ರಾಮಕೃಷ್ಣ ಪರಮಹಂಸರು ಶ್ರದ್ಧಾಭಕ್ತಿಗೆ ಹೆಚ್ಚಿನ ಒತ್ತು ನೀಡಿ ಬೋಧಿಸುತ್ತಿದ್ದರು. ಯಾವುದೇ ವಿಚಾರವನ್ನು ಹೇಳುವಾಗ ಸಾಮತಿಗಳನ್ನು ಬಳಸುವುದು ಅವರ ಶೈಲಿಯಾಗಿತ್ತು. ಶ್ರದ್ಧೆಯ ಕುರಿತು ಪರಮಹಂಸರು ನೀಡಿದ ಅಂತಹ ಒಂದು ಬೋಧನೆ ಇಲ್ಲಿದೆ…
ಅಧ್ಯಾತ್ಮ ಸಾಧನೆಗೆ ಎಲ್ಲಕ್ಕಿಂತ ಮುಖ್ಯವಾಗಿ ಬೇಕಾದುದು ಶ್ರದ್ಧೆ. ಸ್ವತಃ ನಿಮ್ಮ ಮೇಲಿನ ಶ್ರದ್ಧೆ ಹಾಗೂ ಯಾರ / ಯಾವುದರ ಕುರಿತು ಧ್ಯಾನಿಸುತ್ತೀರೋ ಅದರ / ಅವರ ಮೇಲಿನ ಶ್ರದ್ಧೆ. ಶಿಶುಸಹಜವಾದ ಶ್ರದ್ಧೆ ಮತ್ತು ಸರಳತೆಯಿಂದ ಭಗವಂತನನ್ನು ಕೂಡಾ ಹೊಂದಬಹುದು.
ಒಮ್ಮೆ ಒಬ್ಬನು, ಸಾಧುವೊಬ್ಬರನ್ನು ಕಂಡು ತನಗೆ ಉಪದೇಶ ನೀಡಬೇಕೆಂದು ಕೇಳಿಕೊಂಡನು. ಅದಕ್ಕೆ ಆ ಸಾಧುವು “ದೇವರನ್ನು ಹೃತ್ಪೂರ್ವಕವಾಗಿ ಪ್ರೀತಿಸು” ಎಂದರು.
ಈ ಉಪದೇಶ ಆತನಿಗೆ ಸಮಾಧಾನ ಕೊಡಲಿಲ್ಲ. “ನಾನು ದೇವರನ್ನು ನೊಡಿಯೇ ಇಲ್ಲ. ಅದರ ವಿಚಾರವಾಗಿ ನನಗೇನೂ ತಿಳಿದಿಲ್ಲ. ಇನ್ನು ಪ್ರೀತಿಸುವುದು ಹೇಗೆ!?” ಎಂದು ಪ್ರಶ್ನಿಸಿದನು.
ಅದಕ್ಕೆ ಆ ಸಾಧುವು, “ನೀನು ನಿನ್ನ ಜೀವನದಲ್ಲಿ ಅತಿಯಾಗಿ ಪ್ರೀತಿಸುವುದು ಯಾರನ್ನು?” ಎಂದು ಕೇಳಿದರು.
“ನನಗೆ ಯಾರೂ ಇಲ್ಲ. ನನ್ನ ಬಳಿ ಒಂದು ಕುರಿ ಇದೆ. ನಾನು ಅದನ್ನು ಇನ್ನಿಲ್ಲದಂತೆ ಪ್ರೀತಿಸುತ್ತೇನೆ” ಎಂದ ಆ ವ್ಯಕ್ತಿ.
“ಹಾಗಾದರೆ ಅದನ್ನೇ ಹೃತ್ಪೂರ್ವಕವಾಗಿ ಪ್ರೀತಿಸು. ದೇವರು ಅದರಲ್ಲೂ ಇರುವನು ಎಂದು ತಿಳಿದು ಪ್ರೀತಿಸು” ಎಂದರು ಸಾಧು.
ಅದನ್ನು ಕೇಳಿದ ವ್ಯಕ್ತಿಯು ಅಂದಿನಿಂದಲೇ ಮೊದಲುಗೊಂಡು ತನ್ನ ಕುರಿಯಲ್ಲು ಭಗವಂತನನ್ನು ಭಾವಿಸುತ್ತಾ ಸಾಧನೆ ಆರಂಭಿಸಿದನು. ಮುಂದೆ ಆತನ ಸಾಧನೆಗೆ ಕುರಿಯ ಆಧಾರವೂ ಬೇಕಾಗಲಿಲ್ಲ. ಅದು ಹಾಗೆಯೇ ಮುಂದುವರಿಯಿತು.
ನೀತಿ: ಒಮ್ಮೆ ನಮಗೆ ಅಸ್ತಿತ್ವದಲ್ಲಿ ನಂಬಿಕೆ ಹುಟ್ಟಿದರೆ ಸಾಕು, ಅನಂತರದಲ್ಲಿ ನಾಮ – ರೂಪಗಳ ಆಸರೆಯೇ ಬೇಕಾಗುವುದಿಲ್ಲ. ಭಕ್ತಿ – ವಿವೇಕ – ಸಾಧನೆಗಳ ಅವಶ್ಯಕತೆಯೂ ಬೇಕಾಗುವುದಿಲ್ಲ. ನಮ್ಮ ಶ್ರದ್ಧೆ, ನಂಬಿಕೆಗಳೇ ನಮ್ಮನ್ನು ಆಧ್ಯಾತ್ಮಿಕ ಉನ್ನತಿಗೆ ಏರಿಸುವವು.