ಸೈತಾನ ಅತ್ಯಂತ ಆಸಕ್ತಿದಾಯಕ

ಒಂದು ಪುಸ್ತಕವನ್ನು ನಿಷೇಧಿಸಿದರೆ, ಜನರು ಅದನ್ನು ಇನ್ನಷ್ಟು ಓದಲು ಬಯಸುತ್ತಾರೆ. ಯಾರಾದರೂ ನಿಮಗೆ ಹೇಳದಿರುವ ಒಂದು ರಹಸ್ಯವನ್ನು ತಿಳಿದುಕೊಳ್ಳಬೇಕೆಂಬ ಆಸೆ ಏಕೆ ನಿಮ್ಮೊಳಗೆ ಹೆಚ್ಚಾಗಿರುತ್ತದೆ ಎಂಬುದಕ್ಕೂ ಇದೇ ಕಾರಣ । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಅನುಭಾವಿ ಕವಿ ವಿಲಿಯಂ ಬ್ಲೇಕ್ ಒಮ್ಮೆ ವಾದಿಸಿದಂತೆ, ಸೈತಾನನೇ ಅತ್ಯಂತ ಆಸಕ್ತಿದಾಯಕ ಪಾತ್ರ. ಮಿಲ್ಟನ್ ನ Paradise Lost ಕೃತಿಯಲ್ಲಿನ ಎಲ್ಲಾ ಪಾತ್ರಗಳ ಪೈಕಿ, ನಿಜವಾದ ಉತ್ಸಾಹ ಮತ್ತು ಶಕ್ತಿಯಿಂದ ತುಂಬಿರುವ ಪಾತ್ರ ಸೈತಾನನೇ. ನರಕಕ್ಕೆ ತಳ್ಳಲ್ಪಟ್ಟ ನಂತರವೂ, ಅವನು ಪಶ್ಚಾತ್ತಾಪ ಪಡುವುದನ್ನು ನಿರಾಕರಿಸುತ್ತಾನೆ. ಅವನ ಪ್ರಸಿದ್ಧ ಮಾತು ಹೀಗಿದೆ: “ಸ್ವರ್ಗದಲ್ಲಿ ಸೇವಕನಾಗಿರುವುದಕ್ಕಿಂತ ನರಕದಲ್ಲಿ ರಾಜನಾಗಿರುವುದು ಉತ್ತಮ.” ಯಾವಾಗಲೂ ನಾವು ಸೈತಾನನ್ನೇ ಮೆಚ್ಚಬೇಕಾಗಿಲ್ಲವಾದರೂ, ಯಾವುದೋ ಒಂದು ರೀತಿಯಲ್ಲಿ ನಾವು ಅವನತ್ತ ಆಕರ್ಷಿತರಾಗುತ್ತೇವೆ ಮತ್ತು ಅವನನ್ನು ಮೆಚ್ಚುತ್ತೇವೆ ಎನ್ನುವುದು ಮಾತ್ರ ನಿಜ.

1966ರಲ್ಲಿ ಮನೋವಿಜ್ಞಾನಿ ಜಾಕ್ ಬ್ರೆಹಮ್ ಅವರು ಇದರ ಕಾರಣವನ್ನು ವಿವರಿಸುವ ಒಂದು ಪುಸ್ತಕವನ್ನು ರಚಿಸಿದರು. ಅವರ “ರಿಯಾಕ್ಟನ್ಸ್ ಸಿದ್ಧಾಂತ” ದ (Reactance Theory) ಪ್ರಕಾರ, ನಮ್ಮಿಂದ ಯಾವುದಾದರೂ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ ಎನ್ನುವ ಭಾವನೆ ನಮಗೆ ಬಂದಾಗ, ನಾವು ಅದನ್ನು ಕೇವಲ ಅಸಮಾಧಾನದಿಂದ ಮಾತ್ರ ನೋಡುವುದಿಲ್ಲ. ಬದಲಾಗಿ, ನಿಷೇಧಿಸಲ್ಪಟ್ಟಿರುವ ಆ ವಿಷಯವೇ ನಮಗೆ ಇನ್ನಷ್ಟು ಆಕರ್ಷಕವಾಗಿ ತೋರುತ್ತದೆ, ಮತ್ತು ಅದು ನಮಗೆ ಎಷ್ಟೇ ಹಾನಿಕಾರಕವಾಗಿದ್ದರೂ ಸಹ ಅದನ್ನು ಪಡೆಯಲು ನಾವು ಹೆಚ್ಚು ಪ್ರಯತ್ನ ಮಾಡುತ್ತೇವೆ.

ಬ್ರೆಹಮ್ ಅವರ ಅಭಿಪ್ರಾಯ ಸರಿಯೆಂದು ತೋರಿಸುವ ಕೆಲವು ಸಂಶೋಧನಾ ಮಾಹಿತಿಗಳೂ ಕಂಡು ಬರುತ್ತವೆ. 1970ರ ದಶಕದಲ್ಲಿ, ಸಂಶೋಧಕರು ವಿಶ್ವವಿದ್ಯಾಲಯದ ಶೌಚಾಲಯವೊಂದರಲ್ಲಿ ಎರಡು ಫಲಕಗಳನ್ನು ಅಳವಡಿಸಿದರು. ಒಂದು ಫಲಕದಲ್ಲಿ ಕಟ್ಟುನಿಟ್ಟಾಗಿ,
“ಯಾವುದೇ ಸಂದರ್ಭದಲ್ಲಿಯೂ ಗೋಡೆಗಳ ಮೇಲೆ ಬರೆಯಕೂಡದು” ಎಂದು ಬರೆಯಲಾಗಿತ್ತು. ಮತ್ತೊಂದು ಫಲಕದಲ್ಲಿ ಅದೇ ವಿಷಯವನ್ನು ಜನರಿಗೆ ಬಹಳ ವಿನಯದಿಂದ ವಿನಂತಿಸಲಾಗಿತ್ತು. ಕೆಲವು ವಾರಗಳ ನಂತರ ಕಂಡುಬಂದದ್ದು ಏನೆಂದರೆ, ಕಟ್ಟುನಿಟ್ಟಿನ ಎಚ್ಚರಿಕೆ ಇದ್ದ ಫಲಕದ ಗೋಡೆಯ ಮೇಲೆ, ವಿನಯಪೂರ್ವಕವಾಗಿ ಕೇಳಿದ ಫಲಕದ ಗೋಡೆಗಿಂತ ಬಹಳ ಹೆಚ್ಚಿನ ಗೀಚಾಟ (graffiti) ಕಂಡುಬಂದಿತ್ತು. ಇದರ ಅರ್ಥ ಏನೆಂದರೆ, ಜನರಿಗೆ ಅವರ ಸ್ವಾತಂತ್ರ್ಯವನ್ನು ಬಲವಂತವಾಗಿ ನಿರ್ಬಂಧಿಸಲಾಗುತ್ತಿದೆ ಎಂಬ ಭಾವನೆ ಉಂಟಾದಾಗ, ಅವರು ಅದನ್ನು ವಿರೋಧಿಸುವ ಅಥವಾ ಆ ನಿಷೇಧಿತ ಕಾರ್ಯವನ್ನು ಮತ್ತೆ ಮತ್ತೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಆದ್ದರಿಂದಲೇ, ನೀವು ಒಂದು ಪುಸ್ತಕವನ್ನು ನಿಷೇಧಿಸಿದರೆ, ಜನರು ಅದನ್ನು ಇನ್ನಷ್ಟು ಓದಲು ಬಯಸುತ್ತಾರೆ. ಯಾರಾದರೂ ನಿಮಗೆ ಹೇಳದಿರುವ ಒಂದು ರಹಸ್ಯವನ್ನು ತಿಳಿದುಕೊಳ್ಳಬೇಕೆಂಬ ಆಸೆ ಏಕೆ ನಿಮ್ಮೊಳಗೆ ಹೆಚ್ಚಾಗಿರುತ್ತದೆ ಎಂಬುದಕ್ಕೂ ಇದೇ ಕಾರಣ.

ಆದ್ದರಿಂದಲೇ, ಜೀವನದಲ್ಲಿ ಅತ್ಯಂತ ಚತುರರಾದ ಪ್ರಭಾವಶಾಲಿಗಳು ಅಥವಾ ಕುತಂತ್ರಿಗಳು ನಿಮಗೆ ನೇರವಾಗಿ ಏನನ್ನಾದರೂ ಮಾಡಲು ಹೇಳುವುದಿಲ್ಲ. ಬದಲಾಗಿ, ಅವರು, “ನೀನು ಅಷ್ಟು ಬುದ್ಧಿವಂತನಲ್ಲ,”
“ನೀನು ಅಷ್ಟು ಒಳ್ಳೆಯವನಲ್ಲ,” ಅಥವಾ
“ನೀನು ಇದನ್ನು ಮಾಡಲು ಸಾಕಷ್ಟು ಬಲಶಾಲಿಯಲ್ಲ”
ಎಂದೆಲ್ಲ ಹೇಳಿ ನಿಮ್ಮ ಆಸಕ್ತಿಯನ್ನು ಕೆರಳಿಸುತ್ತಾರೆ.
ಇಂತಹ ಮಾತುಗಳು ನಿಮ್ಮೊಳಗೆ ವಿರೋಧದ ಮನೋಭಾವವನ್ನು ಹುಟ್ಟುಹಾಕಿ, ಅದನ್ನೇ ಸಾಧಿಸಬೇಕೆಂಬ ಆಸೆಯನ್ನು ಹೆಚ್ಚಿಸುತ್ತವೆ. ಇದನ್ನೇ ವಿರುದ್ಧ ಮನೋವಿಜ್ಞಾನ (Reverse Psychology) ಎಂದು ಕರೆಯುತ್ತಾರೆ. ನಿಮಗೆ ಇದರ ಬಗ್ಗೆ ತಿಳಿದಿದ್ದರೂ ಸಹ, ಈ ತಂತ್ರವು ನಿಜವಾಗಿಯೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.