ಮುದಿತ ಮನ : ಬೌದ್ಧ ತತ್ವ

ಬೌದ್ಧ ಧರ್ಮದ ಪ್ರಕಾರ, ನಾವು ಇತರ ಎಲ್ಲರೊಂದಿಗೂ, ವಿಶಾಲ ಅರ್ಥದಲ್ಲಿ ಎಲ್ಲ ಜೀವಿಗಳೊಂದಿಗೂ, ನಮ್ಮ ಸಂಬಂಧಗಳಲ್ಲಿ ಮುದಿತವನ್ನು ಇನ್ನಷ್ಟು ಮತ್ತಷ್ಟು ಬೆಳೆಸಿಕೊಳ್ಳಬೇಕು. ಇದನ್ನು ಹೇಗೆ ಅಭ್ಯಾಸ ಮಾಡಬೇಕು ಎನ್ನುವುದಕ್ಕೆ ಬೌದ್ಧ ತತ್ತ್ವಜ್ಞಾನಿ ಬುದ್ಧಘೋಷ ಒಂದು ಸುಂದರವಾದ ವಿಧಾನವನ್ನು ಸೂಚಿಸಿದ್ದಾನೆ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಬೌದ್ಧ ತತ್ತ್ವಶಾಸ್ತ್ರದಲ್ಲಿ, ಸಂತೋಷದಿಂದ ಬದುಕಲು ಮತ್ತು ಜ್ಞಾನೋದಯವನ್ನು (Enlightenment) ತಲುಪಲು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕಾದ ನಾಲ್ಕು ಪ್ರಮುಖ ಮನೋಸ್ಥಿತಿಗಳಿವೆ. ಅವುಗಳಲ್ಲಿ ಮುದಿತ (Mudita) ಎನ್ನುವುದು ಕಷ್ಟಕರವಾದದ್ದಾದರೂ, ಅತ್ಯಂತ ಮಹತ್ವದ್ದಾಗಿದೆ. ಮುದಿತ ಎಂದರೆ, ಇನ್ನೊಬ್ಬರ ಸಂತೋಷದಲ್ಲೇ ತಮ್ಮ ಸಂತೋಷವನ್ನು ಕಂಡುಕೊಳ್ಳುವುದು. ಯಾರಿಗಾದರೂ ಒಳ್ಳೆಯದು ಸಂಭವಿಸಿದಾಗ, ಅಸೂಯೆ ಅಥವಾ ಹೋಲಿಕೆಯ ಭಾವನೆಗೆ ಒಳಗಾಗದೆ, ಅವರ ಸಂತೋಷವನ್ನು ತಮ್ಮದೇ ಸಂತೋಷವೆಂಬಂತೆ ಅನುಭವಿಸುವುದು.

ಮಕ್ಕಳು ಪಕ್ಕದ ಕೊಠಡಿಯಲ್ಲಿ ನಗುತ್ತಾ ಆಟವಾಡುತ್ತಿರುವುದನ್ನು ಕೇಳಿ, ಆ ನಗುವಿನಲ್ಲೇ ತಾವೂ ಮಂದಹಾಸ ಬೀರುವ ತಂದೆ-ತಾಯಿಯ ಮನೋಭಾವವೇ ಮುದಿತ. ನಿಮ್ಮ ಸಹೋದ್ಯೋಗಿಗೆ ಬಡ್ತಿ ಸಿಕ್ಕಾಗ, ಅದಕ್ಕಾಗಿ ಹೃದಯಪೂರ್ವಕವಾಗಿ ಸಂತೋಷಪಟ್ಟು ಸಂಭ್ರಮಿಸುವುದು ಮುದಿತ.
ನಿಮ್ಮ ಅತ್ಯಂತ ಆತ್ಮೀಯ ಸ್ನೇಹಿತ ಅಥವಾ ಸ್ನೇಹಿತೆ ತಮ್ಮ ನಿಶ್ಚಿತಾರ್ಥದ ಸುದ್ದಿಯನ್ನು ಹೇಳಿದಾಗ, ಅವರ ಸಂತೋಷದಲ್ಲಿ ನೀವೂ ನಗುತ್ತಾ, ಹರ್ಷದಿಂದ ಕುಣಿಯುವುದು ಮುದಿತ. ಸಂಕ್ಷಿಪ್ತವಾಗಿ ಹೇಳುವುದಾದರೆ, ಮುದಿತ ಎಂದರೆ ಇನ್ನೊಬ್ಬರ ಸಂತೋಷವನ್ನು ಕಂಡು ನಮ್ಮ ಹೃದಯವೂ ಸಂತೋಷದಿಂದ ಅರಳುವ, ಪರಮಾನಂದವನ್ನು ಅನುಭವಿಸುವ, ಆನಂದಮಯ ಸಹಾನುಭೂತಿ.

ಬೌದ್ಧ ಧರ್ಮದ ಪ್ರಕಾರ, ನಾವು ಇತರ ಎಲ್ಲರೊಂದಿಗೂ, ವಿಶಾಲ ಅರ್ಥದಲ್ಲಿ ಎಲ್ಲ ಜೀವಿಗಳೊಂದಿಗೂ, ನಮ್ಮ ಸಂಬಂಧಗಳಲ್ಲಿ ಮುದಿತವನ್ನು ಇನ್ನಷ್ಟು ಮತ್ತಷ್ಟು ಬೆಳೆಸಿಕೊಳ್ಳಬೇಕು. ಇದನ್ನು ಹೇಗೆ ಅಭ್ಯಾಸ ಮಾಡಬೇಕು ಎನ್ನುವುದಕ್ಕೆ ಬೌದ್ಧ ತತ್ತ್ವಜ್ಞಾನಿ ಬುದ್ಧಘೋಷ ಒಂದು ಸುಂದರವಾದ ವಿಧಾನವನ್ನು ಸೂಚಿಸಿದ್ದಾನೆ.

ಅವನ ಪ್ರಕಾರ : ಮೊದಲು ನೀವು ಅತ್ಯಂತ ಪ್ರೀತಿಸುವ ವ್ಯಕ್ತಿಯಿಂದ ಆರಂಭಿಸಬೇಡಿ, ಏಕೆಂದರೆ ಅದು ತುಂಬಾ ಸುಲಭ. ನೀವು ಅಸಮಾಧಾನ ಅಥವಾ ದ್ವೇಷ ಹೊಂದಿರುವ ವ್ಯಕ್ತಿಯಿಂದಲೂ ಆರಂಭಿಸಬೇಡಿ, ಏಕೆಂದರೆ ಅದು ತುಂಬಾ ಕಷ್ಟಕರ. ಬದಲಾಗಿ, ಯಾವಾಗಲೂ ಉಲ್ಲಾಸದಿಂದಿರುವ, ಆಶಾವಾದಿ ಮನೋಭಾವದ, ಜೀವನವನ್ನು “ಅರ್ಧ ತುಂಬಿದ ಲೋಟ”ದ ದೃಷ್ಟಿಯಿಂದ ನೋಡುವ ವ್ಯಕ್ತಿಯನ್ನು ಆರಿಸಿಕೊಳ್ಳಿ. ಅಂತಹ ವ್ಯಕ್ತಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ. ಅವರ ಸಂತೋಷದಲ್ಲಿ ಹೃದಯಪೂರ್ವಕವಾಗಿ ಪಾಲ್ಗೊಳ್ಳಿ. ಕ್ರಮೇಣ, ಅವರ ಸಂತೋಷವನ್ನು ನಿಮ್ಮದೇ ಸಂತೋಷದಂತೆ ಅನುಭವಿಸುವ ಮನೋಭಾವ ನಿಮ್ಮೊಳಗೂ ಬೆಳೆಯಲು ಆರಂಭವಾಗುತ್ತದೆ. ಅದೇ ಮುದಿತದ ಅಭ್ಯಾಸ. ಅವರ ಉಲ್ಲಾಸ ನಿಮ್ಮ ಮೇಲೆ ಉಕ್ಕಿ ಹರಿಯಲು ಅವಕಾಶ ಮಾಡಿಕೊಡಿ, ಏಕೆಂದರೆ ಸಂತೋಷವು ಸಾಂಕ್ರಾಮಿಕವಾಗಿದೆ. ಅವರ ಸಹಜ ನಗು, ಅವರ ಹರ್ಷಭರಿತ ಮನಸ್ಸು ಮತ್ತು ಕೃತಜ್ಞತೆಯ ಭಾವನೆ ನಿಮ್ಮೊಳಗೆ ಪ್ರವೇಶಿಸಲು ಅವಕಾಶ ನೀಡಿ. ಆಗ ನಿಧಾನವಾಗಿ ನೀವೂ ಅವರಂತೆಯೇ ಸಂತೋಷಭರಿತ ಆಶಾವಾದಿಯಾಗುತ್ತೀರಿ.

ಅದಾದ ನಂತರ, ನಿಮಗೆ ವಿಶೇಷವಾದ ಪ್ರೀತಿ ಅಥವಾ ದ್ವೇಷವಿಲ್ಲದ ತಟಸ್ಥ ವ್ಯಕ್ತಿಯ ಕಡೆಗೆ ನಿಮ್ಮ ಮುದಿತದ ಅಭ್ಯಾಸವನ್ನು ವಿಸ್ತರಿಸಿ. ನಂತರ, ನಿಮಗೆ ಅಸಮಾಧಾನ ಅಥವಾ ದ್ವೇಷವಿರುವ ವ್ಯಕ್ತಿಯ ಕಡೆಗೂ ಅದೇ ಮನೋಭಾವವನ್ನು ಬೆಳೆಸಲು ಪ್ರಯತ್ನಿಸಿ. ಕೊನೆಗೆ, ನಿಮಗೆ ಇಷ್ಟವಿಲ್ಲದ ವ್ಯಕ್ತಿಯ ಸಂತೋಷದಲ್ಲಿಯೂ ನಿಜವಾದ ಸಂತೋಷವನ್ನು ಅನುಭವಿಸುವ ಮಟ್ಟಕ್ಕೆ ನೀವು ತಲುಪುತ್ತೀರಿ.

ಮುದಿತ ಒಂದು ಮಹಾನ್ ಅನುಗ್ರಹ. ಏಕೆಂದರೆ ಅದು ನಮ್ಮ ಸ್ವಂತ ಜೀವನದ ಸಂತೋಷವನ್ನು ಮಾತ್ರವಲ್ಲ, ಇತರರ ಜೀವನದಲ್ಲಿರುವ ಸಂತೋಷವನ್ನೂ ನಮ್ಮದೇ ಸಂತೋಷವಾಗಿ ಅನುಭವಿಸುವ ಸಾಮರ್ಥ್ಯವನ್ನು ನೀಡುತ್ತದೆ. ಹೀಗಾಗಿ, ನಮ್ಮ ವೈಯಕ್ತಿಕ ಜೀವನದ ಆನಂದವನ್ನು ಮಾತ್ರವಲ್ಲದೆ, ಈ ಜಗತ್ತಿನ ಎಲ್ಲೆಡೆ ಇರುವ ಎಲ್ಲ ಜೀವಿಗಳ ಸಂತೋಷದಲ್ಲಿಯೂ ಪಾಲುಗೊಂಡು, ಅದನ್ನು ಅನುಭವಿಸುವ ಅವಕಾಶವನ್ನು ಮುದಿತ ನಮಗೆ ನೀಡುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.