ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ
ನುರಿತ ಪ್ರಯಾಣಿಕನಿಗೆ
ಪೂರ್ವ ಸಿದ್ಧತೆಗಳಲ್ಲಿ ನಂಬಿಕೆಯಿಲ್ಲ.
ಒಳ್ಳೆಯ ಕಲಾವಿದನೂ ಹಾಗೆಯೇ
ಒಳಗಣ್ಣಿಗೆ ಮಾತ್ರ ತಲೆ ಬಾಗುತ್ತಾನೆ.
ಪ್ರಖರ ವಿಜ್ಞಾನಿಗೆ, ಸಿದ್ಧಾಂತಗಳ ಹಂಗಿಲ್ಲ
ಮಾತು ಬಲ್ಲವ, ತಡವರಿಸುವುದಿಲ್ಲ
ಬೆರಳು ಬಳಸದೇ ಎಣಿಸುವವನೇ
ಚತುರ ವ್ಯಾಪಾರಿ.
ಅಂತೆಯೇ ಸಂತ,
ಎಲ್ಲರ ಕೈಗೂ ಸಿಗುತ್ತಾನೆ
ಯಾರನ್ನೂ ತಿರಸ್ಕರಿಸುವುದಿಲ್ಲ
ಯಾವ ಸಂದರ್ಭವನ್ನೂ ದೂರುವುದಿಲ್ಲ
ಎಲ್ಲವನ್ನೂ ಬಳಸಿಕೊಳ್ಳುತ್ತಾನೆ.
ಬೆಳಕನ್ನು ಧರಿಸುವುದೆಂದರೆ, ಹೀಗೆ.
ಒಳ್ಳೆ ಮನುಷ್ಯ ಯಾರು? ಕೆಟ್ಟ ಮನುಷ್ಯನ ಶಿಕ್ಷಕ.
ಕೆಟ್ಟ ಮನುಷ್ಯ ಯಾರು ? ಒಳ್ಳೆ ಮನುಷ್ಯನ ಜವಾಬ್ದಾರಿ.
ನೀವು ಎಂಥ ಜಾಣರಾದರೂ ಸರಿ
ಈ ಸೂಕ್ಷ್ಮ ಗೊತ್ತಿರದೇ ಹೋದರೆ
ಕಳೆದು ಹೋಗಿ ಬಿಡುತ್ತೀರಿ.
ಇದು ಪರಮ ರಹಸ್ಯ.