ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಅಮರ ಗಾಯಕ ಕಿಶೋರ್ ಕುಮಾರ್ ನ ಯಾವಾಗಲೂ ಒಂದು ಕನಸು ಕಾಡುತ್ತಿತ್ತು. ಆ ಕನಸಿನಲ್ಲಿ ಒಂದು ಖಾಲೀ ಚರ್ಚ್ ಮತ್ತು ಅದರ ನಡುವೆ ಒಬ್ಬ ಬಿಷಪ್ ನಿಂತಿರುತ್ತಿದ್ದ. ಈ ಕನಸು ಕಿಶೋರ್ ನ ಎಷ್ಟು ಸತಾಯಿಸಿತೆಂದರೆ ಕೊನೆಗೆ ಇದು ಅವನು ನಿದ್ದೆಗೆಡಲೂ ಕಾರಣವಾಯಿತು.
ಕಿಶೋರ್ ಈ ಕನಸಿನಿಂದಾಗಿ ಎಷ್ಟು ಕಂಗೆಟ್ಟಿದ್ದನೆಂದರೆ ಈ ರಹಸ್ಯಮಯ ಚರ್ಚ ಗಾಗಿ ಅವನು ಎಲ್ಲೆಂದರಲ್ಲಿ ಹುಡುಕಾಡಲು ಶುರು ಮಾಡಿದ. ಈ ಹುಡುಕಾಟದಲ್ಲಿ ಅವನು ಎಷ್ಟೋ ಚರ್ಚಗಳಿಗೆ ಭೇಟಿಕೊಟ್ಟನಾದರೂ ಎಲ್ಲ ಕಡೆ ಅವನಿಗೆ ನಿರಾಸೆಯೇ ಕಾದಿತ್ತು. ಇದು ನಿಯತಿಯೋ, ದೈವಿ ಸಂಪರ್ಕವೋ ಅಥವಾ ಕೇವಲ ಕಾಕತಾಳಿಯವೋ ಇರಬಹುದು ಆದರೆ ಇದು ಕಡೆಗಣಿಸಲು ಮಾತ್ರ ಅಸಾಧ್ಯ ಎನ್ನುವಷ್ಟು ವಿಚಿತ್ರವಾಗಿತ್ತು.
ಕೆಲವು ವರ್ಷಗಳ ನಂತರ ದೂರ್ ಕಾ ರಾಹೀ ಸಿನೇಮಾದ ಶೂಟಿಂಗ್ ಸಮಯದಲ್ಲಿ ಖಂಡಾಲಾದ ಉರಿಯುವ ಬಿಸಿಲಿನಲ್ಲಿ ಕಿಶೋರ್ ಮತ್ತು ಅವನ ಸಿನೆಮ್ಯಾಟೋಗ್ರಾಫರ್ ಗೆಳೆಯ ಅಲೋಕ್ ದಾಸ್ ಗುಪ್ತ ಒಂದು ಸ್ಮಶಾನದಲ್ಲಿ ಆಶ್ರಯ ಪಡೆದಿದ್ದರು. ಆಶ್ಚರ್ಯವೆಂದರೆ ಅಲ್ಲಿ ಕಿಶೋರ್ ಗೆ ಒಬ್ಬ ಬಿಶಪ್ ನ ಗೋರಿ ಕಾಣಿಸಿತು. ಆ ಗೋರಿಯ ಮೇಲೆ ಬರೆದಿದ್ದನ್ನುನೋಡಿದಾಗ, ಬಿಷಪ್ ಸತ್ತದ್ದು ಅಗಸ್ಟ 4 – ವರ್ಷ 1929. ಆಶ್ಚರ್ಯ ಎಂದರೆ ಕಿಶೋರ್ ಹುಟ್ಟಿದ್ದು ಥೇಟ್ ಅದೇ ದಿನ. ಆ ಬಿಷಪ್ ಹುಟ್ಟಿದ್ದು 13th ಅಕ್ಟೋಬರ್ 1887, ಇನ್ನೂ ಆಶ್ಚರ್ಯಕರ ವಿಷಯವೆಂದರೆ ಸರಿಯಾಗಿ ನೂರು ವರ್ಷಗಳ ನಂತರ, ಅಂದರೆ 13th ಅಕ್ಟೋಬರ್ 1987 ರಂದು ಕಿಶೋರ್ ಕುಮಾರ್ ತನ್ನ ಈ ಲೋಕದ ಯಾತ್ರೆ ಮುಗಿಸಿದ್ದು. ಆದ್ದರಿಂದಲೇ ಕಿಶೋರ್ ಹಾಡುಗಳಲ್ಲಿ ಒಂದು ದೈವಿಕತೆ ಒಂದು ಸಂತತನ ಇತ್ತು ಎನ್ನುತ್ತಾರೆ ಕಿಶೋರ್ ಮಗ ಅಮಿತ್ ಕುಮಾರ್ .

