ಜ್ಞಾನಿಗಳ ಸ್ವಪ್ನ ವಿಚಾರ : ರಮಣಧಾರೆ

RAMANAರಮಣ ಮಹರ್ಷಿಗಳನ್ನು ಕಾಣಲು ಬಂದವರು ವಿವಿಧ ಆಧ್ಯಾತ್ಮಿಕ ವಿಚಾರಗಳನ್ನು, ಪ್ರಶ್ನೆಗಳನ್ನು ಮುಂದಿಟ್ಟು ಸಂವಾದ ನಡೆಸುತ್ತಿದ್ದರು. ಈ ಸಂವಾದಗಳ ಸಂಗ್ರಹ ಪುಸ್ತಕಗಳಾಗಿಯೂ ಪ್ರಕಟವಾಗಿವೆ. 

ಪ್ರಶ್ನೆ:  ಜ್ಞಾನಿಗಳಿಗೆ ಸ್ವಪ್ನ ಉಂಟಾಗುವುದಿಲ್ಲವೆ?
ರಮಣ ಮಹರ್ಷಿಗಳು : ಜ್ಞಾನಿಗೆ ಸ್ವಪ್ನ ಉಂಟಾಗುವುದಿಲ್ಲ. ಮಾತ್ರವಲ್ಲ, ಜಾಗ್ರತ್ತು (ಎಚ್ಚರ), ಸುಷುಪ್ತಿ (ತನಿನಿದ್ರೆ), ಸ್ವಪ್ನ (ಕನಸು) ಇವು ಮೂರೂ ಅವಸ್ಥೆಗಳು ಇಲ್ಲದ ಸ್ಥಿತಿ ಯಾವುದಿದೆಯೋ ಅದೇ ಜ್ಞಾನಿಯ ಯಥಾರ್ಥವಾದ ಸ್ಥಿತಿ.

ಪ್ರಶ್ನೆ: ಜಾಗ್ರದವಸ್ಥೆಯೂ ಸಹ ಸ್ವಪ್ನಾವಸ್ಥೆಗೆ ಸಮಾನವೇ?
ರಮಣ ಮಹರ್ಷಿಗಳು : ಹೌದು. ಅದು ಕೂಡಾ ಸ್ವಪ್ನಾವಸ್ಥೆಗೆ ಸಮಾನವೇ. ಅದು ಕ್ಷಣಿಕ ಸ್ವಪ್ನ; ಿದು ದೀರ್ಘ ಸ್ವಪ್ನ. ಅಷ್ಟೇ ವ್ಯತ್ಯಾಸ.

ಪ್ರಶ್ನೆ : ಹಾಗಾದರೆ ಸುಷುಪ್ತಿಯೂ ಸ್ವಪ್ನವೇ?
ರಮಣ ಮಹರ್ಷಿಗಳು : ಇಲ್ಲ. ಅದು ವಾಸ್ತವವೇ. ತೋರುವಿಕೆಯೇ (ದೃಶ್ಯವೇ) ಅಲ್ಲಿ ಇಲ್ಲದಿರುವಾಗ ಅದನ್ನು ಸ್ವಪ್ನವೆಂದು ಹೇಳುವುದು ಹೇಗೆ? ಆದರೆ ಆ ಸ್ಥಿತಿಯಲ್ಲಿ ಏನೂ ಅರಿವಾಗದೆ ಇರುವುದರಿಂದ ಅಲ್ಲಿ ಅವಿದ್ಯೆ ಇದೆ. ಆದುದರಿಂದ ಅದನ್ನೂ ನಿರಾಕರಿಸಬೇಕಾದ್ದೇ.

ಪ್ರಶ್ನೆ: ಹಾಗಾದರೆ, ಸುಷುಪ್ತಿಗೆ ಕಾರಣ ಬೀಜರೂಪವಾಗಿರುವ ಸ್ವಪ್ನ ಎಂದು ಹೇಳಬಹುದೆ?
ರಮಣ ಮಹರ್ಷಿಗಳು : ಕೆಲವರು ಯಾವುದೋ ಪರಿಭಾಷೆ (ವಿವರಣೆ) ಗೋಸ್ಕರ ಆ ರೀತಿಯಾಗಿ ವಿವರಿಸಬೇಕಾಗಿ ಬಂದು ಹಾಗೆ ಹೇಳಿದ್ದಾರೆಯೇ ಹೊರತು ಬೇರೇನೂ ಇಲ್ಲ. ಕ್ಷಣಿಕ, ದೀರ್ಘ ಇವು ಸ್ವಪ್ನ ಮತ್ತು ಜಾಗೃದವಸ್ಥೆಗಳಿಗೇ. ಆದರೆ ಕೆಲವರು ‘ಇಷ್ಟು ವರ್ಷಗಳು ಬದುಕಿದ್ದೇವೆ, ಈ ಮನೆ, ಈ ಬಾಗಿಲುಗಳೆಲ್ಲವೂ ಸ್ಪಷ್ಟವಾಗಿ ಜಾಣಿಸುತ್ತಿವೆ; ಇದನ್ನು ಸ್ವಪ್ನ ಎಂದರೆ ಹೇಗೆ ಸಂಗತವಾಗುತ್ತದೆ?” ಎಂದು ಅನುಮಾನಿಸಿದರೆ, ನಿದ್ರೆಯಲ್ಲಿ ಸ್ವಪ್ನವೂ ಸಹ ದೀರ್ಘವಾಗಿದ್ದ ಹಾಗೆಯೇ ಕಾಣಿಸುತ್ತದೆ. ಎಚ್ಚರವಾದ ಮೇಲಲ್ಲವೆ ಇವೆಲ್ಲವೂ ಕ್ಷಣಿಕವೆಂದು ಗೊತ್ತಾಗುವುದು? ಅದೇ ರೀತಿ ಒಬ್ಬನಿಗೆ ಜ್ಞಾನೋದಯವಾದಾಗ ಇವೆಲ್ಲವೂ ಕ್ಷಣಿಕವಾಗಿಯೇ ಕಂಡುಬರುತ್ತದೆ. ಆದುದರಿಂದ ‘ಸ್ವಪ್ನಾತ್ಯಂತ ನಿವೃತ್ತಿ’ ಎಂದರೆ ಅದು ಸ್ವಲ್ಪವೂ ಉಳಿಯದೆ ಮತ್ತೆ ಬಾರದಿರುವ ಸ್ಥಿತಿ.

ಪ್ರಶ್ನೆ : ಜ್ಞಾನಿಗಳು ಕರ್ಮವನ್ನು ಮಾಡಿದರೂ ಅವು ಅವರಿಗೆ ಅಂಟುವುದಿಲ್ಲ ಎಂದು ಯೋಗಾವಾಸಿಷ್ಠದಲ್ಲಿ ಹೇಳಲಾಗಿದೆಯಲ್ಲ; ದೃಷ್ಟಿಭೇದದಿಂದ ಹಾಗೆ ತೋರುತ್ತದೆಯೋ ಅಥವಾ ನಿಜವಾಗಿಯೂ ಅವರಿಗೆ ಏನೂ ಅಂಟುವುದಿಲ್ಲವೋ?
ರಮಣ ಮಹರ್ಷಿಗಳು : ನೋಡುವವರ ದೃಷ್ಟಿಯನ್ನು ಅನುಸರಿಸಿ ಹಾಗೆ ಕಂಡುಬರುತ್ತದೆ. ವಾಸ್ತವವಾಗಿ ಆ ಕರ್ಮಗಳು ಅವರನ್ನು ಅಂಟುವುದೇ ಇಲ್ಲ. ಅವರನ್ನು ಬಂಧಿಸುವುದಿಲ್ಲ.

ಪ್ರಶ್ನೆ : ಸ್ವಪ್ನದರ್ಶನಗಳು ಸಾಕ್ಷಾತ್ಕಾರಗಳು ಎಂಬುದಾಗಿ ಹೇಳುತ್ತಾರಲ್ಲ? ಗಣಪತಿ ಮುನಿಗಳಿಗೆ ಭಗವಾನರು ದರ್ಶನವಿತ್ತಿದ್ದು ಸ್ವಪ್ನದಲ್ಲಿ ಅಲ್ಲವೆ?
ರಮಣ ಮಹರ್ಷಿಗಳು : ಜ್ಞಾನಿಗಳ ದೃಷ್ಟಿಯಲ್ಲಿ ಅವೆಲ್ಲವೂ ಸಮಾನ. ಅಂತಹವುಗಳನ್ನು ದಿವ್ಯದರ್ಶನಗಳೆಂದು ಹೇಳುತ್ತಾರೆ.

(ಆಕರ : ರಮಣರ ಸನ್ನಿಧಿಯಲ್ಲಿ | ಮೂಲ: ಸೂರಿ ನಾಗಮ್ಮ, ಕನ್ನಡಕ್ಕೆ: ಡಾ.ಕೆ.ಎ.ನಾರಾಯಣನ್)

Leave a Reply