ಬದುಕು ವೈರುಧ್ಯಗಳ ಮೊತ್ತ : ಓಶೋ ಚಿಂತನೆ

oshoಯೋಚಿಸುವುದು ಎಂದರೆ ಲೋಲಕದ ಆವೇಗದ ಹಾಗೆ. ಯೋಚಿಸಲು ಆರಂಭಿಸಿದ ಕೂಡಲೇ ಮನಸ್ಸು ವಿರುದ್ಧ ದಿಕ್ಕಿಗೆ ವ್ಯವಸ್ಥೆಗೊಳಿಸಲು ಆರಂಭಿಸುತ್ತದೆ. ಆದ್ದರಿಂದಲೇ ಗೆಳೆಯರು ಮಾತ್ರವೇ ಶತ್ರುಗಳಾಗಬಲ್ಲರು. ಮೊದಲು ಗೆಳೆಯರಾಗಿಲ್ಲದಿದ್ದರೆ, ಇದ್ದಕ್ಕಿದ್ದ ಹಾಗೆ ಶತ್ರುವಾಗಲು ಸಾಧ್ಯವಿಲ್ಲ ~ ಓಶೋ ರಜನೀಶ್

ನಸ್ಸಿನ ಸಮತೋಲನ ಕಾಯ್ದುಕೊಳ್ಳುವುದು ನಮಗೆ ಅತ್ಯಂತ ಕಷ್ಟವೆಂದೇ ತೋರುತ್ತದೆ. ಒಂದು ವಿಚಾರದಿಂದ ಇನ್ನೊಂದು ವಿಚಾರಕ್ಕೆ ಸಾಗುವುದು ಅತ್ಯಂತ ಸುಲಭ. ಒಂದು ಧ್ರುವದಿಂದ ಇನ್ನೊಂದಕ್ಕೆ ಸಾಗುವುದು ಮನಸ್ಸಿನ ಲಕ್ಷಣ. ನೀವು ಸಮತೋಲನದಿಂದಿದ್ದರೆ, ಮನಸ್ಸು ಕಣ್ಮರೆಯಾಗುತ್ತದೆ. ನೀವು ಅಸಮತೋಲನಗೊಂಡಾಗ ಅದು ಅಲ್ಲಿರುತ್ತದೆ,

ಉದಾಹರಣೆಗೆ ನೋಡಿ. ಅತಿಯಾಗಿ ತಿನ್ನುವವರಿಗೆ ಉಪವಾಸ ಮಾಡುವುದು ಸುಲಭ. ಈ ಮಾತು ಅತಾರ್ಕಿಕವೆಂದು ತೋರಬಹುದು. ಆಹಾರದ ಬಗ್ಗೆ ಕಡು ವ್ಯಾಮೋಹಿಯಾಗಿರುವವರು ಉಪವಾಸ ಮಾಡಲಾರರು ಎಂದುಕೊಳ್ಳುವಿರಿ. ಆದರೆ ತಪ್ಪು. ಆಹಾರದ ಬಗ್ಗೆ ಕಡು ವ್ಯಾಮೋಹಿಯಾದ ವ್ಯಕ್ತಿಯೇ ಉಪವಾಸ ಮಾಡಬಲ್ಲ. ಏಕೆಂದರೆ ಉಪವಾಸ ಎಂದರೆ ಅದೇ ಕಡು ವ್ಯಾಮೋಹ, ಆದರೆ ವಿರುದ್ಧ ದಿಕ್ಕಿನಲ್ಲಿ ಅಷ್ಟೆ. ನೀವು ನಿಮ್ಮನ್ನು ಬದಲಿಸಿಕೊಳ್ಳುತ್ತಿಲ್ಲ. ನೀವಿನ್ನೂ ಆಹಾರದ ಬಗ್ಗೆ ಕಡು ವ್ಯಾಮೋಹಿಯಾಗಿದ್ದೀರಿ. ಮೊದಲು ನೀವು ಅತಿಯಾಗಿ ತಿನ್ನುತ್ತಿದ್ದಿರಿ, ಈಗ ಹಸಿವೆಯಿಂದ ಇದ್ದೀರಿ. ಆದರೆ ಮನಸ್ಸು ಇನ್ನೂ ಆಹಾರದ ಕುರಿತೇ, ಆದರೆ ವಿರುದ್ಧ ದಿಕ್ಕಿನಲ್ಲಿ ಗಮನ ಕೇಂದ್ರೀಕರಿಸಿದೆ.

ಇದು ಗಡಿಯಾರದ ಲೋಲಕದಂತೆ. ಲೋಲಕ ಬಲಕ್ಕೆ ಹೋಗುತ್ತದೆ, ನಂತರ ಎಡಕ್ಕೆ, ಮತ್ತೆ ಬಲಕ್ಕೆ; ಗಡಿಯಾರದ ಕೆಲಸ ಲೋಲಕದ ಈ ಚಲನೆಯನ್ನು ಅವಲಂಬಿಸಿದೆ. ಲೋಲಕ ಮಧ್ಯದಲಿದ್ದರೆ ಗಡಿಯಾರ ನಿಲ್ಲುತ್ತದೆ. ಲೋಲಕ ಬಲಕ್ಕೆ ಸಾಗುವಾಗ, ಅದು ಕೇವಲ ಬಲಕ್ಕೆ ಸಾಗುತ್ತಿದೆ ಎಂದು ಭಾವಿಸುವಿರಿ. ಆದರೆ ಲೋಲಕ ಅಲ್ಲಿಂದ ಆವೇಗವನ್ನು ಒಗ್ಗೂಡಿಸಿಕೊಂಡು, ಎಡಕ್ಕೆ ಹೋಗುತ್ತದೆ. ಅದು ಬಲಕ್ಕೆ ಹೆಚ್ಚು ಸಾಗಿದಷ್ಟೂ, ಹೆಚ್ಚು ಆವೇಗವನ್ನು ಪಡೆದುಕೊಳ್ಳುತ್ತದೆ ಮತ್ತು ಹೆಚ್ಚು ಎಡಕ್ಕೆ ಹೋಗುತ್ತದೆ. ಹಾಗೆಯೇ ಹೆಚ್ಚು ಎಡಕ್ಕೆ ಸಾಗಿದಷ್ಟು ಬಲಕ್ಕೆ ಸಾಗಲು ಹೆಚ್ಚು ಆವೇಗವನ್ನು ಅಲ್ಲಿಂದ ಪಡೆದುಕೊಳ್ಳುತ್ತದೆ. ಯೋಚಿಸುವುದು ಎಂದರೆ ಲೋಲಕದ ಆವೇಗದ ಹಾಗೆ. ಯೋಚಿಸಲು ಶುರುವಿಡುತ್ತಿದ್ದ ಹಾಗೇ ಮನಸ್ಸು ವಿರುದ್ಧ ದಿಕ್ಕಿಗೆ ವ್ಯವಸ್ಥೆಗೊಳಿಸಲು ಆರಂಭಿಸುತ್ತದೆ. ಆದ್ದರಿಂದಲೇ ಗೆಳೆಯರು ಮಾತ್ರವೇ ಶತ್ರುಗಳಾಗಬಲ್ಲರು. ಮೊದಲು ಗೆಳೆಯರಾಗಿಲ್ಲದಿದ್ದರೆ, ಇದ್ದಕ್ಕಿದ್ದ ಹಾಗೆ ಶತ್ರುವಾಗಲು ಸಾಧ್ಯವಿಲ್ಲ.

ಪ್ರೀತಿ ಎನ್ನುವುದು ಆತ್ಯಂತಿಕ ದ್ವೇಷದ ಸಂಬಂಧವೆಂದು ಆಧುನಿಕ ಸಂಶೋಧನೆ ಹೇಳುತ್ತದೆ. ಅಂದರೆ ನಿಮ್ಮ ಗಂಡ ನಿಮ್ಮ ಆಪ್ತ ಶತ್ರು ಮತ್ತು ನಿಮ್ಮ ಹೆಂಡತಿ ನಿಮ್ಮ ಆಪ್ತ ಶತ್ರು; ಪರಮಾಪ್ತ ಮತ್ತು ಹಗೆತನದ ಸಂಬಂಧ. ಈ ಮಾತು ನಿಮಗೆ ಅತಾರ್ಕಿಕವಾಗಿ ತೋರುತ್ತದೆ ಅಲ್ಲವೆ? ಆಪ್ತರಾದವರು ಹೇಗೆ ಶತ್ರುಗಳಾಗಬಲ್ಲರು ಎಂದು ನಿಮಗೆ ಅಚ್ಚರಿಯಾಗುತ್ತದೆ; ಮೊದಲು ಗೆಳೆಯನಾಗಿದ್ದವನು ಈಗ ಹೇಗೆ ಶತ್ರುವಾಗಬಲ್ಲ? ತರ್ಕ ಮೇಲ್ಮಟ್ಟದಲ್ಲಿ ನಿಲ್ಲುತ್ತದೆ, ಆದರೆ ಬದುಕು ಆಳಕ್ಕೆ ಸಾಗುತ್ತದೆ. ಬದುಕಿನಲ್ಲಿ ಎಲ್ಲ ವೈರುಧ್ಯಗಳನ್ನೂ ಒಟ್ಟಾಗಿ ಹೆಣೆಯಲಾಗಿವೆ… ಅವು ಒಟ್ಟಾಗಿ ಅಸ್ತಿತ್ವದಲ್ಲಿರುತ್ತವೆ. ಇದನ್ನು ಪ್ರಜ್ಞಾಪೂರ್ವಕವಾಗಿ ಮನನ ಮಾಡಿಕೊಳ್ಳಿ. ಆಗ ಧ್ಯಾನ ಸಂಭವಿಸುತ್ತದೆ. ಅಂದರೆ  ಸಮತೋಲನ ಆಗುತ್ತದೆ.

ಬದುಕಿನ ಸೌಂದರ್ಯ ಇರುವುದೇ ಇಲ್ಲಿ. ವೈರುಧ್ಯಗಳ ಸಮತೋಲನದ ಸ್ಥಿತಿಯಲ್ಲಿ.

 

1 Comment

Leave a Reply