ಯಾವಾಗ ಏನು ಮಾಡಿದರೆ ಏನಾಗುತ್ತದೆ ಅನ್ನುವ ಪ್ರಜ್ಞೆ ಮುಖ್ಯ

ಯಾರದೋ ಮಾತು ನಿಮಗೆ ಸರಿಬರಲಿಲ್ಲ ಅಂದರೆ ನೀವು ತತ್ ಕ್ಷಣ ಪ್ರತಿಕ್ರಿಯಿಸಿಬಿಡುತ್ತೀರಿ. ಸ್ವಲ್ಪ ಸಮಯದ ಬಳಿಕ ನಿಮಗೆ ನಾನು ಯಾಕಾದರೂ ಹಾಗೆ ಮಾತಾಡಿದೆನೋ ಅನ್ನುವ ಯೋಚನೆ ಶುರುವಾಗುತ್ತದೆ. ನಾನು ಹಾಗೆ ಉತ್ತರಿಸಬಾರದಿತ್ತು ಅಂದುಕೊಳ್ಳತೊಡಗುತ್ತೀರಿ. ಅದರ ಬದಲು, ಪ್ರತಿಕ್ರಿಯಿಸುವ ಮೊದಲೇ ನೀವು ಸ್ವಲ್ಪ ತಾಳ್ಮೆ ತೆಗೆದುಕೊಂಡಿದ್ದರೆ ಈ ಪ್ರಮೇಯವೇ ಇರುತ್ತಿರಲಿಲ್ಲ ಅಲ್ಲವೆ? ಯಾಕೆ ಹಾಗಾಯಿತು? ~ ವಿದ್ಯಾಧರ

ಯಾವ ಸಂದರ್ಭದಲ್ಲಿ ಹೇಗೆ ಇರಬೇಕು ಎಂದು ಗೊತ್ತಾದ ಕ್ಷಣದಿಂದಲೇ ನಿಮ್ಮ ಸಮಸ್ಯೆಗಳು ಬಗೆಹರಿಯುತ್ತವೆ. ಕೊಡುವವರು ಕೊಡುತ್ತಾ ಇರುತ್ತಾರೆ. ಅದನ್ನು ತೆಗೆದುಕೊಳ್ಳುವುದು ಬಿಡುವುದು ನಮ್ಮ ಕೈಲಿದೆ. ಕಷ್ಟ, ಸುಖ, ದುಃಖ, ಬೈಗುಳ, ಹೊಗಳಿಕೆ, ಯಾವುದನ್ನಾದರೂ ಅಷ್ಟೆ. ನಾವು ತೆಗೆದುಕೊಂಡರೆ ನಮ್ಮದು, ಬಿಟ್ಟರೆ ನಮ್ಮದಲ್ಲ. ಗುರು ಎಲ್ಲರಿಗೂ ಒಂದೇ ರೀತಿಯ ಬೋಧನೆ ನೀಡುತ್ತಾನೆ. ಕೆಲವರು ಮಾತ್ರ ಅದನ್ನು ತೆಗೆದುಕೊಳ್ಳುತ್ತಾರೆ, ಕೆಲವು ಗಮನವನ್ನೇ ಹರಿಸದೆ ಅದರಿಂದ ವಂಚಿತಾಗುತ್ತಾರೆ.

ಹಾಗೆಯೇ; ಯಾವ ಸಮಯದಲ್ಲಿ ಏನು ಮಾಡಬಾರದು ಅನ್ನುವುದಕ್ಕಿಂತ, ಇಂಥಾ ಸಮಯದಲ್ಲಿ ಇದನ್ನು ಮಾಡಿದರೆ ಹೀಗೇ ಆಗುತ್ತದೆ ಅನ್ನುವುದು ನಮಗೆ ಗೊತ್ತಾಗಬೇಕು. ಅದು ಮುಖ್ಯ. ಹಾಗೆಯೇ ನಾವು ಏನನ್ನೇ ಮಾಡಿದರೂ ಪ್ರಜ್ಞಾಪೂರ್ವಕವಾಗಿ. ಸ್ವಯಂ ಪ್ರಜ್ಞೆಯೇ ಆಗಿ ಮಾಡಬೇಕು. ಆಗ ಮಾತ್ರ ನಮಗೆ ನಮ್ಮ ಸುತ್ತಲಿನವರನ್ನು. ಸುತ್ತಲಿನ ಘಟನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ. ನಾವು ಸರಿಯಾಗಿ ಅರ್ಥ ಮಾಡಿಕೊಂಡರೆ ಮಾತ್ರ ಸರಿಯಾಗಿ ಸ್ಪಂದಿಸಲು ಸಾಧ್ಯ.

ಯಾರದೋ ಮಾತು ನಿಮಗೆ ಸರಿಬರಲಿಲ್ಲ ಅಂದರೆ ನೀವು ತತ್ ಕ್ಷಣ ಪ್ರತಿಕ್ರಿಯಿಸಿಬಿಡುತ್ತೀರಿ. ಸ್ವಲ್ಪ ಸಮಯದ ಬಳಿಕ ನಿಮಗೆ ನಾನು ಯಾಕಾದರೂ ಹಾಗೆ ಮಾತಾಡಿದೆನೋ ಅನ್ನುವ ಯೋಚನೆ ಶುರುವಾಗುತ್ತದೆ. ನಾನು ಹಾಗೆ ಉತ್ತರಿಸಬಾರದಿತ್ತು ಅಂದುಕೊಳ್ಳತೊಡಗುತ್ತೀರಿ. ಅದರ ಬದಲು, ಪ್ರತಿಕ್ರಿಯಿಸುವ ಮೊದಲೇ ನೀವು ಸ್ವಲ್ಪ ತಾಳ್ಮೆ ತೆಗೆದುಕೊಂಡಿದ್ದರೆ ಈ ಪ್ರಮೇಯವೇ ಇರುತ್ತಿರಲಿಲ್ಲ ಅಲ್ಲವೆ? ಯಾಕೆ ಹಾಗಾಯಿತು? ನೀವು ಯೋಚನೆಯನ್ನೇ ಮಾಡದೆ ಯಾಕೆ ಪ್ರತಿಕ್ರಿಯಿಸಿದಿರಿ? ಇದಕ್ಕೆ ಕಾರಣ ನಿಮ್ಮ ಪ್ರತಿಕ್ರಿಯೆಯ ಬಗ್ಗೆ ನಿಮಗೆ ಪ್ರಜ್ಞೆ ಇಲ್ಲದೆ ಇದ್ದುದು. ನೀವು ಪ್ರಜ್ಜೆಯನ್ನು ಹೊಂದಿದ್ದರೆ, ನೀವು ಪ್ರಜ್ಞಾಪೂರ್ವಕವಾಗಿ ಇದ್ದಿದ್ದರೆ, ಹಾಗೆ ಮಾಡುತ್ತಿರಲಿಲ್ಲ. ನೀವು ಏನಾದರೊಂದು ಕ್ರಿಯೆಯನ್ನು ಅಥವಾ ಪ್ರತಿಕ್ರಿಯೆಯನ್ನು ಮಾಡಿ ಅನಂತರದಲ್ಲಿ ಅದರ ಬಗ್ಗೆ ಬೇಸರಪಡುತ್ತೀರಿ ಅಂದರೆ, ನೀವು ಪ್ರಜ್ಞಾಹೀನರಾಗಿ ಆ ಕೆಲಸ ಮಾಡಿದ್ದಿರಿ ಎಂದೇ ಅರ್ಥ.

ಆದ್ದರಿಂದ ಸಣ್ಣ ಸಣ್ಣ ವಿಷಯಗಳಲ್ಲೂ ನಮ್ಮ ಗಮನವನ್ನಿರಿಸಿ ಅವನ್ನು ಸಂಪೂರ್ಣವಾಗಿ. ಪ್ರಜ್ಞಾಪೂರ್ವಕವಾಗಿ ಅನುಭವಿಸಬೇಕು. ಉದಾಹರಣೆಗೆ, ನೀವು ಚಾಪೆಯ ಮೇಲೆ ಕುಳಿತಿದ್ದೀರಿ ಅಂದುಕೊಳ್ಳಿ. ನಿಮಗೆ ಚಾಪೆಯ ಮೇಲ್ಮೈಯ ಅನುಭವ ಆಗಬೇಕು. ನೀವು ಅದನ್ನು ಫೀಲ್ ಮಾಡಬೇಕು. ಪ್ರಜ್ಞಾಪೂರ್ವಕವಾಗಿ ನೀವು ಕುಳಿತಿದ್ದಾಗ ಮಾತ್ರ ಅದು ಸಾಧ್ಯವಾಗುತ್ತದೆ. ಇಲ್ಲವಾದರೆ ನಿಮಗೆ ನಾನು ಚಾಪೆಯ ಮೇಲೆ ಕುಳಿತಿದ್ದೇನೆ ಎಂದು ತಿಳಿದಿರುತ್ತದೆ ಅಷ್ಟೆ. ಪ್ರಜ್ಞಾಪೂರ್ವಕವಾಗಿ ಚಾಪೆಯ ಸ್ಪರ್ಶವನ್ನು ಗಮನಿಸಿದಾಗ ಮಾತ್ರ ನಿಮಗೆ ಚಾಪೆಯ ಮೇಲೆ ಕುಳಿತಿರುವ ಅನುಭವ ದೊರೆಯುತ್ತದೆ. ಹಾಗೆಯೇ ಯಾವುದೇ ಕೆಲಸ ಮಾಡುವಾಗಲೂ ನೀವು ಅದನ್ನು ಗಮನಿಸುತ್ತಾ, ಅನುಭವಿಸುತ್ತಾ ಮಾಡಬೇಕು. ಆಗ ಮಾತ್ರ ನೀವು ಅದನ್ನು ಸಮರ್ಪಕವಾಗಿ ಮಾಡಬಲ್ಲಿರಿ.

 

 

 

 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply

This site uses Akismet to reduce spam. Learn how your comment data is processed.