ಕಠೋಪನಿಷತ್ತು : ಸನಾತನ ಸಾಹಿತ್ಯ ~ ಮೂಲಪಾಠಗಳು #9

ಕಠೋಪನಿಷತ್ತು ಅತ್ಯಂತ ಪ್ರಮುಖವಾದ ಉಪನಿಷತ್ತೆಂದು ಹೆಸರಾಗಿದೆ. ಇದು ಕೃಷ್ಣಯಜುರ್ವೇದದ ಕಾಠಕ ಶಾಖೆಗೆ ಸೇರಿದ್ದು, ಆ ಕಾರಣದಿಂದಲೇ ‘ಕಠೋಪನಿಷತ್’ ಎಂಬ ಹೆಸರು ಪಡೆದಿದೆ.  

ಕಠೋಪನಿಷತ್ತಿನಲ್ಲಿ ಮೂರು ವಲ್ಲಿಗಳನ್ನೊಳಗೊಂಡ ಎರಡು ಅಧ್ಯಾಯಗಳಿವೆ. ನಚಿಕೇತನು ಯಮಲೋಕಕ್ಕೆ ಹೋಗಿ ಯಮನಿಂದ ಆತ್ಮಜ್ಞಾನವನ್ನು ಹೊಂದಿದ ಕಥೆ ಇದರ ಮುಖ್ಯ ವಸ್ತು.

ತಂದೆಯಾದ ವಾಜಶ್ರವಸ್ ಯಾಗ ಸಂದರ್ಭದಲ್ಲಿ ಕುಪಿತನಾಗಿ ತನ್ನನ್ನು ಯಮನಿಗೆ ಒಪ್ಪಿಸಿದರೂ ಧೈರ್ಯಗೆಡದೆ ಮಗನಾದ ನಚಿಕೇತ ಯಮನೊಂದಿಗೆ ವಾದಮಾಡಿ ಅಮೃತತ್ವವನ್ನು ಪಡೆಯುತ್ತಾನೆ. ತಂದೆಯ ಪ್ರಸನ್ನತೆಯೊಂದಿಗೆ ಅಗ್ನಿವಿದ್ಯೆಯನ್ನೂ ವರವಾಗಿ ಪಡೆಯುತ್ತಾನೆ.

ನಚಿಕೇತ ಬ್ರಹ್ಮವಿದ್ಯೆಯನ್ನು ಪಡೆದ ಕಥೆ ಸರಳವಾಗಿಲ್ಲ. ನಚಿಕೇತನ ಮನಸ್ಸು ಬದಲಿಸಲು ಯಮಧರ್ಮನು ಹಲವು ಪ್ರಲೋಭನಗಳನ್ನು ಒಡ್ಡುತ್ತಾನೆ. ಆದರೆ ನಚಿಕೇತ ಯಾವುದಕ್ಕೂ ಜಗ್ಗುವುದಿಲ್ಲ. ನನಗೆ ಬ್ರಹ್ಮವಿದ್ಯೆಯನ್ನೇ ವರವಾಗಿ ನೀಡಬೇಕೆಂದು ಕೋರುತ್ತಾನೆ. ಅವನ ದೃಢತೆಗೆ ಪ್ರಸನ್ನಗೊಳ್ಳುವ ಯಮಧರ್ಮನು ಜನ್ಮ, ಪುನರ್ಜನ್ಮಗಳು, ಮರಣಾನಂತರ ಆತ್ಮದ ಸ್ಥಿತಿ, ಇಂದ್ರಿಯನಿಗ್ರಹ ದಿಂದ ಪರಮಾತ್ಮಪ್ರಾಪ್ತಿ, ಶ್ರದ್ಧೆ, ಧೈರ್ಯಗಳಿಂದ ಪರಮಾತ್ಮ ಸ್ವರೂಪಜ್ಞಾನ, ಶಾಶ್ವತಸುಖ ಶಾಂತಿಗಳ ಪ್ರಾಪ್ತಿ ಇವನ್ನು ಯಮ ಪ್ರಣವದಿಂದ ಸಂಗ್ರಹವಾಗಿ ನಚಿಕೇತನಿಗೆ ಉಪದೇಶಿಸುತ್ತಾನೆ.

ಈ ಬೋಧನೆಯಲ್ಲಿ ಮಾನವನ ಹುಟ್ಟು ಸಾವುಗಳ ಪ್ರಶ್ನೆಗೂ ಅವನ ಸುಖಕ್ಕೆ ಶ್ರೇಯ ಪ್ರೇಯಗಳಾವುವು ಎಂಬ ಪ್ರಶ್ನೆಗೂ ಉತ್ತರವಿದೆ. ನಿತ್ಯರಲ್ಲಿ ನಿತ್ಯನೂ ಚೇತನರಲ್ಲಿ ಚೇತನನೂ ಆಗಿ ಸಮಸ್ತಕ್ಕೂ ಏಕೈಕ ಕಾರಣನಾದ ಪರಮಾತ್ಮನನ್ನು ನಚಿಕೇತನಂಥ ಅಸಾಧಾರಣ ಧೀರನಾದವ ಮಾತ್ರ ಹೃದಯಗಹ್ವರದಲ್ಲಿ ಕಂಡುಕೊಳ್ಳುವನೆಂದು ಈ ಉಪನಿಷತ್ತಿನಲ್ಲಿ ಸ್ಪಷ್ಟಪಡಿಸಲಾಗಿದೆ.

 

ಸಹ ನಾವವತು ಸಹ ನೌ ಭುಜಕ್ತು ಸಹ ವೀರ್ಯಂ ಕರವಾವಹೈ|
ತೇಜಸ್ವಿ ನಾವಧೀತಮಸ್ತು ಮಾ ವಿದ್ವಿಷಾವಹೈ||
ಓಂ ಶಾಂತಿಃ   ಶಾಂತಿಃ  ಶಾಂತಿಃ
~ ಇದು ಈ ಉಪನಿಷತ್ತಿನ ಪ್ರಾರ್ಥನಾ ಶ್ಲೋಕ.

“ಗುರುಶಿಷ್ಯರಾದ ನಮ್ಮಿಬ್ಬರನ್ನೂ ಭಗವಂತನು ಜೊತೆಯಲ್ಲಿ ಕಾಪಾಡಲಿ; ನಮ್ಮಿಬ್ಬರನ್ನೂ ಜೊತೆಯಲ್ಲಿ ಪೋಷಿಸಲಿ; ನಾವು ಜೊತೆಯಲ್ಲಿ ಸಾಮರ್ಥ್ಯವಂತರಾಗುವಂತೆ ಮಾಡಲಿ; ನಮ್ಮಿಬ್ಬರ ಅಧ್ಯಯನವು ತೇಜಸ್ವಿಯಾಗಲಿ; ನಾವು ಪರಸ್ಪರ ದ್ವೇಷಮಾಡದೆ ಇರುವಂತಾಗಲಿ” ~ ಇದು ಈ ಪ್ರಾರ್ಥನಾ ಶ್ಲೋಕದ ಅರ್ಥ.

1 Comment

Leave a Reply to ಮಾಂಡೂಕ್ಯ ಮತ್ತು ಮುಂಡಕೋಪನಿಷತ್ತುಗಳು : ಸನಾತನ ಸಾಹಿತ್ಯ ~ ಮೂಲಪಾಠಗಳು #10 – ಅರಳಿಮರCancel reply