ವಿಂಧ್ಯಾಟವಿಯಲ್ಲಿ ಕಾಣಭೂತಿಯನ್ನು ಭೇಟಿ ಮಾಡಿ ಮಾತನಾಡಿದಾಗ ವರರುಚಿಗೆ ತನ್ನ ಪೂರ್ವಜನ್ಮದ ಸ್ಮರಣೆ ಉಂಟಾಯಿತು. ಅವನು ತಾನು ಪುಷ್ಪದಂತನೆಂದೂ, ಕಾಣಭೂತಿಗೆ ಕಥೆ ಹೇಳುವುದರಿಂದ ತನಗೆ ಶಾಪವಿಮೋಚನೆಯಾಗುವುದೆಂದೂ ಅವನು ಅರಿತನು. ಅದೇ ವೇಳೆಗೆ ಕಾಣಭೂತಿಯು ವರರುಚಿಗೆ ಅವನ ಜೀವನ ವೃತ್ತಾಂತವನ್ನು ಹೇಳುವಂತೆ ಕೇಳಿಕೊಂಡನು. ಅದರಂತೆ ವರರುಚಿಯು ತನ್ನ ಜೀವನಗಾಥೆಯನ್ನು ಹೇಳಲಾರಂಭಿಸಿದನು.
ಕೌಶಾಂಬಿಯಲ್ಲಿ ಸೋಮದತ್ತನೆಂಬ ಬ್ರಾಹ್ಮಣನಿದ್ದನು. ಅವನಿಗೆ ಅಗ್ನಿಶಿಖ ಎಂಬ ಹೆಸರೂ ಇತ್ತು. ಅವನ ಹೆಂಡತಿ ವಸುದತ್ತಾ, ಒಂದೊಮ್ಮೆ ಮುನಿಕುಮಾರಿಯಾಗಿದ್ದು, ಶಾಪದಿಂದ ಆಕೆ ಬ್ರಾಹ್ಮಣಳಾಗಿ ಹುಟ್ಟಿದ್ದಳು. ಅವರ ಮಗನೇ ವರರುಚಿ. ವರರುಚಿ ಚಿಕ್ಕವನಿರುವಾಗಲೇ ತಂದೆಯನ್ನು ಕಳೆದುಕೊಂಡನು. ತಾಯಿ ಆತನನ್ನು ಬಹಳ ಕಷ್ಟದಿಂದ ಸಾಕಿ ಬೆಳೆಸಿದಳು. ಆದರೆ ಸೂಕ್ತವಾದ ವಿದ್ಯೆ ಕೊಡಿಸಲು ಅವಳಿಗೆ ಸಾಧ್ಯವಾಗಲಿಲ್ಲ.
ಹೀಗಿರುವಾಗ ಒಮ್ಮೆ ವೇತಸಪುರದ ನಿವಾಸಿಗಳಾದ ವ್ಯಾಡಿ ಮತ್ತು ಇಂದ್ರದತ್ತರು ಪ್ರಯಾಣ ಮಾಡುತ್ತಾ ರಾತ್ರಿ ತಂಗುವ ವ್ಯವಸ್ಥೆಗಾಗಿ ವಸುದತ್ತೆಯಲ್ಲಿ ವಿನಂತಿ ಮಾಡಿದರು. ಆಕೆ ಸಂತೋಷದಿಂದ ಒಪ್ಪಿ ಅವರನ್ನು ಉಪಚರಿಸಿದಳು. ಅದೇ ವೇಳೆಗೆ ಮನೆಯಲ್ಲಿದ್ದ, ವ್ಯಾಡಿ, ಇಂದ್ರದತ್ತರಿಗಿಂತ ವಯಸ್ಸಿನಲ್ಲಿ ಸ್ವಲ್ಪ ಸಣ್ಣವನಾದ ವರರುಚಿಯು ಹೊರಗೆ ಹೊಡರಡಲು ಅಣಿಯಾಗುತ್ತಿದ್ದನು. ಸಮೀಪದಲ್ಲೇ ಒಂದು ನಾಟ್ಯ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಆತನ ತಾಯಿ ಅದನ್ನು ನೋಡಲು ಬಯಸಿದ್ದಳು. ಆದರೆ ವಿಧವೆಯಾದ ತಾನು ಅಲ್ಲಿಗೆ ಹೋಗುವಂತಿಲ್ಲ ಎಂಬ ಕೊರಗು ಅವಳನ್ನು ಬಾಧಿಸುತ್ತಿತ್ತು. ವರರುಚಿಯು ತಾನು ನಾಟ್ಯವನ್ನು ನೊಡಿಬಂದು. ಯಥಾವತ್ತಾಗಿ ಪುನರಭಿನಯ ಮಾಡಿ ತೋರಿಸುವೆನೆಂದು ತಾಯಿಯನ್ನು ಸಮಾಧಾನ ಪಡಿಸುತ್ತಿದ್ದನು.
ಈ ಸಂಭಾಷಣೆಯನ್ನು ಕೇಳಿ ವ್ಯಾಡಿ, ಇಂದ್ರದತ್ತರು ಅಚ್ಚರಿಯಿಂದ ಪ್ರಶ್ನಿಸಿದರು. ಆಗ ವಸುದತ್ತೆಯು ತನ್ನ ಮಗ ಯಾವುದೇ ಸಂಗತಿಯನ್ನು ಒಂದು ಬಾರಿ ಕೇಳಿದರೂ ಮನನ ಮಾಡಿಕೊಂಡು ಪುನರ್ ನಿರೂಪಿಸುವ ಸಾಮರ್ಥ್ಯ ಹೊಂದಿದ್ದಾನೆ ಎಂದು ಹೇಳಿದಳು. ಆ ಇಬ್ಬರು ಗೆಳೆಯರು ಈ ಹುಡುಗನನ್ನು ಪರೀಕ್ಷಿಸುವುದಕ್ಕಾಗಿ ಪ್ರತಿಶಾಖ್ಯವನ್ನು ಪಠಿಸಿದರು. ವರರುಚಿಯು ನಂತರದಲ್ಲಿ ಅದನ್ನು ಯಥಾವತ್ತಾಗಿ ಹೇಳಿದನು.
ವ್ಯಾಡಿ ಮತ್ತು ಇಂದ್ರದತ್ತರ ಸಂತೋಷಕ್ಕೆ ಪಾರವೇ ಇಲ್ಲವಾಯಿತು. ಅವರು ವಸುದತ್ತೆಗೆ, “ಅಮ್ಮಾ, ಈ ಹುಡುಗ ಏಕಶ್ರುತಧರನಾಗಿದ್ದಾನೆ. ಒಂದು ಬಾರಿ ಕೇಳಿ ಧಾರಣೆ ಮಾಡುವ ಸಾಮರ್ಥ್ಯ ಇವನಲ್ಲಿದೆ. ನಾವು ಪ್ರಯಾಣ ಬೆಳೆಸಿದ್ದೇ ವರ್ಷೋಪಾಧ್ಯಾಯರಿಗಾಗಿ ಇವನನ್ನು ಹುಡುಕುವುದಕ್ಕಾಗಿ ಎಂದು ಹೇಳಿದರು.
ಅವರ ಮಾತುಗಳನ್ನು ಕೇಳಿ ವಸುದತ್ತೆಗೆ ಅಚ್ಚರಿಯಾಯಿತು. ತನ್ನ ಮಗನನ್ನು ಹುಡುಕಿಕೊಂಡು ಹೊರಟ ಕಾರಣವೇನು? ಈ ವರ್ಷೋಪಾಧ್ಯಾಯರೆಂದರೆ ಯಾರು? ಎಂದು ಅವಳು ಪ್ರಶ್ನಿಸಿದಳು.
ಆಗ ವ್ಯಾಡಿ, ಇಂದ್ರದತ್ತರು ವರ್ಷೋಪಾಧ್ಯಾಯರ ಕಥೆಯನ್ನು ಹೇಳಲು ಆರಂಭಿಸಿದರು.
(ಕಥಾ ಸರಿತ್ಸಾಗರ, ಹಲವು ಕಥಾಧಾರೆಗಳು ಬಂದು ಸೇರುವ ಸಮುದ್ರ. ಆ ಕಥೆಗಳೆಲ್ಲವೂ ಒಂದಕ್ಕೊಂದು ಹೆಣೆದುಕೊಂಡಿರುವಂಥದ್ದು. ಯಾವುದಾದರೂ ಒಂದು ಕಥೆಯ ಒಂದು ಎಳೆ ಬಿಟ್ಟುಹೋದರೂ ಇಡೀ ಕಥೆಯ ಸೂತ್ರವೇ ತಪ್ಪಿದಂತಾಗುವುದು. ಪ್ರತ್ಯೇಕವಾಗಿ ಅವು ನಮ್ಮನ್ನು ಓದಿಸಿಕೊಂಡುಹೋದರೂ ಒಟ್ಟು ಓದಿನ ಸಮಗ್ರ ಅನುಭವದಿಂದ ನಾವು ವಂಚಿತರಾಗುವೆವು. ಆದ್ದರಿಂದ, ಈ ಕಥೆಗಳ ಪ್ರತಿ ಕಂತನ್ನೂ ಓದಲು ಯತ್ನಿಸಿ. ಹಿಂದಿನ ಕಂತುಗಳ ಕೊಂಡಿ ಇಲ್ಲಿದೆ: