ನಿಮ್ಮ ಬದುಕಿನಲ್ಲಿ ನಿಮ್ಮ ಹೊರತಾಗಿ ಬೇರೆ ಯಾರೂ ಇಲ್ಲ. ನಗುವುದು, ಅಳುವುದು ಎಲ್ಲ ನಿಮ್ಮ ಆಯ್ಕೆಗಳೇ. ಎಲ್ಲದಕ್ಕೂ ನೀವೇ ಜವಾಬ್ದಾರರು… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ದೂಷಣೆಯಿಂದ
ಏನೂ ಪ್ರಯೋಜನವಿಲ್ಲ.
ವಿಷಾದದ ಆಟ
ಮುಂದುವರೆಯುತ್ತದೆ ಅಷ್ಟೆ.
ಆಪಾದನೆ,
ನಿಮ್ಮಲ್ಲಿರುವ ಸಂಪತ್ತನ್ನೆಲ್ಲಾ ಕದ್ದು
ಲೆಕ್ಕ ಗೊತ್ತಿಲ್ಲದ
ಒಬ್ಬ ಮೂರ್ಖನ ಕೈಗೆ ಕೊಟ್ಟಂತೆ.
ಈಗಲಾದರೂ
ಜಾಣರಾಗಿ ಗೆಳೆಯರೆ.
- ಹಾಫಿಜ್
ನೀವು ಈಗಾಗಲೇ ಏನು ಮಾಡಿರುವಿರೋ, ಈಗ ಏನು ಮಾಡುತ್ತಿರುವಿರೋ, ಮುಂದೆ ಏನು ಮಾಡಲಿರುವಿರೋ ಯಾವುದೂ ಬೇರೆ ಬೇರೆ ಮತ್ತು ನಿಮ್ಮಿಂದ ಹೊರತಾದದ್ದು ಅಲ್ಲ. ಇದು ನಿಮ್ಮ ಸ್ವಂತದ ಆಟ. ನೀವು ಯಾತನೆ ಪಡುತ್ತಿರುವಿರಾದರೆ ಅದು ನಿಮ್ಮ ಆಯ್ಕೆಯ ಕಾರಣವಾಗಿ, ನೀವು ಆನಂದ ಅನುಭವಿಸುತ್ತಿರುವಿರಾದರೆ ಅದೂ ಕೂಡ ನಿಮ್ಮ ಆಯ್ಕೆಯ ಕಾರಣವಾಗಿಯೇ.
ನಾನು ಹೊಸದಾಗಿ ಕಾಲೇಜ್ ಒಂದರಲ್ಲಿ ಅಧ್ಯಾಪಕನಾಗಿ ನೇಮಕಗೊಂಡಿದ್ದೆ. ಕಾಲೇಜು ಊರಿನಿಂದ ದೂರ ಇದ್ದುದರಿಂದ ಮತ್ತು ಕಾಲೇಜಿನ ಹತ್ತಿರ ಯಾವ ಒಳ್ಳೆಯ ಹೊಟೆಲ್ ಇಲ್ಲದ ಕಾರಣವಾಗಿ, ನನ್ನ ಎಲ್ಲ ಸಹೋದ್ಯೋಗಿ ಪ್ರೊಫೆಸರ್ ಗಳು ಲಂಚ್ ಗಾಗಿ ಮನೆಯಿಂದ ಊಟ ತರುತ್ತಿದ್ದರು. ನಾವೆಲ್ಲ ಸಹೋದ್ಯೋಗಿಗಳು ಒಂದೇ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದೆವು.
ಒಂದು ದಿನ ಲಂಚ್ ಸಮಯದಲ್ಲಿ ನನ್ನ ಪಕ್ಕ ಕುಳಿತಿದ್ದ ಸಹೋದ್ಯೋಗಿ ತನ್ನ ಲಂಚ್ ಬಾಕ್ಸ್ ಓಪನ್ ಮಾಡಿ, ಅದರೊಳಗಿನ ಊಟ ಗಮನಿಸಿ, ನಿರಾಸೆಯಿಂದ ನಿಟ್ಟುಸಿರುಬಿಟ್ಟ, “ಓಹ್ ಮತ್ತೆ ಇವತ್ತು ಚಪಾತಿ ಮತ್ತು ಆಲೂಗಡ್ಡೆ ಪಲ್ಯ”. ಬಹುಶಃ ಅವನಿಗೆ ಚಪಾತಿ ಮತ್ತು ಆಲೂಗಡ್ಡೆ ಪಲ್ಯ ಇಷ್ಟ ಇರದಿರಬಹುದು ಎಂದು ನನಗನಿಸಿತು.
ಆದರೆ ನಾನು ಕಾಲೇಜಿಗೆ ಹೊಸಬನಾಗಿದ್ದರಿಂದ ಏನೂ ಹೇಳಲು ಹೋಗಲಿಲ್ಲ. ಮರುದಿನ ಮತ್ತೆ ಇದೇ ಘಟನೆ ಮರುಕಳಿಸಿತು. ಮತ್ತೆ ನನ್ನ ಸಹೋದ್ಯೋಗಿ ತನ್ನ ಲಂಚ್ ಬಾಕ್ಸ್ ಬಿಚ್ಚಿ ನೋಡಿ ನಿರಾಸೆಯಿಂದ ಹೇಳಿದ, “ ಓಹ್ ಇವತ್ತೂ ಕೂಡ ಚಪಾತಿ ಮತ್ತು ಆಲೂಗಡ್ಡೆ ಪಲ್ಯ”.
ಈ ಬಾರಿ ನನ್ನಿಂದ ಸುಮ್ಮನಿರಲಾಗಲಿಲ್ಲ, “ನಿಮಗೆ ಇಷ್ಟವಾಗದಿದ್ದರೆ ನಿಮ್ಮ ಹೆಂಡತಿಗೆ ಬೇರೆ ಏನಾದರೂ ಮಾಡಲು ಯಾಕೆ ಹೇಳಬಾರದು?” ನಾನು ಅವನಿಗೆ ಸಲಹೆ ನೀಡಿದೆ.
“ಹೆಂಡತಿ ! ಯಾವ ಹೆಂಡತಿ?” ಅವನಿಗೆ ಆಶ್ಚರ್ಯವಾಯಿತು.
“ನನಗೆ ಮದುವೆಯಾಗಿಲ್ಲ, ನನ್ನ ಲಂಚ್ ನಾನೇ ತಯಾರಿಸುತ್ತೇನೆ”. ಅವನು ಹೇಳಿದ.
ನಿಮ್ಮ ಬದುಕು ಕೂಡ ಹೀಗೆಯೇ ಇದೆ. ನಿಮ್ಮ ಹೊರತಾಗಿ ಅಲ್ಲಿ ಬೇರೆ ಯಾರೂ ಇಲ್ಲ. ನಗುವುದು, ಅಳುವುದು ಎಲ್ಲ ನಿಮ್ಮ ಆಯ್ಕೆಗಳೇ. ಎಲ್ಲದಕ್ಕೂ ನೀವೇ ಜವಾಬ್ದಾರರು. ನೀವು ಯಾರನ್ನೂ ದೂರುವ ಹಾಗಿಲ್ಲ, ಯಾರನ್ನೂ ಹೊಗಳುವ ಹಾಗಿಲ್ಲ. ನಿಮ್ಮ ಆಯ್ಕೆಗಳಲ್ಲಿಯೇ ಇದೆ ನಿಮ್ಮ ಆನಂದ, ಯಾತನೆ ಎಲ್ಲದರ ಕೀಲಿ ಕೈ.

