ಕೇನೋಪನಿಷತ್ತು ಸಾಮವೇದದ ತಲವಕಾರ ಬ್ರಾಹ್ಮಣಕ್ಕೆ ಸೇರಿದೆ. ತಲವಕಾರ ಬ್ರಾಹ್ಮಣಕ್ಕೆ “ಜೈಮಿನೀಯ ಬ್ರಾಹ್ಮಣ”ವೆಂದೂ ಹೆಸರಿದೆ. ಈ ಉಪನಿಷತ್ತಿನ ಮೊದಲ ಮಂತ್ರವು “ಕೇನ” ಎಂಬ ಪದದಿಂದ ಆರಂಭವಾಗುವದರಿಂದ ಇದಕ್ಕೆ “ಕೇನೋಪನಿಷತ್” ಎಂಬ ಹೆಸರು ಬಂದಿದೆ.
ಕೇನ ಎಂದರೆ ಯಾರಿಂದ ಎಂದು ಅರ್ಥ. ಈ ಜಗತ್ತಿನ ಸೃಷ್ಟಿ ಯಾರಿಂದ ಆಯಿತು ಎಂಬ ಪ್ರಶ್ನೆಗೆ ಉತ್ತರವು ಕೇನೋಪನಿಷತ್ತಿನಲ್ಲಿದೆ. ಈ ಉಪನಿಷತ್ತಿಗೆ ಶ್ರೀ ಶಂಕರಾಚಾರ್ಯರು ಪದಭಾಷ್ಯ ಹಾಗೂ ವಾಕ್ಯಭಾಷ್ಯವೆಂಬ ಎರು ಪ್ರಸಿದ್ಧ ಭಾಷ್ಯಗಳನ್ನು ಬರೆದಿದ್ದಾರೆ. (ಎರಡನ್ನೂ ಶಂಕರರೇ ರಚಿಸಿರುವ ಬಗ್ಗೆ ಅನುಮಾನಗಳೂ ಇವೆ).
ಅಧ್ಯಯನದ ಅನುಕೂಲಕ್ಕಾಗಿ ಈ ಉಪನಿಷತ್ತು ನಾಲ್ಕು ಖಂಡಗಳಾಗಿ ವಿಭಜಿಸಲಾಗಿದೆ.
ಮೊದಲನೆಯ ಖಂಡವು “ಪರಬ್ರಹ್ಮವು ಅತೀಂದ್ರಿಯ ವಸ್ತುವೆಂದೂ, ಜಡವಾದ ಇಂದ್ರಿಯಗಳ ಚೇತನತ್ವವು ಅದರಿಂದಲೇ ಉಂಟಾಗಿದೆಯೆಂದೂ, ಇದರ ಸ್ವರೂಪವನ್ನು ಪ್ರಮಾಣಗಳಿಂದ ಇತರರಿಗೆ ಉಪದೇಶಿಸುವುದು ಅಸಾಧ್ಯ” ಎಂದು ಹೇಳಿದೆ.
“ಬ್ರಹ್ಮವನ್ನು ಹೇಗೆ ಅರಿಯಬಹುದು?” ಎಂಬುದಕ್ಕೆ ಎರಡನೆಯ ಖಂಡವು ಉತ್ತರವನ್ನು ಕೊಡುತ್ತದೆ. ಬ್ರಹ್ಮವು ಇಂದ್ರಿಯಗಳಿಗೆ ಗೋಚರವಾಗದಿದ್ದರೂ, ಪ್ರತ್ಯಗಾತ್ಮನೆಂದು ಅರಿಯಬಹುದು. ಆದರೆ ಬ್ರಹ್ಮವನ್ನು “ಚೆನ್ನಾಗಿ ಅರಿತಿದ್ದೇನೆ” ಎಂದು ಹೇಳಲಾಗುವುದಿಲ್ಲ ಎಂದು ಈ ಖಂಡವು ತಿಳಿಸುತ್ತದೆ.
ಮೂರನೆಯ ಖಂಡದಲ್ಲಿ ಬ್ರಹ್ಮವು ಉಮಾ ಹೈಮವತಿಯಾಗಿ ದೇವತೆಗಳಿಗೆ ಪಾಠ ಕಲಿಸುವ ಪ್ರಕರಣವಿದೆ.
ನಾಲ್ಕನೆಯ ಖಂಡವು ಮೂರನೆ ಖಂಡದ ವಿಸ್ತರಣೆಯಂತಿದ್ದು, ಉಮಾ ಹೈಮವತಿಯು ಉಪಮಾನಗಳ ಮೂಲಕ ಬ್ರಹ್ಮವಿದ್ಯೆಯನ್ನು ಇಂದ್ರನಿಗೆ ಉಪದೇಶಿಸುವ ವಿವರವಿದೆ. ಬ್ರಹ್ಮವು ಮಿಂಚಿನ ಬಳ್ಳಿಯಂತೆ ಹೊಳೆದು ಮಾಯವಾಗುತ್ತದೆ ಎಂದು ಇದರಲ್ಲಿ ಹೇಳಲಾಗಿದೆ.
(ವಿವಿಧ ಆಕರಗಳಿಂದ ಮಾಹಿತಿ ಸಂಗ್ರಹಿಸಿ ಕ್ರೋಢೀಕರಿಸಲಾಗಿದೆ)
ಅದ್ಭುತ ವಿಚಾರಗಳ ವಿವರಣೆ.
ಧನ್ಯವಾದಗಳು