಂತೆ ಇದೆ ಈ ಮಾತು. ಬುದ್ಧ ಮತ್ತು ರಾಮಕೃಷ್ಣರ ನಡುವೆ ಇಪ್ಪತ್ತೈದು ಶತಮಾನಗಳು ಆದರೂ ಈ ಭವಿಷ್ಯವಾಣಿಯಂಥದು ನಿಜವಾದದ್ದು ಅಪೂರ್ವ ಅಪರೂಪ. ಈ ಭವಿಷ್ಯವಾಣಿ ಕೇವಲ ರಾಮಕೃಷ್ಣರ ಬಗ್ಗೆ ಅಲ್ಲ, ಅರಿವು ಸಾಧಿಸಿಕೊಂಡ ಎಲ್ಲ ಬುದ್ಧರ ಬಗ್ಗೆ.
ಹಾಗಾಗಿಯೇ ಹಂಸ, ಪೂರ್ವ ದೇಶಗಳಲ್ಲಿ ಅರಿವಿನ ಸಂಕೇತವಾಯಿತು ಮತ್ತು ಅರಿವನ್ನ ಕಂಡುಕೊಂಡವರು ಪರಮಹಂಸರೆಂದು ಗುರುತಿಸಲ್ಪಟ್ಟರು.