ನೆರೂಡನ Book of Questions, ಕನ್ನಡದಲ್ಲಿ… #12

ಪಾಬ್ಲೋ ನೆರೂಡನ ‘ದ ಬುಕ್ ಆಫ್ ಕ್ವೆಶ್ಚನ್’ ಕೃತಿಯ ಆಯ್ದ ಪ್ರಶ್ನಪದ್ಯಗಳನ್ನು ಕನ್ನಡಕ್ಕೆ ತಂದಿದ್ದಾರೆ ಓ.ಎಲ್.ನಾಗಭೂಷಣ ಸ್ವಾಮಿ. ಈ ಸರಣಿಯ 12ನೇ ಕಂತು ಇಲ್ಲಿದೆ…

ಹೊನ್ನಿನ ಹನಿಯೊಂದು
ಮಿರುಗುವುದೇ ನನ್ನ ಹಾಡಿನಲ್ಲಿ?

ಶಬ್ದವೊಂದು ಆಗೀಗ
ಹಾವಿನ ಹಾಗೆ ವಕ್ರಗತಿಯಲ್ಲಿ ಸಾಗುವುದೇ?

ಹೆಸರೊಂದು ಕಿತ್ತಳೆಯ ಪರಿಮಳದ ಹಾಗೆ
ನಿಮ್ಮ ಮನದಲುಳಿಯುವುದೇ?

ಚಿನಿವಾರಿಕೆಯೆಂಬ ಶಬ್ದದ ನುಡಿ ಮೀನು
ಯಾವ ನದಿಯಿಂದ ಬಂದವೋ?

ವ್ಯಂಜನಗಳಿಗಿಂತ ಸ್ವರಗಳನೇ ಅಡಕಿರಿದ
ನುಡಿ ಹಡಗು ಅಪಘಾತಕ್ಕೆ ಈಡಾಗದೇ?

*

ರೈಲು ಎಂಬ ಶಬ್ದದ ʼರೈʼ
ಎಂಬುದರಿಂದ ಹೊಗೆ, ಉಗಿ ಹೊಮ್ಮುವುದೇ?

ಹಿಂಸೆಗೊಳಗಾದ ಪಟ್ಟಣದ ಮೇಲೆ
ಮಳೆ ಯಾವ ಭಾಷೆಯಲ್ಲಿ ಸುರಿಯುವುದು?

ಮುಂಜಾವದಲಿ ನಸುಕಿನ ಮಿದು ಸೊರಗಳನು
ಕಡಲಗಾಳಿಯೂ ರಿಪೀಟು ಮಾಡುವುದಾ?

ಗಸಗಸೆಗಿಂತ ವಿಶಾಲವಾದ
ನಕ್ಷತ್ರ ಯಾವುದಾದರೂ ಇದೆಯಾ?

ತೋಳ ಎಂಬ ಶಬ್ದದ ಎರಡು ಅಕ್ಷರಗಳಗಿಂತ
ಚೂಪಾದ ಹಲ್ಲು ತೋಳಕ್ಕೆ ಇದೆಯಾ?

*

ಅಕ್ಷರಮಾಲಾ ಪ್ರೀತಿಸುವೆಯಾ ನನ್ನ?
ನೀಡುವೆಯಾ ಅರ್ಥವತ್ತಾದ ಒಂದು ಮುತ್ತು?

ನಿಘಂಟು ಅನ್ನುವುದು ಅರ್ಥ ಸಮಾಧಿಯ ಗುಮ್ಮಟವೋ?
ಅರ್ಥಮಧು ಅಡಗಿರುವ ಜೇನುಹುಟ್ಟೋ?

ಹೂತು ಹಾಕಿದ ಕಾಲವನ್ನು
ಯಾವ ಕಿಟಕಿಯಲ್ಲಿ ನಿಂತು ನೋಡುತಿದ್ದೇನೆ?

ಅಥವ ದೂರದಿಂದ ನನಗೆ ಕಾಣುತಿರುವುದು
ನಾನಿನ್ನೂ ಜೀವಿಸಲಾಗಿರದ ಬದುಕೋ?

*

ಚಿಟ್ಟೆಯ ರೆಕ್ಕೆಯ ಮೇಲೆ ನೊಣಗಳು ಬರೆದದ್ದನ್ನು
ಯಾವಾಗ ಓದುವುದು ಚಿಟ್ಟೆ?

ಸತ್ತ ಇರುವೆಸೈನಿಕರ ಸಂಖ್ಯೆಯನ್ನು
ಯಾವ ಸಂಖ್ಯೆಯಿಂದ ಕಳೆಯುತ್ತವೆ ಗೂಡಿನ ಇರುವೆಗಳು?

ನಿಶ್ಚಲ ನಿಂತ ತೂಫಾನನ್ನು
ಯಾವ ಹೆಸರಿನಿಂದ ಕರೆಯುವರು?


ಪಾಬ್ಲೋ ನೆರೂಡನ ವಿಶಿಷ್ಟ ಸಂಕಲನ ‘ದಿ ಬುಕ್‌ ಆಫ್‌ ಕ್ವೆಶ್ಚನ್ಸ್’ ಕುರಿತು “ಇಲ್ಲಿ ʻಪ್ರಶ್ನೆʼಗಳನ್ನು ಕೇಳುತಿರುವ ಕವಿ ಅಸಹಾಯಕ ವ್ಯಕ್ತಿ. ಈ ರಚನೆಗಳಲ್ಲಿ ಮಗುವಿನ ಬೆರಗು, ಹಿರೀಕನ ಅನುಭವ ಎರಡೂ ಬೆರೆತಿವೆ. ಮಕ್ಕಳು ಕೇಳುವ ವೈಚಾರಿಕವಲ್ಲದ ಪ್ರಶ್ನೆಗಳಿಗೆ ಹಿರಿಯರು ವೈಚಾರಿಕ ಬುದ್ಧಿಯನ್ನು ಬಳಸಿಯೇ ಉತ್ತರ ಹೇಳುತ್ತಾರೆ. ಬದುಕಿನ ವೈಚಾರಿಕ ಪರಿಶೀಲನೆಯಿಂದ ಬರುವ ಕ್ಲಾರಿಟಿ ನೆರೂಡನಿಗೆ ಬೇಕು ಅನಿಸಿದರೂ ವೈಚಾರಿಕ ಮನಸಿನ ಹಂಗಿಗೆ ಒಳಗಾಗಲು ಒಲ್ಲೆ ಅನ್ನುತ್ತಾನೆ. ಇಲ್ಲಿನ ಯಾವ ಪ್ರಶ್ನೆಗೂ ವೈಚಾರಿಕ ಉತ್ತರವಿಲ್ಲ. ಈ ಪ್ರಶ್ನೆಗಳನ್ನು ಕುರಿತು ಮಾಡಲು ತೊಡಗಿದರೆ ನಮ್ಮ ನಮ್ಮ ಮುಖಗಳೇ ಕಾಣುತ್ತವೆ” ಅನ್ನುತ್ತಾರೆ ಬರಹಗಾರರೂ ಭಾಷಾಂತರಕಾರರೂ ಆದ ಓ. ಎಲ್. ನಾಗಭೂಷಣ ಸ್ವಾಮಿ. ಇವರು ಈ ಕೃತಿಯ ಹಲವು ಪ್ರಶ್ನ ಪದ್ಯಗಳನ್ನು ಕನ್ನಡಕ್ಕೆ ತಂದಿದ್ದು, ಅವುಗಳನ್ನು ‘ಅರಳಿಮರ’ ವಾರಾಂತ್ಯ ಸರಣಿಯಾಗಿ ಪ್ರಕಟಿಸುತ್ತಿದೆ.

(Illustrations: Chetana Thirthahalli)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.