ಷಟ್ ಪ್ರಶ್ನೆಗಳ ಪ್ರಶ್ನೋಪನಿಷತ್ತು : ಸನಾತನ ಸಾಹಿತ್ಯ ~ ಮೂಲಪಾಠಗಳು #11

ಪ್ರಶ್ನೆಗಳ ಮೇಲೆ ರಚಿತಗೊಂಡಿರುವುದರಿಂದಲೇ ಈ ಉಪನಿಷತ್ತಿಗೆ ಪ್ರಶ್ನೋಪನಿಷತ್ತು ಎಂಬ ಹೆಸರು ಬಂದಿದೆ. ಆರು ಜಿಜ್ಞಾಸು ಋಷಿಗಳು ಕೇಳುವ ಪ್ರಶ್ನೆಗಳಾದ್ದರಿಂದ ‘ಷಟ್ ಪ್ರಶ್ನ ಉಪನಿಷತ್ತು’ ಎಂಬ ಹೆಸರೂ ಇದಕ್ಕಿದೆ. ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.wordpress.com/2018/06/28/sanatana10/

PrashnaUpanishad[1]
ಚಿತ್ರಕೃಪೆ: ಇಂಟರ್’ನೆಟ್
ಪ್ರಶ್ನೋಪನಿಷತ್ತು ಅಥರ್ವವೇದದ ಪೈಪ್ಪಲಾದ ಶಾಖೆಗೆ ಸೇರಿದೆ. ಸಾಂಖ್ಯ ದರ್ಶನದ ಮೂಲ ಸಿದ್ಧಾಂತಗಳು ಈ ಉಪನಿಷತ್ತಿನಲ್ಲಿವೆ. ಪಿಪ್ಪಲಾದ ಮಹರ್ಷಿಗೆ ಆರು ಮಂದಿ ಜಿಜ್ಞಾಸುಗಳು ಕೇಳಿದ ಪ್ರಶ್ನೆ ಹಾಗೂ ಅವಕ್ಕೆ ಮಹರ್ಷಿಗಳು ನೀಡಿದ ಉತ್ತರಗಳೇ ಈ ಉಪನಿಷತ್ತಿನ ಸಾರ. ಪ್ರಶ್ನೆಗಳ ಮೇಲೆ ರಚಿತಗೊಂಡಿರುವುದರಿಂದಲೇ ಈ ಉಪನಿಷತ್ತಿಗೆ ಪ್ರಶ್ನೋಪನಿಷತ್ತು ಎಂಬ ಹೆಸರು ಬಂದಿದೆ. ಆರು ಜಿಜ್ಞಾಸು ಋಷಿಗಳು ಕೇಳುವ ಪ್ರಶ್ನೆಗಳಾದ್ದರಿಂದ ‘ಷಟ್ ಪ್ರಶ್ನ ಉಪನಿಷತ್ತು’ ಎಂಬ ಹೆಸರೂ ಇದಕ್ಕಿದೆ.

“ಲೋಕದಲ್ಲಿ ಪ್ರಜೆಗಳು ಹೇಗೆ, ಮತ್ತು ಎಲ್ಲಿಂದ ಜನಿಸುತ್ತಾರೆ?” ಎಂದು ಕಬಂಧಿ ಕಾತ್ಯಾಯನ ಮೊದಲ ಪ್ರಶ್ನೆ ಕೇಳುತ್ತಾನೆ.  ಪ್ರಜಾಪತಿಯ ತಪಸ್ಸಿನ ಫಲವಾಗಿ ಆದಿತ್ಯನೂ (ಪ್ರಾಣ) ಚಂದ್ರಮನೂ (ರಯಿ) ಸೃಷ್ಟಿಯಾಗಿ ಅವರಿಂದ ಪ್ರಜಾಸೃಷ್ಟಿಯಾಯಿತು ಎಂಬುದು ಅದಕ್ಕೆ ಪಿಪ್ಪಲಾದರ ಉತ್ತರ.

ದೇವತೆಗಳೆಷ್ಟು ಮಂದಿ ಪ್ರಜೆಗಳಿಗೆ ಆಧಾರಭೂತರು ? ಅವರಲ್ಲಿ ವರಿಷ್ಠರು ಯಾರು ? ಎಂಬುದು ಭಾರ್ಗವ ವೈದರ್ಭಿ ಎರಡನೆಯ ಪ್ರಶ್ನೆ ಕೇಳುತ್ತಾನೆ.

ಆಕಾಶ, ವಾಯು, ಅಗ್ನಿ, ಆಪಃ, ಪೃಥಿವೀ, ವಾಕ್, ಮನಸ್ಸು, ಚಕ್ಷುಸ್ಸು, ಶ್ರೋತ್ರ ಇವರು ದೇವತೆಗಳು; ಇವರಲ್ಲಿ ವರಿಷ್ಠ ಪ್ರಾಣ ಎಂದು ಪಿಪ್ಪಲಾದರು ಉತ್ತರಿಸುತ್ತಾರೆ.

ಈ ಪ್ರಾಣ ಎಲ್ಲಿಂದ ಹುಟ್ಟಿತು? ಅದು ಈ ಶರೀರಕ್ಕೆ ಹೇಗೆ ಬಂದು ಪ್ರತಿಷ್ಠಿತವಾಗುತ್ತದೆ? ಎಂಬುದು ಅಶ್ವಲಾಯನ ಕೇಳಿದ ಮೂರನೆಯ ಪ್ರಶ್ನೆ.

ಇದಕ್ಕೆ ಪಿಪ್ಪಲಾದರ ಉತ್ತರ: ಪುರುಷನನ್ನು ನೆರಳು ಹಿಂಬಾಲಿಸುವಂತೆ, ಈ ಶರೀರದಲ್ಲಿ ಆತ್ಮನಿಂದ ಕರ್ಮನಿಮಿತ್ತವಾಗಿ ಪ್ರಾಣ ಜನಿಸುತ್ತದೆ. ಸಾಮ್ರಾಟನಾದವ ಬೇರೆ ಬೇರೆ ಗ್ರಾಮಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸುವಂತೆ ಇದು ಇತರ ಪ್ರಾಣಗಳನ್ನು ನಿಯೋಜಿಸುತ್ತದೆ. ಪುಣ್ಯಾಧಿಕ್ಯವಾದರೆ ದೇವಲೋಕಕ್ಕೂ ಪಾಪಾಧಿಕ್ಯವಾದರೆ ನರಕಕ್ಕೂ ಮೇಲ್ಮುಖವಾದ ನಾಡಿಯಿಂದ ಇದು ಉತ್ಕ್ರಮಿಸುತ್ತದೆ.

ನಾಲ್ಕನೆಯ ಪ್ರಶ್ನೆಯನ್ನು ಸೌರ್ಯಾಯಣಿ ಗಾರ್ಗ್ಯರು ಕೇಳುತ್ತಾರೆ: ಪುರುಷನಲ್ಲಿ ನಿದ್ರಿಸುವವರು ಯಾರು? ಜಾಗೃತರಾಗಿರುವವರು ಯಾರು ? ಸ್ವಪ್ನಗಳನ್ನು ಕಾಣುವವರೂ ಅನುಭವಿಸುವವರೂ ಯಾರು ? ಯಾರಲ್ಲಿ ಎಲ್ಲರೂ ಸಂಪ್ರತಿಷ್ಠಿತರಾಗುತ್ತಾರೆ?

ಪಿಪ್ಪಲಾದರ ಉತ್ತರ: ಶ್ರೋತ್ರಾದಿ ಇಂದ್ರಿಯಗಳು ಮನಸ್ಸಿನಲ್ಲಿ ಏಕೀಭವಿಸಿ ನಿದ್ರಿಸುವವು. ಪ್ರಾಣಾದಿ ಪಂಚವಾಯುಗಳು ಎಚ್ಚರವಾಗಿರುವುವು. ಮನಸ್ಸೆಂಬ ದೇವ ಸ್ವಪ್ನಗಳನ್ನು ಕಾಣುವಾತ. ಪಕ್ಷಿಗಳು ವೃಕ್ಷದಲ್ಲಿರುವಂತೆ ಅಕ್ಷರರೂಪಿಯಾದ ಪರಮಾತ್ಮನಲ್ಲಿ ಎಲ್ಲರೂ ಸಂಪ್ರತಿಷ್ಠಿತರಾಗಿರುತ್ತಾರೆ.

ಶೈಬ್ಯ ಸತ್ಯಕಾಮರು ಐದನೆಯ ಪ್ರಶ್ನೆ ಕೇಳುತ್ತಾರೆ : ಪ್ರಣವೋಪಾಸಕ ಯಾವ ಲೋಕವನ್ನು ಜಯಿಸುತ್ತಾನೆ?

ಪ್ರಣವೋಪಾಸಕನು ಸೂರ್ಯನಲ್ಲಿ ಸಂಗತವಾಗಿ ಪಾಪವಿಮುಕ್ತನಾಗಿ ಬ್ರಹ್ಮಲೋಕವನ್ನು ಸೇರುತ್ತಾನೆಂದು ಪಿಪ್ಪಲಾದರು ಉತ್ತರಿಸುತ್ತಾರೆ.

ಸುರೇಶ ಭಾರದ್ವಾಜರು ಷೋಡಶ ಕಲಾ ಪುರುಷನ ವಿಚಾರವಾಗಿ ಆರನೆಯ ಪ್ರಶ್ನೆ ಕೇಳುತ್ತಾರೆ.

ಪ್ರಾಣಾದಿ ಷೋಡಶ ಕಲೆಗಳು ಹೃದಯ ಪುಂಡರೀಕಾಕ್ಷದ ಮಧ್ಯದಲ್ಲಿ ಸಂಭವಿಸುವುದರಿಂದ ಆ ಪುರುಷ ಶರೀರದೊಳಗಿದ್ದಾನೆಂದು ಅದಕ್ಕೆ ಪಿಪ್ಪಲಾದರು ಉತ್ತರ ನೀಡುತ್ತಾರೆ. ಅನಂತರ ಆರು ಮಂದಿ ಶಿಷ್ಯರೂ ತಮ್ಮ ಅವಿದ್ಯೆಯನ್ನು ಹೋಗಲಾಡಿಸಿದ ಋಷಿವರ್ಯರನ್ನು ವಂದಿಸುತ್ತಾರೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply

This site uses Akismet to reduce spam. Learn how your comment data is processed.