ಸಾಕ್ಷಾತ್ಕಾರಕ್ಕೆ ಗುರುಕೃಪೆಯೇ ಮೂಲಭೂತವಾದದ್ದು ಅನ್ನುತ್ತಾರೆ ಶ್ರೀ ರಮಣ ಮಹರ್ಷಿ.
“ಆತ್ಮ ಸಾಕ್ಷಾತ್ಕಾರಪಡೆಯಲು ಗುರುವಿನ ಅಗತ್ಯವಿದೆಯೇ?”ಎಂದು ಶ್ರೀಮತಿ ಪಿಗೆಟ್ ಪ್ರಶ್ನೆ ಮಾಡುತ್ತಾರೆ. ನಂತರ ಉಳಿದ ಶಿಷ್ಯರೂ ಈ ಪ್ರಶ್ನೆಗೆ ದನಿಗೂಡಿಸುತ್ತಾರೆ. ಆಗ ನಡೆದ ಸಂವಾದದ ಸಾರಾಂಶ ಇಲ್ಲಿದೆ…
ಮಹರ್ಷಿ: ಗುರುವಿನ ಉಪದೇಶ,ಉಪನ್ಯಾಸ,ಧ್ಯಾನ ಇತ್ಯಾದಿಗಳಿಗಿಂತ ಗುರುಕೃಪೆ ಸಾಕ್ಷಾತ್ಕಾರಕ್ಕೆ ತುಂಬಾ ಅಗತ್ಯ. ಅದೇ ಮೂಲಭೂತ ಕಾರಣ, ಉಳಿದವೆಲ್ಲ ಸಾಕ್ಷಾತ್ಕಾರಕ್ಕೆ ಸಹಕಾರಿಗಳು ಅಷ್ಟೇ.
ಶಿಷ್ಯ : ಸಾಕ್ಷಾತ್ಕಾರಕ್ಕೆ ಇರುವ ಅಡೆತಡೆಗಳು ಯಾವುವು?
ಮ : ಮನಸ್ಸಿನ ಅಭ್ಯಾಸಗಳು-ಎಂದರೆ ವಾಸನೆಗಳು.
ಶಿ : ವಾಸನೆಗಳನ್ನು ಪರಿಹರಿಸಿಕೊಳ್ಳುವುದು ಹೇಗೆ?
ಮ : ಆತ್ಮಜ್ಞಾನದಿಂದ.
ಶಿ : ಎಂದರೆ ಇದೊಂದು ವಿಷವೃತ್ತವೇ ಆಯಿತು.
ಮ : ಅಂತಹ ಕಷ್ಟಗಳನ್ನು ತಂದೊಡ್ಡುವುದು ಜೀವದ ಅಹಂಕಾರ. ದ್ವಂದ್ವ – ವಿರೋಧಾಭಾಸಗಳಿಂದ ಸಂಕಟಪಡುವುದು ಈ ಅಹಂಕಾರವೇ. ಈ ಪ್ರಶ್ನೆಗಳನ್ನು ಕೇಳುತ್ತಿರುವವನು ಯಾರು ಎಂದು ಹುಡುಕುತ್ತಾಹೋಗು. ಆತ್ಮಜ್ಞಾನ ಸಿದ್ಧಿಸುತ್ತದೆ.
ಶಿ : ಸಾಕ್ಷಾತ್ಕಾರಕ್ಕೆ ಸಹಕಾರಿಗಳು ಯಾವುವು?
ಮ : ಶಾಸ್ತ್ರಗಳ ಹಾಗೂ ಆತ್ಮಜ್ಞಾನಿಗಳ ಉಪದೇಶ.
ಶಿ : ಅಂತಹ ಉಪದೇಶಗಳು ಚರ್ಚೆ, ಉಪನ್ಯಾಸ, ಧ್ಯಾನ ಮುಂತಾದ ರೂಪಗಳಲ್ಲಿರಬಹುದೆ?
ಮ : ಹೌದು, ಇದೆಲ್ಲ ಅನುಷಂಗಿಕ ಸಹಕಾರಿಗಳು. ಗುರುಕೃಪೆಯೇ ಮೂಲಭೂತವಾದದ್ದು.
ಶಿ : ಅದು ದೊರೆಯಲು ಎಷ್ಟು ಕಾಲ ಹಿಡಿಯಬಹುದು?
ಮ : ಅದನ್ನು ತಿಳಿಯಲು ನಿನಗೇಕೆ ಆಸೆ?
ಶಿ : ನನಗೆ ಭರವಸೆ ದೊರೆಯುವುದಕ್ಕಾಗಿ.
ಮ : ಅಂತಹ ಅಪೇಕ್ಷೆಯೂ ಒಂದು ಆತಂಕವೇ.ಆತ್ಮವು ಸದಾ ಇರುವಂತಹದು,ಅದಿಲ್ಲದೆ ಬೇರೆಏನೂ ಇಲ್ಲ.ಆತ್ಮನಿಷ್ಠನಾಗು-ಈ ಎಲ್ಲ ಅಪೇಕ್ಷೆ,ಸಂದೇಹಗಳು ಮಾಯವಾಗುತ್ತವೆ.ಅಂತಹ ಆತ್ಮವು ಜಾಗೃತ್ ಸ್ವಪ್ನ ಸುಷುಪ್ತಿಗಳಲ್ಲಿ ಸಾಕ್ಷೀ ರೂಪದಲ್ಲಿರುತ್ತದೆ.ಈ ಎಲ್ಲ ಅವಸ್ಥೆಗಳೂ ಅಹಂಕಾರಕ್ಕೆ ಸಂಬಂಧಪಟ್ಟವು.ಆತ್ಮವು ಈ ಅಹಂ ಅನ್ನೂ ದಾಟಿಹೋಗುವಂತಹದು.ನಿದ್ರೆಯಲ್ಲಿ ನೀನು ಇರಲಿಲ್ಲವೇ? ಆಗ ನೀನು ನಿದ್ರಿಸುತ್ತಿದ್ದೇನೆ ಎಂದು ತಿಳಿದಿದ್ದೆಯಾ? ಅಥವಾ ಪ್ರಪಂಚವೇ ನಿನ್ನಪಾಲಿಗೆ ಇರಲಿಲ್ಲವೋ? ಜಾಗೃತ್ ಸ್ಥಿತಿಯಲ್ಲಿ ಮಾತ್ರ ನಿದ್ರೆಯ ಅನುಭವವನ್ನು ನೀನು ವರ್ಣಿಸಬಲ್ಲೆ, ಆದುದರಿಂದ ಪ್ರಜ್ಞೆಎಂಬುದು ಜಾಗೃತ್ಸ್ಥಿತಿಯಲ್ಲೂ ನಿದ್ರೆಯಲ್ಲೂ ಬೆಳಗುತ್ತಲೇಇದೆ-ಒಂದೇ ಆಗಿದೆ. ಈ ಪ್ರಜ್ಞೆ ಏನೆಂಬುದನ್ನು ನೀನುತಿಳಿದಲ್ಲಿ ಮೂರೂ ಅವಸ್ಥೆಗಳಲ್ಲಿ ಅದು ಸಾಕ್ಷೀಭೂತವಾಗಿದೆ ಎಂಬುದನ್ನು ತಿಳಿಯುವೆ. ನಿದ್ರೆಯಲ್ಲೂ ಎಚ್ಚರದಲ್ಲೂ ಜಾಗೃತವಾಗಿರುವ ಈ ಪ್ರಜ್ಞೆಯನ್ನು ಶೋಧಿಸಬೇಕು.

