ಚೇತನವು ಚೇತನವನ್ನು ಅರಿಯುವ ಪ್ರಕ್ರಿಯೆಯೇ ಧ್ಯಾನ

photoಧ್ಯಾನದ ಅರ್ಥ, ತರಂಗರಹಿತವಾಗುವುದು. ಅಂದರೆ, ಮನಸ್ಸಿನಿಂದ ಹೊರತಾಗಿ ಉಳಿಯುವುದು. ಅಮನಸ್ಕರಾಗುವುದು. ಚೇತನದ ಮೂಲಸ್ವಭಾವವಾದ ನಿಸ್ತರಂಗ ಸ್ಥಿತಿಯನ್ನು ಹೊಂದುವುದು. ನಿಸ್ತರಂಗ ಚೇತನವೇ ನಮ್ಮ ಆತ್ಮ. ಆದ್ದರಿಂದ, ಧ್ಯಾನವು ಅಂತತಃ ಆತ್ಮದರ್ಶನದ ಮಾರ್ಗವಾಗಿದೆ. ಆತ್ಮಸ್ಥಿತಿಯಲ್ಲಿ ನೆಲೆಸುವ ಉಪಾಯವಾಗಿದೆ ~ Whosoever Ji

ನೀವು ಧ್ಯಾನ ಮಾಡುತ್ತಿದ್ದೀರಿ ಎಂದಾದರೆ, ಇಲ್ಲಿ ಯಾವ ‘ನಾನು’ ಕೂಡ ಧ್ಯಾನ ಮಾಡುತ್ತಿಲ್ಲ. ‘ನಾನು’ ಧ್ಯಾನ ಮಾಡುವುದು ಸಾಧ್ಯವೇ ಇಲ್ಲ. ಏಕೆಂದರೆ ನೆರಳು ತನ್ನ ಮೂಲವನ್ನು ಅರಿಯವುದು ಸಾಧ್ಯವಿಲ್ಲ. ಅಲೆಯು ಸಾಗರವನ್ನು ತಿಳಿಯುವುದು ಸಾಧ್ಯವಿಲ್ಲ. ಧ್ಯಾನದಲ್ಲಿ ‘ನಾನು’ ಎಂಬುದು ಲುಪ್ತವಾಗಿ ಹೋಗಿರುತ್ತದೆ. ಆಗ ಉಳಿಯುವುದು ‘ಚೇತನ’ ಮಾತ್ರವೇ.

ಇಲ್ಲಿ ಒಂದು ಮಾತು ನೆನಪಿಟ್ಟುಕೊಳ್ಳಬೇಕು. ಧ್ಯಾನವು ಮಾಡುವಂತಹ ಕ್ರಿಯೆಯಲ್ಲ. ಅದು ‘ಇರುವ’ ಮತ್ತು ‘ಕಾಯ್ದುಕೊಳ್ಳುವ’ ಒಂದು ಪ್ರಕ್ರಿಯೆ. ಸ್ಥೂಲಸೂಕ್ಷ್ಮಗಳ ಎಲ್ಲ ಚಟುವಟಿಕೆಗಳಿಂದಲೂ ಹೊರತಾಗುವ ಪ್ರಕ್ರಿಯೆ. ಈಗ ಧ್ಯಾನ ಮಾಡುವುದರ ಅರ್ಥ, ಚೇತನವು ಸ್ವಯಮಿಕೆಗೆ ಮರಳುವುದು ಎಂದಾಯ್ತು. ತನ್ನನ್ನು ತಾನು ತಿಳಿಯುವುದು ಎಂದಾಯ್ತು.

ಚೇತನವು ಚೇತನವನ್ನು ಅರಿಯುವ ಪ್ರಕ್ರಿಯೆಯೇ ಧ್ಯಾನ. ಚೇತನವು ತನ್ನನ್ನು ತಾನು ಅರಿತುಕೊಳ್ಳಲು ತನ್ನ ಮೂಲಕವೇ ಧ್ಯಾನಧಲ್ಲಿ ತೊಡಗುತ್ತದೆ. ಇಲ್ಲಿ ಧ್ಯಾನವು ಮತ್ಯಾವುದೋ ವಸ್ತುವಿನ ಕುರಿತು ನಡೆಯುವುದಿಲ್ಲ. ತನ್ನ ಕುರಿತೇ ನಡೆಯುತ್ತದೆ. ಧ್ಯಾನ ಪ್ರಕ್ರಿಯೆಯ ಬಗ್ಗೆ ಮಾತಾಡುವಾಗ ಭಾಷೆಯ ಅನುಕೂಲಕ್ಕಾಗಿ ‘ಮಾಡುತ್ತೇನೆ’ ಎಂದು ಬೇಕಾದರೆ ಹೇಳಿಕೊಳ್ಳಿ. ವಸ್ತುತಃ ಅದು ಸಾಧ್ಯವಾಗುವುದಿಲ್ಲ. ಧ್ಯಾನವು ಘಟಿಸುತ್ತದೆ. ಅದನ್ನು ಮಾಡಲಾಗುವುದಿಲ್ಲ. ಚೇತನವು ಸ್ವಯಂಲೀನವಾದಾಗ ಧ್ಯಾನ ಘಟಿಸುತ್ತದೆ.
ಮತ್ತೊಂದು ಮಾತು: ದೇಹ – ಚೇತನವು ಯಾವತ್ತೂ ಸ್ಥಿರವಾಗಿರುವುದಿಲ್ಲ. ಅದು ಅದರ ಸ್ವಭಾವವಲ್ಲ. ಸದಾ ಗತಿಶೀಲವಾಗಿರುವುದು ದೇಹ – ಚೇತನದ ಸ್ವಭಾವ. ದೇಹಭಾವದ ಉದಯವಾದ ನಂತರ ಇಂದ್ರಿಯಗಳ ಮೂಲಕ ಚೇತನವು ಸೂಚನೆಗಳನ್ನು ಪಡೆಯತೊಡಗುತ್ತದೆ. ಈ ನಿರಂತರ ಸೂಚನೆಗಳ ರವಾನೆಯಿಂದ ಚೇತನದಲ್ಲಿ ತರಂಗಗಳು ಮೂಡತೊಡಗುತ್ತವೆ. ಈ ತರಂಗ ಅಥವಾ ಏಳುಬೀಳಿನ ಅಲೆಗಳೇ ಮನಸ್ಸು ಎಂದು ಕರೆಯಲ್ಪಡುವುದು.

ಧ್ಯಾನದ ಅರ್ಥ, ತರಂಗರಹಿತವಾಗುವುದು. ಅಂದರೆ, ಮನಸ್ಸಿನಿಂದ ಹೊರತಾಗಿ ಉಳಿಯುವುದು. ಅಮನಸ್ಕರಾಗುವುದು. ಚೇತನದ ಮೂಲಸ್ವಭಾವವಾದ ನಿಸ್ತರಂಗ ಸ್ಥಿತಿಯನ್ನು ಹೊಂದುವುದು. ನಿಸ್ತರಂಗ ಚೇತನವೇ ನಮ್ಮ ಆತ್ಮ. ಆದ್ದರಿಂದ, ಧ್ಯಾನವು ಅಂತತಃ ಆತ್ಮದರ್ಶನದ ಮಾರ್ಗವಾಗಿದೆ. ಆತ್ಮಸ್ಥಿತಿಯಲ್ಲಿ ನೆಲೆಸುವ ಉಪಾಯವಾಗಿದೆ.

ವಿಚಾರಗಳಿಲ್ಲದ ಚೇತನವು ಗಂಭೀರ ಸಾಗರದಂತೆ ಇರುತ್ತದೆ. ವಿಚಾರರಹಿತರಾದಾಗ ನಿಮಗೆ ನಿಮ್ಮ ಚೇತನದ ಆಳ ಅಗಲಗಳು ಗೋಚರವಾಗುತ್ತವೆ. ಅದರ ಅನುಭವ ದಕ್ಕುತ್ತದೆ. ಈಗ ನಮಗೆ ದೇಹದ ಇರುವಿನ ಅರಿವು ಉಂಟಾಗುತ್ತಿದೆ. ನಮ್ಮ ಅಸ್ತಿತ್ವದ ಅರಿವು ಉಂಟಾಗುತ್ತಿದೆ. ನಾವೀಗ ದೇಹಭಾವದಲ್ಲಿದ್ದೇವೆ. ಏಕೆಂದರೆ ಇಂದ್ರಿಯಗಳು ಚೇತನಕ್ಕೆ ಸೂಚನೆಗಳನ್ನು ರವಾನಿಸುತ್ತಿವೆ ಮತ್ತು ಅವುಗಳನ್ನು ಸ್ವೀಕರಿಸಿದ ಪರಿಣಾಮವಾಗಿ ಅದರಲ್ಲಿ ಅಲೆಗಳು ಎದ್ದು ಮನಸ್ಸನ್ನು ಜಾಗೃತಗೊಳಿಸುತ್ತಿವೆ. ಚೇತನವು ಈ ಸೂಚನೆಗಳನ್ನು ದೇಹದಿಂದ, ಇಂದ್ರಿಯಗಳಿಂದ ಸ್ವೀಕರಿಸದಂತೆ ತನ್ನಲ್ಲಿ ತಾನು ಮಗ್ನವಾಗುವುದೆ ಧ್ಯಾನ. ಈ ಅವಸ್ಥೆಯಲ್ಲಿ ಚೇತನವು ಸಂಪೂರ್ಣ ಶಾಂತ ಸ್ಥಿತಿಯನ್ನು ಹೊಂದಿರುತ್ತದೆ.

ಧ್ಯಾನದ ಅರ್ಥ – ಚೇತನದ ಮೂಲಕ, ಚೇತನದ ಕುರಿತಾಗಿ ಚೇತನವು ಮಾಡುವಂಥ ಧ್ಯಾನ. ಆದ್ದರಿಂದ ‘ನಾನು’ ಧ್ಯಾನ ಮಾಡುತ್ತಿದ್ದೇನೆ ಅನ್ನುವ ಗೋಜಲಿಗೆ ಬೀಳಬೇಡಿ. ‘ನಾನು’ ಧ್ಯಾನ ಮಾಡುವುದೇ ಹೌದಾದರೆ, ಅನಂತರದಲ್ಲಿ ‘ನಾನು’ ಮಾತ್ರವೇ ಗಟ್ಟಿಯಾಗಿ ನೆಲೆಯೂರುತ್ತ ಹೋಗುತ್ತದೆ.
ಧ್ಯಾನಿಗಳನ್ನು ಗಮನಿಸಿ ನೋಡಿ. ಅವರು ಇತರರಿಗಿಂತ ಭಿನ್ನವಾಗಿ ನಿಂತಿರುತ್ತಾರೆ. ಯಾಕೆ? ಯಾಕೆಂದರೆ ಅವರು ತಮ್ಮನ್ನು ತಾವು ಇತರರಿಗಿಂತ ಭಿನ್ನವೆಂದು ಭಾವಿಸುತ್ತಾರೆ.

ಬೀಗವನ್ನು ತೆರೆಯುವಂಥ ಎಲ್ಲ ಕೀಲಿಕೈಗಳನ್ನೂ ನಾನು ಹುಡುಕಿಕೊಂಡಿದ್ದೇನೆ. ನಿನಗೆ ಬೇಕಿದ್ದಲ್ಲಿ ನನ್ನಿಂದ ಚಾವಿಯನ್ನು ಪಡೆದುಕೋ, ನಾನು ಕೊಡಲು ತಯಾರಿದ್ದೇನೆ. ಆದರೆ ಹಾಗೆ ಬೀಗವನ್ನು ತೆರೆದುಕೊಳ್ಳಲು ಯಾರೂ ಸಿದ್ಧವೇ ಇಲ್ಲ! ನನಗೆ ಯಾರೂ ಗ್ರಾಹಕರೇ ಇಲ್ಲ!!
ಇಷ್ಟೆಲ್ಲ ಹೇಳಿದನಂತರ ಒಂದು ಮಾತು ಸ್ಪಷ್ಟವಾಗುತ್ತದೆ; ಧ್ಯಾನದಲ್ಲಿ ‘ನಾನು’ ಎನ್ನುವಂಥದ್ಯಾವುದೂ ಇರುವುದಿಲ್ಲ. ಚೇತನವೇ ಸ್ವಯಂ ಧ್ಯಾನ ನಡೆಸುವುದು. ಹುಡುಕಾಟ ಎನ್ನುವುದು ಚೇತನದ ಅಭಿನ್ನ ಅಂಗ. ಚೇತನವು ತನ್ನದೇ ಸ್ರೋತವನ್ನು ಹುಡುಕಿಕೊಂಡು ಸಾಗುತ್ತದೆ. ತಾನು ಯಾರು, ಏನಾಗಿದ್ದೇನೆ ಎಂದು ಅರಿಯುವ ಯತ್ನ ನಡೆಸುತ್ತದೆ. ಈ ಪ್ರಕ್ರಿಯೆಯೇ ಧ್ಯಾನ.
ಯಾವತ್ತಿಗೆ ಚೇತನವು ನಾನು ಯಾರೆಂದು ಕಂಡುಕೊಳ್ಳುತ್ತದೆಯೋ, ಅವತ್ತಿಗೆ ಅದು ಸಂತೃಪ್ತವಾಗುತ್ತದೆ. ಹುಡುಕಾಟವು ಅಂತ್ಯಗೊಳ್ಳುತ್ತದೆ. ಅನಂತರದಲ್ಲಿ ಶುದ್ಧ ಜೀವನದ ಆರಂಭವಾಗುತ್ತದೆ. ಆಗ ಜೀವನವು ಸಹಜವೂ ಶಾಂತವೂ ಆಗುತ್ತದೆ. ಈ ತಿಳಿವಿನ ಜೀವನವು ಪ್ರಜ್ಞಾಪೂರ್ವಕವಾಗಿರುತ್ತದೆ.

1 Comment

  1. ಯಜ್ಞಾತ್ವಾ ಸರ್ವಮಿದ೦ ವಿಜ್ಞಾತ೦ ಭವತಿ — || ಯಾವುದನ್ನು ಅರಿತುಕೊಂಡ ಮೇಲೆ – ಉಳಿದೆಲ್ಲವುಗಳ ಅರಿವೂ ಸ್ವಯಂ ವೇದ್ಯವೂ – ಅದನ್ನು ಹೇಳಿದಿರಿ — “ಧನ್ಯವಾದಗಳು” – ||

Leave a Reply to Edurkala Ishwar Bhat -Cancel reply