ಬೇಕಿರುವುದು ಇಷ್ಟೇ… ಪ್ರೀತಿ ಮತ್ತು ಕಾರುಣ್ಯ

ಪ್ರೀತಿ ಮತ್ತು ಕಾರುಣ್ಯಗಳೇ ನಮ್ಮ ಸಿದ್ಧಾಂತಗಳು : ಇತರರಿಗಾಗಿ ಪ್ರೀತಿ ಮತ್ತು ಅವರ ಹಕ್ಕು, ಘನತೆಯ ಬಗ್ಗೆ ಗೌರವ ನಮ್ಮ ಮುಖ್ಯ ಅವಶ್ಯಕತೆ. ಅವರು ಯಾರು? ಅವರು ಏನು ಎನ್ನುವುದು ಮುಖ್ಯವಲ್ಲ. ಕೊನೆಗೂ ನಮಗೆ ಬೇಕಾಗಿರುವುದು ಪ್ರೀತಿ ಮತ್ತು ಕಾರುಣ್ಯ ಮಾತ್ರ ~ ದಲಾಯಿ ಲಾಮಾ । ಚಿದಂಬರ ನರೇಂದ್ರ

ಬದುಕಿನ ಈ ಎರಡು ದಿನ ಮಾತ್ರ
ನಿಮ್ಮಿಂದ ಏನೂ ಸಾಧ್ಯವಾಗುವುದಿಲ್ಲ.
ಒಂದು ನಿನ್ನೆಯ ದಿನ
ಇನ್ನೊಂದು ನಾಳೆಯ ದಿನ.

ಆದರೆ ಇಂದು, ಇವತ್ತಿನ ದಿನ ಮಾತ್ರ
ಸರಿಯಾದ ದಿನ
ಪ್ರೇಮಿಸಲು, ನಂಬಲು,
ನೀವು ಬಯಸಿದ್ದನ್ನೆಲ್ಲ ಸಾಧ್ಯ ಮಾಡಲು

ಮತ್ತು ಬಹುತೇಕ
ಇಡಿಯಾಗಿ ಬದುಕಲು.

ನಾವು ಬೇರೆ ಎಲ್ಲವನ್ನೂ ನಿರಾಕರಿಸಬಹುದು : ಧರ್ಮ, ಸಿದ್ಧಾಂತ, ಎಲ್ಲ ಕಲಿತ ಜಾಣತನ ಈ ಎಲ್ಲವನ್ನು ಕೂಡ. ಆದರೆ ಪ್ರೀತಿ ಮತ್ತು ಕಾರುಣ್ಯದ ಅವಶ್ಯಕತೆಯನ್ನು ನಿರಾಕರಿಸುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ಪ್ರೀತಿ ಮತ್ತು ಕಾರುಣ್ಯ ನನ್ನ ನಿಜವಾದ ಧರ್ಮ, ನನ್ನ ಅತ್ಯಂತ ಸರಳ ನಂಬಿಕೆಗಳು. ಈ ಅರ್ಥದಲ್ಲಿ ನಮಗೆ ಬೇರೆ ಯಾವ ಮಂದಿರ, ಮಸಿದಿ, ಚರ್ಚು, ಇತ್ಯಾದಿಗಳ ಅವಶ್ಯಕತೆಯಿಲ್ಲ, ಹಾಗು ಯಾವ ಸಂಕೀರ್ಣ ತತ್ವಜ್ಞಾನ, ಸಿದ್ಧಾಂತ ಅಥವಾ ಕಮಾಂಡಮೆಂಟ್ಸ್ ಬೇಕಿಲ್ಲ. ನಮ್ಮ ಹೃದಯ, ನಮ್ಮ ಮನಸ್ಸುಗಳೇ ನಮ್ಮ ದೇವಾಲಯಗಳು.

ಪ್ರೀತಿ ಮತ್ತು ಕಾರುಣ್ಯಗಳೇ ನಮ್ಮ ಸಿದ್ಧಾಂತಗಳು : ಇತರರಿಗಾಗಿ ಪ್ರೀತಿ ಮತ್ತು ಅವರ ಹಕ್ಕು, ಘನತೆಯ ಬಗ್ಗೆ ಗೌರವ ನಮ್ಮ ಮುಖ್ಯ ಅವಶ್ಯಕತೆ. ಅವರು ಯಾರು? ಅವರು ಏನು ಎನ್ನುವುದು ಮುಖ್ಯವಲ್ಲ. ಕೊನೆಗೂ ನಮಗೆ ಬೇಕಾಗಿರುವುದು ಪ್ರೀತಿ ಮತ್ತು ಕಾರುಣ್ಯ ಮಾತ್ರ. ಎಲ್ಲಿಯವರೆಗೆ ನಮ್ಮ ಪ್ರತಿದಿನದ ಬದುಕಿನಲ್ಲಿ ನಾವು ಇವುಗಳನ್ನು ಪ್ರ್ಯಾಕ್ಟೀಸ್ ಮಾಡುತ್ತೇವೆಯೋ ಅಲ್ಲಿಯವರೆಗೆ, ನಾವು ಕಲಿತವರೋ ಕಲಿಯದವರೋ, ನಾವು ಬುದ್ಧನನ್ನು ನಂಬುತ್ತೇವೆಯೋ ಇಲ್ಲವೋ ಯಾವುದೂ ಮಹತ್ವದ್ದಾಗುವುದಿಲ್ಲ. ಎಲ್ಲಿಯವರೆಗೆ ನಮ್ಮಲ್ಲಿ ಕಾರುಣ್ಯ ತುಂಬಿಕೊಂಡಿದೆಯೋ ಎಲ್ಲಿಯವರೆಗೆ ನಾವು ನಮ್ಮ ನಡುವಳಿಕೆಯಲ್ಲಿ ಈ ಕುರಿತು ಜವಾಬ್ದಾರಿಯನ್ನು ಹೊಂದಿರುತ್ತೇವೆಯೋ ಅಲ್ಲಿಯವರೆಗೆ ನಮ್ಮ ಬದುಕು ಆನಂದದಿಂದ ತುಂಬಿಕೊಂಡಿರುತ್ತದೆ ಎನ್ನುವುದರಲ್ಲಿ ನನಗೆ ಯಾವ ಸಂಶಯವೂ ಇಲ್ಲ.

ಒಮ್ಮೆ ಒಬ್ಬ ವಯಸ್ಸಾದ ಮನುಷ್ಯ ಸಮುದ್ರದ ದಂಡೆಯ ಮೇಲೆ ಓಡಾಡುತ್ತಿದ್ದಾಗ ಸಾವಿರಾರು ಸಂಖ್ಯೆಯಲ್ಲಿ ನಕ್ಷತ್ರ ಮೀನುಗಳು ತೀರದಲ್ಲಿ ಚಡಪಡಿಸುವುದನ್ನ ಕಂಡ.

ದೂರದಲ್ಲಿ ಒಬ್ಬ ಹುಡುಗಿ ಒಂದೊಂದಾಗಿ ಮೀನುಗಳನ್ನು ಎತ್ತಿ ವಾಪಸ್ ಸಮುದ್ರಕ್ಕೆ ಎಸೆಯುತ್ತಿದ್ದಳು. ಈ ದೃಶ್ಯವನ್ನು ನೋಡಿ ಆಶ್ಚರ್ಯಚಕಿತನಾದ ಮನುಷ್ಯ ಹತ್ತಿರ ಹೋಗಿ ಆ ಹುಡುಗಿಯನ್ನು ಮಾತಾಡಿಸಿದ.

“ ಹುಡುಗಿ, ಏನು ಮಾಡುತ್ತಿರುವೆ?“

“ ಈ ಮೀನುಗಳನ್ನು ಕಾಪಾಡುತ್ತಿದ್ದೇನೆ “ ಉತ್ತರಿಸಿದಳು ಹುಡುಗಿ. “ ನಾನು ಈ ಮೀನುಗಳನ್ನ ವಾಪಸ್ ಸಮುದ್ರಕ್ಕೆ ಬಿಡದಿದ್ದರೆ, ಅವು ಸತ್ತು ಹೋಗುತ್ತವೆ “

ಹುಚ್ಚು ಹುಡುಗಿ, ಆ ಮನುಷ್ಯ ಒಳಗೊಳಗೆ ನಕ್ಕ.

“ ಇರುವುದು ನೀನೊಬ್ಬಳೇ, ಮೀನುಗಳೋ ಸಾವಿರ ಸಾವಿರ. ಹೇಳು ಹೇಗೆ ಸಾಧ್ಯ ಈ ಕೆಲಸ ನಿನ್ನಿಂದ? “

ಹುಡುಗಿ ಬಾಗಿ ಒಂದು ಮೀನನ್ನು ಕೈಗೆತ್ತಿಕೊಂಡು ಆ ಮೀನನ್ನು ಒಮ್ಮೆ, ಆ ಮನುಷ್ಯನನ್ನು ಒಮ್ಮೆ ನೋಡಿದಳು.

“ನೋಡು ಹೀಗೆ” ಎನ್ನುತ್ತಾ

ಮೀನನ್ನು ಬೀಸಿ ಸಮುದ್ರದಲ್ಲಿ ಎಸೆದಳು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.