ಮರಳು ಮತ್ತು ನೊರೆ ~ ಖಲೀಲ್ ಗಿಬ್ರಾನ್ : ಕಾವ್ಯ ವಿರಾಮ #2

ಖಲೀಲ್ ಗಿಬ್ರಾನ್’ರ ‘SAND AND FOAM’ ಕೃತಿಯಲ್ಲಿ ಗದ್ಯ – ಪದ್ಯಗಳ ಹದ ಬೆರಕೆಯ ರಚನೆಗಳಿವೆ. ಕಾವ್ಯ, ಅನುಭಾವ, ತಾತ್ತ್ವಿಕತೆಯೇ ಮೊದಲಾದ ಗುಣಗಳು ಮೆಳೈಸಿರುವ ಈ ರಚನೆಗಳನ್ನು ನಿರ್ದಿಷ್ಟವಾಗಿ ಯಾವ ಪ್ರಕಾರಕ್ಕೆ ಸೇರಿಸಬೇಕೆಂಬುದೇ ಗೊಂದಲ. ಈ ರಚನೆಗಳು ಎಲ್ಲ ಕಡೆಗೂ, ಎಲ್ಲ ಕಾಲಕ್ಕೂ ಸಲ್ಲುತ್ತವೆ ಅನ್ನುವುದು ಮಾತ್ರ ನಿರ್ವಿವಾದ. SAND AND FOAM ಕೃತಿಯ ಈ ರಚನೆಗಳನ್ನು ತಮ್ಮ ವಿಶಿಷ್ಟ ಶೈಲಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ, ‘ಅರಳಿ ಬಳಗ’ದ ಬರಹಗಾರ ಚಿದಂಬರ ನರೇಂದ್ರ. 

KG

ತಾಯಿಯ ಎದೆಯಲ್ಲಿ ಮೌನವಾಗಿರುವ ಹಾಡು,
ಮಗುವಿನ ತುಟಿಗಳ ಮೇಲೆ ಅರಳುತ್ತದೆ.
~
ನೀನು ನಿನ್ನ ನೆರಳನ್ನ ನೋಡಬಹುದು.
ಅದರೆ
ಆವಾಗ ನೀನು ಬೆಳಕಿಗೆ ಬೆನ್ನು ಮಾಡಿರುತ್ತೀ.
~
ಹುಶಃ
ಮನುಷ್ಯ ಅತ್ಮಹತ್ಯೆ ಮಾಡಿಕೊಳ್ಳುವುದು
ಆತ್ಮ ರಕ್ಷಣೆಗೋಸ್ಕರ.
~
ನೀನು ಹಾಡಿದಾಗ,
ಹಸಿದವ ತನ್ನ ಹೊಟ್ಟೆಯಿಂದ
ನಿನ್ನ ಹಾಡುಗಳನ್ನ ಕೇಳುತ್ತಾನೆ.
~
ಕಾಂಡವೂ ಹೂವೇ
ಆದರೆ,
ಅದು ಪ್ರಚಾರ ಬಯಸುವುದಿಲ್ಲ
ಅಷ್ಟೇ.
~
ನ್ನ ಮನಸಿಗೆ ತುಂಬಾ ಹತ್ತಿರವಾದವರು ಈ ಇಬ್ಬರೇ.
ರಾಜ್ಯವಿಲ್ಲದ ರಾಜ
ಮತ್ತು
ಬೇಡಲು ಬರದ ಬಡವ.
~
ದುಕಿನ ಎಲ್ಲ ನಿಗೂಢಗಳನ್ನ ಭೇದಿಸಿದ ಮನುಷ್ಯ
ಸಾವಿಗೆ ಹತ್ತಿರವಾಗುತ್ತಾನೆ.
ಸಾವು
ಬದುಕಿನ ಕೊನೆಯ ರಹಸ್ಯ. 

(ಮುಂದುವರೆಯುವುದು…..)

ಅನುವಾದಕರ ಟಿಪ್ಪಣಿ :
ಖಲೀಲ್ ಗಿಬ್ರಾನ್ ನ ಆಯ್ದ (ಆಯ್ದ ಎಂದರೆ ತಪ್ಪಾಗಬಹುದು. ನನ್ನನ್ನು ತಾಕಿದ ಎನ್ನಬಹುದೇನೋ) ವಚನಗಳು. ಈ ವಚನಗಳು ನಾನು ಅರ್ಥ ಮಾಡಿಕೊಳ್ಳಲಿಕ್ಕೆ ಕನ್ನಡಿಸಿರುವಂಥವು. ಕೆಲವು ರಚನೆಗಳು ಎಷ್ಟು ಸರಳ ಮತ್ತು ಹೃದ್ಯವಾಗಿವೆಯೆಂದರೆ, ಬೇರೆ ರೀತಿ ಅನುವಾದಿಸಲು ಸಾಧ್ಯವಿಲ್ಲವೇನೋ. ಆದ್ದರಿಂದ ನನ್ನ ಪ್ರಯತ್ನ, ಬೇರೆಯವರ ಪ್ರಯತ್ನ ಕೆಲವೊಮ್ಮೆ ತುಂಬ ಹತ್ತಿರವಾಗಿದೆ. ಆದರೆ ನನ್ನ ಮುಖ್ಯ ಉದ್ದೇಶ ಈ ವಚನಗಳನ್ನ ಅರಿಯುವುದಾಗಿರುವದರಿಂದ ಜಾಸ್ತಿ ಸರ್ಕಸ್ ಮಾಡಲು ಹೋಗಿಲ್ಲ. ಕಾವ್ಯ ಗುಣಗಳಿಂದ ತುಂಬಿ ತುಳುಕುತ್ತಿದ್ದರೂ, ಯಾಕೋ ಗಿಬ್ರಾನ್ ಈ ರಚನೆಗಳನ್ನ ಗದ್ಯ ರೂಪದಲ್ಲಿ, ಹೇಳಿಕೆಗಳ(quotation) ರೂಪದಲ್ಲಿ ಕೊಟ್ಟಿದ್ದಾನೆ. “Obvious becomes obvious when someone says in simple form “ಅಂತಾನೆ ಗಿಬ್ರಾನ್.
~ ಚಿದಂಬರ ನರೇಂದ್ರ

1 Comment

Leave a Reply