ಅಂಬಿಕಾತನಯದತ್ತರ ಅನುವಾದದಲ್ಲಿ ‘ಗಾಯತ್ರೀ ಸೂಕ್ತ’

ಕನ್ನಡ ಮರು ರೂಪ: ಅಂಬಿಕಾತನಯ ದತ್ತ

ಲಯದ ಬಸಿರ ಬಯಲಲ್ಲಿ ದೇವ-ಭವ ಬೀಜ ಬಿತ್ತಿದಾಕೆ
ಮೂಕು ಮೊಗ್ಗೆ ಮುನ್ನೂಕಿ ಬಂಡಿನಲಿ ತಲೆಯನೆತ್ತಿದಾಕೆ
ರಸವ ಮೀರಿ ತಾನಾರಿದಾತನಿಗೆ ಹೇಗೊ ರುಚಿಸಿದಾಕೆ
ಸಾಕ್ಷಿಪುರುಷನಾ ಅಕ್ಷಿಯಲ್ಲೆ ಪ್ರತ್ಯಕ್ಷ ರಚಿಸಿದಾಕೆ


ಜಡದ ಪ್ರಾಣಗತಿ ಜಡಿದು ಮಿಡಿದು ಸ್ವರಮೇಳ ಕೋದಿದಾಕೆ
ಕೋಟಿ ಚಿಕ್ಕೆ ಪುಟಕಿರುವ ಬಯಲ ಹೊತ್ತಿಗೆಯನೋದಿದಾಕೆ
ಪಿಂಡಗಳನು ಬ್ರಹ್ಮಾಂಡಗಳನು ಮಣಿಮಾಲೆ ಮಾಡಿದಾಕೆ
ನಿನ್ನ ತಾಳಗತಿಯಲ್ಲಿ ವಿಶ್ವಗಳ ಗೀತೆ ಹಾಡಿದಾಕೆ


ಕೀಟಕೀಟದಲಿ ಮಾಟ ಮಾಡಿ ಹಲಚೆಲುವು ತೂರಿದಾಕೆ
ಪಶುವಿನಿದಿರು ಮರಿದೂಡಿ ಮೋಡಿಯಲಿ ಒಲವ ಹೀರಿದಾಕೆ
ಹಾವಭಾವದಲಿ ಭೋಗ ಯೋಗದಲಿ ನಲಿವ ತೋರಿದಾಕೆ
ಸಕಲ ವಿಕಲಗಳ ಕಲೆಯ ಜಾಲದಲಿ ಬಲವ ಮೀರಿದಾಕೆ


ಚತುರ್ಮುಖನ ನಾಲಗೆಯ ಹಾಸಿ ತುಟಿದಿಂಬು ಮಾಡಿದಾಕೆ
ವತ್ಸಲಾಂಛನದ ಹೃದಯಕಮಲದಲಿ ಮನೆಯ ಹೂಡಿದಾಕೆ
ಹರನ ಮೈಯನರೆದುಂಬಿ ಲೀಲೆಯಲಿ ತಲೆಯನೇರಿದಾಕೆ
ಹೀಗೆ ಕುಣಿಯೆ ಆನಂದಲಹರಿ ಈ ಜೀವ ಸೇರಿದಾಕೆ


ಹಾಡಿದವನ ಕಾಪಾಡಲೆಂದು ಕೈ ಹತ್ತು ಎತ್ತಿದಾಕೆ
ಎತ್ತ ಕಿವಿಯದಿರುವಿದರು ಅತ್ತ ಐಮೊಗದಿ ಮುತ್ತಿದಾಕೆ
ತಮವು ಹಬ್ಬಿದತ್ತತ್ತ ನಿನ್ನ ಸುಳಿಬೆಳಕು ಸುತ್ತಿದಾಕೆ
ಇರುಳ ಕೋಟಿ ಹೆಡೆ ಮೆಟ್ಟಿ ಮಣಿಗಳೊಲು ಚಿಕ್ಕೆಯೊತ್ತಿದಾಕೆ


ಮುತ್ತು ಹವಳ ಬಂಗಾರ ನೀಲಮಣಿ ಸ್ಫಟಿಕ ಛಾಯೆಯಾಕೆ
ಕಣ್ಣ ನಡುವೆ ಒಳಗಣ್ಣ ತೆರೆಯುವಾ ದಿವ್ಯಮಾಯೆಯಾಕೆ
ಬೆಳೆವ ಚಂದ್ರಕಳೆ ಮುಕುಟದವಳೆ ತಂತನದ ಬಣ್ಣದಾಕೆ
ವರದ ಅಭಯ ಕರವಿರಲು ತಾಯಿ ಬಾ ಬೇರೆ ಕರೆಯಬೇಕೆ?
.

(ಇಂದು ಬೇಂದ್ರೆ ಜನ್ಮದಿನ)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a reply to ತ್ಯಾ‌ನಂ.ಗಂಗಾಧರ ಶಾಸ್ತ್ರಿ ಪ್ರತ್ಯುತ್ತರವನ್ನು ರದ್ದುಮಾಡಿ

This site uses Akismet to reduce spam. Learn how your comment data is processed.