ಎದೆಯಲ್ಲಿ ಒಂದೇ ಒಂದು ಹೂವೂ ಅರಳದೆ ಹೋದಾಗ, ಹಾಡು ಹುಟ್ಟದಿದ್ದಾಗ, ಗುರುವನ್ನು ಅರಸಿ ಹೊರಡಿ…

oshoನಿಮ್ಮ ಬಳಿ ಎಲ್ಲವೂ ಇದ್ದೂ ನಿಮಗೆ ಏನೂ ಇಲ್ಲವೆನಿಸಿದಾಗ… ಆಗ ಸದ್ಗುರುವನ್ನು ಹುಡುಕಿ. ಯಾವತ್ತು ನಿಮ್ಮ ಸಫಲತೆಗಳೆಲ್ಲವೂ ಅಸಫಲ ಎನ್ನಿಸತೊಡಗುವುದೋ ಆಗ ಹುಡುಕಿ ಸದ್ಗುರುವನ್ನು. ಎಂದು ನಿಮ್ಮ ಬುದ್ಧಿಗೆ ನಿಮ್ಮ ಮೂರ್ಖತೆಯ ಅರಿವಾಗುವುದೋ ಅಂದು ಗುರುವನ್ನರಸುತ್ತ ಹೋಗಿ…  ~ ಓಶೋ ರಜನೀಶ್

ನರ ಗುಂಪು ಕುರಿಮಂದೆಯಂತೆ. ಸದ್ಗುರುವು ನಿಮ್ಮನ್ನು ಆ ಗುಂಪಿನಿಂದ ಬೇರ್ಪಡಿಸುತ್ತಾನೆ. ಆತ ನಿಮ್ಮನ್ನು ತಿಳಿವಳಿಕೆಯ ಕಡೆಗೆ ಕರೆದೊಯ್ಯುತ್ತಾನೆ. ಸದ್ಗುರು ನಿಮ್ಮನ್ನು ಶಾಶ್ವತದೊಂದಿಗೆ ಒಂದುಗೂಡಿಸುತ್ತಾನೆ. ಸಮಾಜವು ಸಾಮಯಿಕವಾಗಿದೆ. ಅದು ಕ್ಷಣ ಭಂಗುರ. ಅನುಕ್ಷಣವೂ ಬದಲಾಗುತ್ತಿರುತ್ತದೆ. ಸದ್ಗುರುವು ನಿಮ್ಮನ್ನು ಯಾವುದು ಎಂದಿಗೂ ಬದಲಾಗುವುದಿಲ್ಲವೋ, ಯಾವುದು ಯಾವಾಗಲೂ ಒಂದೇ ರೀತಿ ಇರುತ್ತದೆಯೋ, ಮುಂದೆಯೂ ಹಾಗೆಯೇ ಇರುವುದೋ ಅದರೊಂದಿಗೆ ಜೋಡಿಸುತ್ತಾನೆ. ಕೇವಲಪರಮಾತ್ಮ ಮಾತ್ರ ನಿಮ್ಮ ಆತ್ಯಂತಿಕ ಸ್ವಭಾವ.

ಆದರೆ ಕೆಲವರು ಗುರುವಿನ ಹೊಣೆಗಾರಿಕೆಯನ್ನು, ಆತನ ಜವಾಬ್ದಾರಿಯನ್ನು ಅರಿಯುವಲ್ಲಿ ವಿಫಲರಾಗಿದ್ದಾರೆ. ಅವರು ಗುರುವನ್ನು ಒಬ್ಬ ಸೈಕಾಲಜಿಸ್ಟ್‍ನಂತೆ ನೋಡುತ್ತಾರೆ. ದೇಹ ಅಥವಾ ಮನಸ್ಸಿನ ಅಸ್ವಸ್ಥೆ ಇರುವವರು ಡಾಕ್ಟರ್ ಅಥವಾ ಸೈಕಾಲಜಿಸ್ಟ್ ಬಳಿ ಹೋಗಬೇಕು. ಸ್ವಸ್ಥರಾಗಿರುವವರು ಮಾತ್ರ ಸದ್ಗುರುವಿನ ಬಳಿ ಬರಬೇಕು. ಕೆಲವೊಮ್ಮ ಜನ ನನ್ನ ಬಳಿಗೆ ಬಂದು ತಲೆ ನೋಯುತ್ತಿದೆ, ಹೊಟ್ಟೆ ನೋಯುತ್ತಿದೆ ಇತ್ಯಾದಿಯಾಗಿ ಹೇಳಿಕೊಳ್ಳುತ್ತಾರೆ. ಅಂತಹವರಿಗೆಲ್ಲ ನಾನು ಡಾಕ್ಟರ್ ಬಳಿ ಹೋಗಲು ಹೇಳುತ್ತೇನೆ. ನಾನಿಲ್ಲಿ ಇರುವುದು ಜನರ ಆರೋಗ್ಯವನ್ನು ಸುಧಾರಿಸಲಿಕ್ಕಲ್ಲ. ಅದು ಗುರುವಿನ ಕೆಲಸ ಅಲ್ಲ.

ಎಲ್ಲವೂ ಸರಿಯಾಗಿದ್ದೂ ನಿಮಗೆ ಏನೂ ಸರಿ ಇಲ್ಲವೆನಿಸಿದಾಗ ಗುರುವಿನ ಬಳಿ ಹೋಗಿ. ಧನವಿದ್ದು, ಪದವಿಯಿದ್ದು, ಕೀರ್ತಿಯಿದ್ದು- ಎಲ್ಲ ಇದ್ದಾಗಲೂ ಕೈಗಳಲ್ಲಿ ಬರಿ ಬೂದಿ ಮಾತ್ರವೇ ಇದೆಯೆನ್ನಿಸಿದಾಗ, ಎಲ್ಲ ಸಫಲತೆಗಳ ನಡುವೆಯೂ ಹೃದಯ ಖಾಲಿಖಾಲಿ ಎನ್ನಿಸಿದಾಗ; ಎದೆಯಲ್ಲಿ ಒಂದೇ ಒಂದು ಹೂವು ಅರಳಲಿಲ್ಲ, ಒಂದೇ ಒಂದು ಹಾಡು ಹುಟ್ಟಲಿಲ್ಲ, ಗಂಟಲು ಒಣಗಿ ನಿಂತಿದೆ ಎನ್ನಿಸಿದಾಗ ಗುರುವನ್ನು ಅರಸುತ್ತ ಹೊರಡಿ.

ನಿಮ್ಮ ಬಳಿ ಎಲ್ಲವೂ ಇದ್ದೂ ನಿಮಗೆ ಏನೂ ಇಲ್ಲವೆನಿಸಿದಾಗ… ಆಗ ಸದ್ಗುರುವನ್ನು ಹುಡುಕಿ. ಯಾವತ್ತು ನಿಮ್ಮ ಸಫಲತೆಗಳೆಲ್ಲವೂ ಅಸಫಲ ಎನ್ನಿಸತೊಡಗುವುದೋ ಆಗ ಹುಡುಕಿ ಸದ್ಗುರುವನ್ನು. ಎಂದು ನಿಮ್ಮ ಬುದ್ಧಿಗೆ ನಿಮ್ಮ ಮೂರ್ಖತೆಯ ಅರಿವಾಗುವುದೋ ಅಂದು ಗುರುವನ್ನರಸುತ್ತ ಹೋಗಿ. ಬಗ್ಗಡವೆದ್ದ ಮನಸ್ಸಿಗೆ ಗುರುವೊಂದು ತಿಳಿಗೊಳದಂತೆ. ನೆನಪಿಡಿ. ಅವನು ರೋಗಕ್ಕೆ ಮದ್ದು ನೀಡುವ ಚಿಕಿತ್ಸಕನಲ್ಲ. ಅವನು ಮನಸ್ಸಿನ ಸಮಸ್ಯೆಗಳನ್ನು ಪತ್ತೆ ಹಚ್ಚುವ ಸೈಕಾಲಜಿಸ್ಟ್ ಅಲ್ಲ. ಅವನು ನಿಮ್ಮ ಅಂತರಂಗದ ಬೆಳವಣಿಗೆಗೆ ನೀರೆರೆಯುವ ನಿರಂತರ ಪ್ರವಾಹ ಧಾರೆ. ಗುರುವಿನೊಂದಿಗೆ ನಿಮಗೆ ಇರಬೇಕಾದುದು ಪ್ರೇಮ ಸಂಬಂಧವಷ್ಟೆ. ಗುರುವಿನೊಡನೆ ಉಂಟಾಗುವ ಸಂಬಂಧ ಹೃದಯಕ್ಕೆ ಸಂಬಂಧಿಸಿರುವಂತಹದು. ಅದನ್ನು ಡಾಕ್ಟರರಿಗೆ ಫೀಸ್ ಕೊಟ್ಟು ಮುಗಿಸಿದಂತೆ ಮುಗಿಸಿಕೊಳ್ಳಲು ಬರುವುದಿಲ್ಲ. ನೀವು ಏನೆಲ್ಲವನ್ನು ನೀಡಿದರೂ ಗುರುವಿನ ಋಣದಿಂದ ಮುಕ್ತರಾಗಲಾರಿರಿ.

ಸದ್ಗುರು ಒಂದು ಉತ್ತೇಜಕದಂತೆ. ವೇಗವರ್ಧಕ ಅಥವಾ ಕೆಟಲಿಸ್ಟ್’ನಂತೆ. ಆತನ ಇರುವಿಕೆ ಮಾತ್ರದಿಂದಲೇ ಏನೋ ಒಂದು ಘಟಿಸುತ್ತದೆ. ಏನೋ ಒಂದು ನಿದ್ರೆಯಿಂದ ಎಚ್ಚರಗೊಂಡು ಜಾಗೃತವಾಗುತ್ತದೆ. ಗುರು ಏನನ್ನೂ ಮಾಡುವುದಿಲ್ಲ. ಸೈಕಾಲಜಿಸ್ಟ್‍ಗಳಾದರೆ ನಿಮಗೆ ಏನಾದರೊಂದು ಚಿಕಿತ್ಸೆ ನೀಡುತ್ತಾರೆ. ಆದರೆ ಸದ್ಗುರು ಅಂದರೆ ಸೈಕಾಲಜಿಸ್ಟ್ ಅಲ್ಲ. ಆತ ಏನನ್ನೂ ಮಾಡುವುದಿಲ್ಲ. ಏಕೆಂದರೆ ಎಲ್ಲ ರೀತಿಯ ಕ್ರಿಯೆಗಳನ್ನು ತ್ಯಜಿಸಿಯೇ ಆತ ಗುರುವಾಗಿರುವುದು. ಆತ ತಾನು ಶೂನ್ಯನಾಗಿ, ನಿಮಿತ್ತ ಮಾತ್ರನಾಗಿ, ಪ್ರಭುವನ್ನೇ ಕರ್ತಾ ಎಂದು ನಂಬಿಕೊಂಡಿರುವಂತಹವನು. ಊದುಗೊಳವೆಯಿಂದ ಕೊಳಲಾಗಿ ಮಾರ್ಪಟ್ಟವನು. ಈಗ ಸದ್ಗುರು ಏನನ್ನೂ ಮಾಡುವುದಿಲ್ಲ. ಆದರೆ ಅವನ ಸನಿಹದಲ್ಲಿ ಮಹತ್ತರವಾದುದು ಘಟಿಸುತ್ತದೆ. ಆತನ ಉಪಸ್ಥಿತಿ ಮಾತ್ರದಿಂದಲೇ ನಿಮ್ಮೊಳಗು ನಿಮಗೆ ತೆರೆದುಕೊಳ್ಳುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

2 Responses

Leave a reply to r a patil ಪ್ರತ್ಯುತ್ತರವನ್ನು ರದ್ದುಮಾಡಿ

This site uses Akismet to reduce spam. Learn how your comment data is processed.