ರೂಪಾಯಿ ಬೆಲೆಯ ತಂತ್ರ ಶಕ್ತಿ ! : ಝೆನ್ ಕಥೆ

tao2

ಝೆನ್ ಆಶ್ರಮದಲ್ಲಿ ವಿದ್ಯಾಭ್ಯಾಸ ಮುಗಿಸಿದ ಮೇಲೆ ಇಬ್ಬರು ಸನ್ಯಾಸಿಗಳು ತಮ್ಮ ಮುಂದಿನ ಸಾಧನೆಗಾಗಿ ಬೇರೆ ಬೇರೆ ದಾರಿಗಳನ್ನು ಹುಡುಕಿಕೊಂಡು ಬೇರೆ ಬೇರೆ ದಿಕ್ಕುಗಳಲ್ಲಿ ಪ್ರಯಾಣ ಬೆಳೆಸಿದರು.

ಹಿರಿಯ ಸನ್ಯಾಸಿ, ತಂತ್ರ ಸಾಧನೆಯಲ್ಲಿ ತನ್ನನ್ನು ತಾನು ತೀವ್ರವಾಗಿ ತೊಡಗಿಸಿಕೊಂಡು ವಿಶೇಷ ಅತೀಂದ್ರಿಯ ಶಕ್ತಿಗಳನ್ನು ಪಡೆದುಕೊಂಡ.

ಕಿರಿಯ ಸನ್ಯಾಸಿ ಸಹಜ ಕೃಷಿಯಲ್ಲಿ ತೊಡಗಿಕೊಂಡು ಹೊಸ ಹೊಸ ಪ್ರಯೋಗಗಳನ್ನು ಮಾಡಿದ.

ಇಬ್ಬರೂ ಸನ್ಯಾಸಿಗಳು ಹಳೆಯ ಆಶ್ರಮಕ್ಕೆ ಹೋಗಿ ಗುರುಗಳನ್ನು ಭೇಟಿಯಾಗಿ ತಮ್ಮ ತಮ್ಮ ಸಾಧನೆಗಳ ಬಗ್ಗೆ ಗುರುಗಳಿಗೆ ತಿಳಿಸಬೇಕೆಂದು ನಿಶ್ಚಯಿಸಿದರು.

ಆಶ್ರಮ ಮಾರ್ಗವಾಗಿ ಹೋಗುತ್ತಿದ್ದಾಗ, ಸನ್ಯಾಸಿಗಳಿಗೆ ಒಂದು ತುಂಬಿ ಹರಿಯುತ್ತಿದ್ದ ನದಿ ಎದುರಾಯಿತು. ನದಿ ದಾಟುವುದು ಹೇಗೆ ಎಂದು ಯೋಚಿಸುತ್ತಿರುವಾಗಲೇ, ದೋಣಿಯೊಂದು ದಂಡೆಗೆ ಬಂತು.

ಹಿರಿಯ ಸನ್ಯಾಸಿ ತನ್ನ ತಂತ್ರ ಶಕ್ತಿಯನ್ನು ಬಳಸಿ, ನಾವಿಕನಿಗೆ ಮಂಕು ಕವಿಸಿ ದೋಣಿ ಎತ್ತಿಕೊಂಡು ಕ್ಷಣಾರ್ಧದಲ್ಲಿ ಆಚೆ ದಡ ಸೇರಿದ.

ಕಿರಿಯ ಸನ್ಯಾಸಿ, ಕೊಂಚ ಹೊತ್ತು ಕಾಯ್ದು, ಇನ್ನೊಂದು ದೋಣಿಯಲ್ಲಿ ಆಚೆ ದಡ ಸೇರಿದ. ದಡ ಸೇರಿದ ಮೇಲೆ ನಾವಿಕನಿಗೆ ಒಂದು ರೂಪಾಯಿ ಬಾಡಿಗೆ ಕೊಟ್ಟ.

ಸನ್ಯಾಸಿಗಳು ಮಾತನಾಡಿಕೊಳ್ಳುತ್ತ ತಮ್ಮ ಮುಂದಿನ ದಾರಿ ಕ್ರಮಿಸತೊಡಗಿದರು.

ಹಿರಿಯ ಸನ್ಯಾಸಿ : ನೀನು ಸಮಯವನ್ನೆಲ್ಲ ಹಾಳು ಮಾಡಿಕೊಂಡುಬಿಟ್ಟೆ. ನಿನ್ನ ಕಂಡರೆ ನನಗೆ ಅನುಕಂಪ. ನಾನು ನೋಡು ತಂತ್ರ ಸಾಧನೆ ಮಾಡಿ ಎಷ್ಟು ಅತೀಂದ್ರಿಯ ಶಕ್ತಿಗಳನ್ನು ಗಳಿಸಿದ್ದೇನೆ.

ಕಿರಿಯ ಸನ್ಯಾಸಿ : ಅಯ್ಯೋ ! ನಾನು ನೋಡಲಿಲ್ವಾ, ಒಂದು ರೂಪಾಯಿ ಬೆಲೆ ಬಾಳುವ ತಂತ್ರ ಶಕ್ತಿಗಳಿಗಾಗಿ ನೀನು ಇಷ್ಟು ಸಮಯ ವ್ಯರ್ಥ ಮಾಡಿದ್ದೀಯಲ್ಲಾ ನನಗೆ ಆಶ್ಚರ್ಯವಾಗುತ್ತಿದೆ.

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.