ಮಾತಾಡುತ್ತಲೇ ದಣಿಸುವ ತಂತ್ರ

ನೀವು ಏನೇ ಹೇಳಿದರೂ ಅವರು ಮತ್ತೆ ಮತ್ತೆ, “ಅದಕ್ಕೆ ಪುರಾವೆ ಎಲ್ಲಿದೆ?” ಎಂದು ಕೇಳುತ್ತಲೇ ಇರುತ್ತಾರೆ. ನೀವು ಕೊನೆಗೆ ಬೇಸತ್ತು ಮಾತುಕತೆಯನ್ನು ಬಿಟ್ಟುಕೊಡುವವರೆಗೆ… ।  ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

“Sealion” ಎಂದರೆ, ಯಾರಾದರೂ ನಡೆಸುತ್ತಿರುವ ಸಂಭಾಷಣೆಯ ಮಧ್ಯೆ ಪ್ರವೇಶಿಸಿ, ಅವರು ಹೇಳುವ ಪ್ರತಿಯೊಂದು ಮಾತಿಗೂ ವ್ಯಾಖ್ಯಾನ, ಸಮರ್ಥನೆ ಅಥವಾ ಪುರಾವೆ ನೀಡುವಂತೆ ಒತ್ತಾಯಿಸುವುದು.
ಆದರೆ ಇದನ್ನು ಪ್ರಾಮಾಣಿಕ ಉದ್ದೇಶದಿಂದ ಮಾಡಲಾಗುವುದಿಲ್ಲ. ಬದಲಾಗಿ, ಎದುರಿನ ವ್ಯಕ್ತಿಯನ್ನು ಮಾನಸಿಕವಾಗಿ ದಣಿಸಿ, ಕೊನೆಗೆ ಅವರು ಮಾತುಕತೆಯನ್ನೇ ಬಿಟ್ಟುಬಿಡುವಂತೆ ಮಾಡಲು ಇದನ್ನು ಒಂದು ಅಸ್ತ್ರದಂತೆ ಬಳಸಲಾಗುತ್ತದೆ. ಅವರು ಇದನ್ನು ಬಹಳ ಸೌಜನ್ಯದಿಂದ ಮಾಡುತ್ತಿರುವಂತೆ ತೋರಿಸಬಹುದು. “ನನಗೆ ನಿಜವಾಗಿಯೂ ಕುತೂಹಲವಿದೆ” ಎಂದು ಹೇಳಬಹುದು. ಆದರೆ ನಿಜವಾದ ಉದ್ದೇಶ ನಿಮ್ಮನ್ನು ನಿಧಾನವಾಗಿ ದಣಿಸುವುದು. ನೀವು ಏನೇ ಹೇಳಿದರೂ ಅವರು ಮತ್ತೆ ಮತ್ತೆ, “ಅದಕ್ಕೆ ಪುರಾವೆ ಎಲ್ಲಿದೆ?” ಎಂದು ಕೇಳುತ್ತಲೇ ಇರುತ್ತಾರೆ. ನೀವು ಕೊನೆಗೆ ಬೇಸತ್ತು ಮಾತುಕತೆಯನ್ನು ಬಿಟ್ಟುಕೊಡುವವರೆಗೆ.

ಈ ಪರಿಕಲ್ಪನೆಯ ಹೆಸರು 2014ರಲ್ಲಿ ಡೇವಿಡ್ ಮಾಲ್ಕಿ (David Malki) ರಚಿಸಿದ ಒಂದು ವೆಬ್‌ಕಾಮಿಕ್‌ನಿಂದ ಪ್ರಸಿದ್ಧಿಯಾಯಿತು. ಆದರೆ ಈ ತಂತ್ರ ಮಾತ್ರ ಬಹಳ ಪುರಾತನವಾದದ್ದು. ಇದರ ಉದಾಹರಣೆ ನಮಗೆ ಸುಮಾರು 2,500 ವರ್ಷಗಳ ಹಿಂದೆ ಅರಿಸ್ಟಾಟಲ್‌ನಲ್ಲಿಯೇ ಕಾಣುತ್ತದೆ. ತಮ್ಮ “Sophistic Refutations” ಎಂಬ ಕೃತಿಯಲ್ಲಿ ಅರಿಸ್ಟಾಟಲ್, ಸೋಫಿಸ್ಟ್‌ಗಳು ಬಳಸುತ್ತಿದ್ದ ವಿವಿಧ ತಂತ್ರಗಳನ್ನು ವಿವರಿಸುತ್ತಾರೆ.

ಅವುಗಳ ಉದ್ದೇಶ, ನೀವು ನಿಜವಾಗಿಯೂ ವಿಷಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಂತೆ ತೋರಿಸುತ್ತಾ, ವಾಸ್ತವದಲ್ಲಿ ವಾದದಲ್ಲಿ ಗೆಲ್ಲುವುದೇ ಆಗಿರುತ್ತದೆ. ಅಂತಹ ಒಂದು ತಂತ್ರವೆಂದರೆ ಯಾರಾದರೂ ಅಂತ್ಯವಿಲ್ಲದ ರೀತಿಯಲ್ಲಿ ವ್ಯಾಖ್ಯಾನಗಳನ್ನು ಕೇಳುವುದು. ನೀವು ಯಾವುದೋ ವಿಷಯವನ್ನು ಬಹಳ ಸ್ಪಷ್ಟವಾಗಿ ಹೇಳುತ್ತೀರಿ.

ಅವರು ಕೇಳುತ್ತಾರೆ:
“ನೀವು ಬಳಸಿದ ಈ ಪದದ ಅರ್ಥವನ್ನು ವ್ಯಾಖ್ಯಾನಿಸಿ.”
ನೀವು ಅದನ್ನು ವ್ಯಾಖ್ಯಾನಿಸುತ್ತೀರಿ.

ಆಗ ಅವರು ನಿಮ್ಮ ವ್ಯಾಖ್ಯಾನದಲ್ಲಿರುವ ಮತ್ತೊಂದು ಪದವನ್ನು ಹಿಡಿದುಕೊಂಡು:
“ಆ ಪದದ ಅರ್ಥವೇನು? ಅದನ್ನೂ ವ್ಯಾಖ್ಯಾನಿಸಿ.”
ಎಂದು ಕೇಳುತ್ತಾರೆ.
ನೀವು ಅದನ್ನೂ ವ್ಯಾಖ್ಯಾನಿಸುತ್ತೀರಿ.

ಮತ್ತೆ ನಿಮ್ಮ ಹೊಸ ವ್ಯಾಖ್ಯಾನದಲ್ಲಿರುವ ಪದಗಳಿಗೂ ವ್ಯಾಖ್ಯಾನ ಕೇಳುತ್ತಾರೆ.
ಹೀಗೆ ಪ್ರಶ್ನೆಗಳು ಒಂದರೊಳಗೆ ಮತ್ತೊಂದು ಬರುತ್ತಲೇ ಇರುತ್ತವೆ.

ಕೊನೆಗೆ ನೀವು ಏನು ಹೇಳಿದರೂ ಅದು ಸಾಕಾಗುವುದಿಲ್ಲ; ಈ ಸೋಫಿಸ್ಟ್, “ನಿನಗೆ ನಿಜವಾಗಿ ಏನೂ ಗೊತ್ತಿಲ್ಲ” ಎಂದು ಘೋಷಿಸುವವರೆಗೆ ಈ ಪ್ರಕ್ರಿಯೆ ಮುಂದುವರಿಯುತ್ತದೆ.

ಅರಿಸ್ಟಾಟಲ್ ಹೇಳಿದ್ದು ಏನೆಂದರೆ, ಇಂತಹ ಪ್ರತಿಯೊಂದು ಪ್ರಶ್ನೆಗೂ ನಾವು ಉತ್ತರಿಸಬೇಕೆಂಬ ಬಾಧ್ಯತೆ ಇಲ್ಲ. ವಿಶೇಷವಾಗಿ, ಪ್ರಶ್ನೆಗಳನ್ನು ಪ್ರಾಮಾಣಿಕ ಉದ್ದೇಶದಿಂದ (good faith) ಕೇಳಲಾಗದಿದ್ದಾಗ.
ಏಕೆಂದರೆ ಕೆಲವು ಪ್ರಶ್ನೆಗಳು ನಿಜವಾಗಿಯೂ ಮಾಹಿತಿ ಪಡೆಯಲು ಕೇಳುವ ಪ್ರಶ್ನೆಗಳಲ್ಲ. ಅವು ಕುಶಲತೆಯಿಂದ ನಡೆಸುವ ಒಂದು ರೀತಿಯ ಮಾನಸಿಕ ಆಟ ಅಥವಾ ನಿಮ್ಮನ್ನು ಸೋಲಿಸಲು ಮಾಡಿರುವ ಕುಟಿಲೋಪಾಯ (manipulation) ಆಗಿರಬಹುದು. ಆದ್ದರಿಂದ, ಯಾವಾಗ ವಾದಿಸಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಎಷ್ಟು ಮುಖ್ಯವೋ, ಯಾವಾಗ ಪ್ರಶ್ನೆಯನ್ನು ತಪ್ಪಿಸಬೇಕು ಅಥವಾ ಉತ್ತರಿಸದೆ ಸುಮ್ಮನೇ ಇರಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಕೂಡ ಅಷ್ಟೇ ಮುಖ್ಯ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.